ಗುಬ್ಬಿ
ದೇಶಾದ್ಯಾಂತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ಗೆ ಪೂರಕವಾಗಿ ಇದೇ ತಿಂಗಳ 27ರ ಸೋಮವಾರದಂದು ಗುಬ್ಬಿ ಪಟ್ಟಣದಲ್ಲಿಯೂ ಸಹ ಬಂದ್ ಮಾಡಲಾಗುವುದು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಅವರು ಹೇಳಿದರು. ಶನಿವಾರ ರೈತ ಸಂಘದ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರ ಬದುಕನ್ನು ಅತಂತ್ರ ಗೊಳಿಸಿವೆ. ವಿರೋಧಿ ಕೃಷಿ ಕಾಯ್ದೆ, ವಿದ್ಯುತ್ ಮಸೂದೆ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರೈತರು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳನ್ನು ಕೂಡಿಕೊಂಡು ಬಂದ್ ಆಚರಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನಾದ್ಯಂತ ಈ ಬಗ್ಗೆ ರೈತ ಸಂಘಟನೆಯ ಸದಸ್ಯರು ಮನೆಮನೆಗೂ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಪಟ್ಟಣದಲ್ಲಿರುವ ಎಲ್ಲಾ ಸಂಘಟನೆಗಳು ಈ ಬಂದ್ಗೆ ಸಹಕಾರ ನೀಡುವಂತೆ ಅವರು ಕರೆ ನೀಡಿದರು. ಇದು ಕೇವಲ ರೈತರಿಗೆ ಸೀಮಿತವಾಗಿರುವ ಬಂದ್ ಆಗಿರದೆ, ಜನಸಾಮಾನ್ಯರ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು. ರಾಷ್ಟ್ರ ಹಾಗೂ ರಾಜ್ಯ ಸಮಸ್ಯೆಗಳ ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಹೋರಾಟ ಮಾಡಲಾಗುವುದು ಎಂದರು.
ಸರ್ಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಭಟನೆ : ತಾಲ್ಲೂಕಿನಲ್ಲಿ ಮುಖ್ಯವಾಗಿ ಪೂರ್ಣಗೊಳ್ಳಬೇಕಾಗಿರುವ ನೀರಾವರಿ ಯೋಜನೆಗಳು ಹಾಗೂ ಹೆಚ್ಚುತ್ತಿರುವ ಭ್ರಷ್ಟಾಚಾರದ ವಿರುದ್ಧ ಎಚ್ಚರಿಕೆ ನೀಡಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ ಅವರು ಕೊರೋನ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ್ದ ವಿಶೇಷÀ ಅನುದಾನ ಎಲ್ಲರಿಗೂ ತಲುಪಿಲ್ಲ. ಕಾರ್ಮಿಕರಿಗೆ ನೀಡಿದ್ದ ಪಡಿತರ ಕಿಟ್ನಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆಯಿದೆ. ಇವೆಲ್ಲವನ್ನೂ ಖಂಡಿಸಿ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಹನುಮಂತರಾಜು, ಸುರೇಶ್, ಗಂಗಣ್ಣ, ಹಮಾಲಿ ಸಂಘದ ಚಂದ್ರಪ್ಪ, ದಲಿತ ಮುಖಂಡರಾದ ನಾಗರಾಜು, ನಾಗಭೂಷಣ್, ಕೀರ್ತಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾಪೆರ್ರೇಟ್ ಪರ ಕೇಂದ್ರದ ಆಡಳಿತ : ಪ್ರಾಂತ ರೈತ ಸಂಘದ ಅಧ್ಯಕ್ಷ ಅಜ್ಜಪ್ಪನವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತಿಗೂ ಹಾಗೂ ಕಾರ್ಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಕೇವಲ ಕಾಪೆರ್ರೇಟ್ ಕಂಪನಿಗಳ ಪರವಾಗಿ ಆಡಳಿತ ನಡೆಸುತ್ತಾ, ಜನಸಾಮಾನ್ಯರ ಶೋಷÀಣೆ ನಡೆಸುತ್ತಿದ್ದಾರೆ. ರೈತ ಹಾಗೂ ಶೋಷಿತರ ಪರ ಚಿಂತಿಸದೆ ಕೇವಲ ಮಾತಿನಲ್ಲಿಯೇ ಮೋಡಿ ಹಾಕುತ್ತಾ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿರುವುದಲ್ಲದೆ ಸಾಮಾನ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ಬಂದ್ ಮಾಡಲಾಗುತ್ತಿದ್ದು, ತಾಲ್ಲೂಕಿನ ಎಲ್ಲಾ ವರ್ಗದ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.