ರಾಯಚೂರು
ಒಂದೇ ಊರಿನ ಮೂವರು ಯುವತಿಯರು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ಭಾನುವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಕೃಷಿ ಕೆಲಸ ಮಾಡಿ ಮನೆ ಸೇರಬೇಕಿದ್ದವರು ಪೋಷಕರ ನೆಮ್ಮದಿಯನ್ನೇ ಕಸಿದುಕೊಂಡಿದ್ದರು. ಈ ಪೈಕಿ 18 ವರ್ಷದ ರೇಣುಕಾ ಮೃತಪಟ್ಟಿದ್ದರೆ, ತಿಮ್ಮಕ್ಕ ಹಾಗೂ ಮತ್ತೊಬ್ಬ ಅಪ್ರಾಪ್ತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ ಎಂಬುದೇ ನಿಗೂಢವಾಗಿತ್ತು. ಸಂಚಲನ ಸೃಷ್ಟಿಸಿದ್ದ, ಪ್ರಕರಣಕ್ಕೆ ಇದೀಗ ಪೊಲೀಸ್ ತನಿಖೆ ವೇಳೆ ದೊಡ್ಡ ತಿರುವು ದೊರೆತಿದೆ.
ದೇವದುರ್ಗ ಪೊಲೀಸರ ತನಿಖೆ ವೇಳೆ ದುರಂತದ ಹಿಂದಿನ ಲವ್ ಸ್ಟೋರಿ ಬಯಲಾಗಿದೆ. ಈ ಪ್ರೇಮ ಪ್ರಕರಣವೇ ಮೂವರು ಯುವತಿಯರ ಬಾಳಿಗೆ ಎರವಾಗಿದ್ದು, ಮೂವರೂ ಆತ್ಮಹತ್ಯೆಗೆ ಯತ್ನಿಸಲು ಕಾರಣವಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಮೂವರ ಹಿಂದೆ ಒಂದೊಂದು ಲವ್ ಸ್ಟೋರಿ ಇತ್ತು. ಮೃತ ರೇಣುಕಾ, ತಿಮ್ಮಕ್ಕ ಹಾಗೂ ಅಪ್ರಾಪ್ತೆ ಮೂವರೂ ಸಂಬಂಧಿಕರು. ಮೂವರು ಓಬ್ಬೊಬ್ಬ ಯುವಕನ ಜೊತೆ ಪ್ರಣಯದಲ್ಲಿದ್ದರು. ಈ ಮಧ್ಯೆ ರೇಣುಕಾಗೆ ಬೇರೋಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥವಿತ್ತು. ಹೀಗಾಗಿ ರೇಣುಕಾ ಒಳಗೊಳಗೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಒಂದು ವೇಳೆ, ಈ ಬಗ್ಗೆ ಹಿರಿಯರು ಪ್ರಶ್ನೆ ಮಾಡಿದರೆ ಮೂವರ ಪ್ರೇಮ ಪ್ರಕರಣವೂ ಬಯಲಾಗತ್ತದೆ ಎಂದು ಅವರು ಆತಂಕಗೊಂಡಿದ್ದರು.








