ತುಮಕೂರು:
ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್ ಸಾವು ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಇದೇ ನೋವಲ್ಲಿ ಆಘಾತಕ್ಕೊಳಗಾದ ಮನೋಜ್ ಅವರ ಅಜ್ಜಿ ದೇವಿರಮ್ಮ (70) ಕೂಡ ಇಂದು ಕುಣಿಗಲ್ ತಾಲೂಕಿನ ನಾಗಸಂದ್ರದಲ್ಲಿ ಮೃತಪಟ್ಟಿದ್ದಾರೆ.
ಮೊಮ್ಮಗನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಅಜ್ಜಿ: ಆರ್ಸಿಬಿ 18 ವರ್ಷದ ಬಳಿಕ ಐಪಿಎಲ್ ಕಪ್ ಗೆದ್ದ ಹಿನ್ನೆಲೆ ವಿಜಯೋತ್ಸವ ಆಚರಿಸಲು ಆಯೋಜಿಸಿದ್ದ ಕಾರ್ಯಕ್ರಮ ನೋಡಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಕ ತೆರಳಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮನೋಜ್ ಸೇರಿದಂತೆ 11 ಜನ ಸಾವನ್ನಪ್ಪಿ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾಲ್ತುಳಿತದಿಂದ ಮೃತಪಟ್ಟವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮನೋಜ್ ಅವರ ತಾಯಿಯ ತಾಯಿಯಾದ ದೇವಿರಮ್ಮ ತೀವ್ರ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಮನೋಜ್ ಕುಟುಂಬಕ್ಕೆ ಪರಿಹಾರದ ಚೆಕ್: ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಹಣದ ಚೆಕ್ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭಾನುವಾರ ಹಸ್ತಾಂತರಿಸಿದರು. ಚೆಕ್ ಪಡೆದು ಮಾತನಾಡಿದ ಮೃತ ವಿದ್ಯಾರ್ಥಿ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್.. ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೋನು ಒಬ್ಬನೇ ಮಗ ಎಂದು ಅಳಲು ತೋಡಿಕೊಂಡರು.
25 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದಾರೆ, ಈ ಹಣ ನನ್ನ ಉಪಯೋಗಕ್ಕೆ ನಾನೇನು ಮಾಡಿಕೊಳ್ಳಲ್ಲ. ನನ್ನ ಮಗಳು, ಅವರ ಅಮ್ಮನ ಅಕೌಂಟ್ಗೆ ಹಾಕುತ್ತೇನೆ. ಅವರ ಜೀವನಾಂಶಕ್ಕೆ ಹಣ ಇಡುತ್ತೇನೆ ಎಂದು ಹೇಳಿದರು.
ಇನ್ನೊಂದೆರೆಡು ವರ್ಷಕ್ಕೆ ಮಗನ ಓದು ಮುಗಿಯುತಿತ್ತು. ಕೆಲಸಕ್ಕೂ ಸಹ ಸೇರಿ ನಮಗೆ ಬೆನ್ನೆಲುಬಾಗುತ್ತಿದ್ದ. ವಿದೇಶಕ್ಕೆ ಹೋಗುವ ಆಸೆ ಹೊಂದಿದ್ದ. ಅವಕಾಶ ಸಿಕ್ಕರೆ ಹೋಗು ಎಂದು ನಾನು ಹೇಳಿದ್ದೆ. ಅವನು ನಮ್ಮೆ ಜೊತೆಯಲ್ಲಿ ಇದ್ದಿದ್ದರೆ ಸಾಕಾಗುತಿತ್ತು ಎಂದು ಮೃತನ ತಂದೆ ನಿನ್ನೆ ಭಾವುಕರಾಗಿದ್ದರು.
ಮಗನ ಕಳೆಕೊಂಡ ತಂದೆಯ ಮನಕಲಕುವ ವಿಡಿಯೋ: ಇನ್ನು ಹಾಸನ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ ಕೂಡ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇವರ ತಂದೆ, ಮಗನ ಸಮಾಧಿ ಮೇಲೆ ಗೋಳಾಡುತ್ತಿರುವ ವಿಡಿಯೋ ಮನಕಲಕುವಂತಿದೆ.ಮೃತ ಇಂಜಿನಿಯರಿಂಗ್ ವಿದ್ಯಾರ್ಥಿ ಭೂಮಿಕ್ನ ಮೂರನೇ ದಿನದ ಹಾಲು ತುಪ್ಪದ ಕಾರ್ಯದ ವೇಳೆ ತಂದೆ ಡಿ.ಟಿ. ಲಕ್ಷ್ಮಣ್, ಮಗನ ಸಮಾಧಿಯ ಮೇಲೆ ಮಲಗಿ ಗೋಳಾಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೋಡುಗರ ಮನಕಲಕುವಂತಿದೆ.
