ಬೆಂಗಳೂರು :
ಮೊದಲ ವಾರ ಕೊಂಚ ಸೈಲೆಂಟ್ ಆಗಿದ್ದ ಬಿಗ್ ಬಾಸ್ ಕನ್ನಡ 12ರ ಮನೆ ಎರಡನೇ ವಾರ ಅಲ್ಲೋಲ-ಕಲ್ಲೋಲವಾಗಿದೆ. ಈ ವಾರ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಕಾಕ್ರೋಚ್ ಸುಧಿ ಅಸುರಾಧಿಪತಿಯಾಗಿ ಮಿಂಚಿದರು. ಇವರಿಗೆ ಅರಸ, ಅರಸಿಯರನ್ನೂ ನೀಡಲಾಯಿತು. ಇದೀಗ ವಾರಾದ ಅಂತ್ಯದ ವೇಳೆಗೆ ಮನೆಯಲ್ಲಿ ಮೊದಲ ಬಾರಿ ಈ ವಾರದ ಕಳಪೆ ಹಾಗೂ ಅತ್ಯುತ್ತಮ ಕುರಿತು ಚರ್ಚೆ ನಡೆದಿದೆ. ಇದರಲ್ಲಿ ಇಬ್ಬರು ಕಳಪೆ ಆಗಿ ಆಯ್ಕೆ ಆಗಿದ್ದಾರೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ.
ಒಬ್ಬ ಒಂಟಿ ಅಥವಾ ಜಂಟಿಯನ್ನು ಕಳಪೆ ಪ್ರದರ್ಶನ ನೀಡಿದವರೆಂದು ಘೋಷಿಸಿ ಜೈಲಿಗೆ ಕಳುಹಿಸಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದ್ದಾರೆ. ಅಶ್ವಿನಿ ಗೌಡ ಅವರು, ನಾನು ರಾಶಿ ಹಾಗೂ ಮಂಜು ಭಾಷಿಣಿ ಅವರಿಗೆ ಕಳಪೆ ನೀಡುತ್ತೇನೆ, ಮನೋರಂಜನೆ ಅಂತ ಎಲ್ಲೂ ಅವರು ಕೊಡಲಿಲ್ಲ.. ಅವರು ಕಳೆದು ಹೋಗಿದ್ರು ಎಂದು ಹೇಳಿದ್ದಾರೆ. ಮನೆಯವರ ಹೆಚ್ಚಿನ ಕಳಪೆ ವೋಟ್ ಇವರಿಗೇ ಬಿದ್ದಿದೆ. ಹೀಗಾಗಿ ಮಂಜು-ರಾಶಿ ಕಳಪೆ ಪಟ್ಟ ತೊಟ್ಟು ಜೈಲಿಗೆ ತೆರಳಿದ್ದಾರೆ. ಅತ್ಯುತ್ತಮ ಯಾರು ಎಂಬುದನ್ನು ರಿವೀಲ್ ಮಾಡಲಾಗಿಲ್ಲ.
ಬಿಗ್ ಬಾಸ್ ಮನೆಯೊಳಗೆ ಡಾಗ್ ಸತೀಶ್ ಹಾಗೂ ಚಂದ್ರಪ್ರಭಾ ನಡುವೆ ಬೆಂಕಿ ಹತ್ತಿಕೊಂಡಿದೆ. ಅಸಲಿಗೆ ಇವರಿಬ್ಬರು ಜಂಟಿಗಳು, ಜೊತೆಯಾಗಿಯೇ ಇರಬೇಕು. ಆದರೆ, ಚಂದ್ರಪ್ರಭಾ ಅವರಿಗೆ ಸತೀಶ್ ಅವರನ್ನು ಸಹಿಸಿಕೊಂಡು ಪಿತ್ತ ನೆತ್ತಿಗೇರಿದೆ. ಇದು ಜಗಳಕ್ಕೆ ಕಾರಣವಾಗಿದೆ. ಸತೀಶ್ ಅವರು ವಾಶ್ ರೂಮ್ ಹೋಗಿ ತುಂಬಾ ಹೊತ್ತಾದರೂ ಬಂದಿಲ್ಲ. ಆಗ ಹೊರಗಿನಿಂದ ಚಂದ್ರ ಅವರು, ಸತೀಶಣ್ಣ ನಿನ್ನ ಕಾಲು ಹುಡ್ಕೊತೀನಿ.. ಬಾ ಎಂದು ಹೇಳಿದ್ದಾರೆ. ಎಷ್ಟು ಹೊತ್ತು ಕಾದರೂ ಅವರು ಬಂದಿಲ್ಲ.
ನಿಯಮದ ಪ್ರಕಾರ ಜಂಟಿ ಸದಸ್ಯರು ತಮ್ಮ ಪಾರ್ಟ್ನರ್ ಇಲ್ಲದೇ ಎಲ್ಲೂ ಹೋಗುವಂತಿಲ್ಲ. ಆದರೆ, ಚಂದ್ರ ಅವರು ಕೋಪಗೊಂಡು ಸತೀಶ್ ಅವರನ್ನು ಹಾಗೂ ಬೆಲ್ಟ್ ಅನ್ನು ಬಿಟ್ಟು ಒಬ್ಬರೇ ಕಿಚನ್ಗೆ ಬಂದಿದ್ದಾರೆ. ಇದನ್ನ ಕಂಡು ಅಸುರಾಧಿಪತಿ ಸುಧಿ, ಹಾಗೆಲ್ಲ ಬರಬಾರದು.. ರೂಲ್ಸ್ ಬ್ರೇಕ್ ಆಗುತ್ತೆ ಎಂದಿದ್ದಾರೆ. ಇದರಿಂದ ರೊಚ್ಚಿ ಗೆದ್ದ ಚಂದ್ರ, ಅವರು ಎಷ್ಟು ಹೊತ್ತು ಆದ್ರೂ ಹೊರಗಡೆ ಬರಲ್ಲ.. ನನ್ಗೆ ನೀರು ಕುಡಿಬೇಕು ಅಂದ್ರೂ ನಾನು ಬರೋ ಹಂಗೆ ಇಲ್ವಾ ಎಂದು ಕೋಪದಲ್ಲಿ ಕೈಯಲ್ಲಿದ್ದ ನೀರಿನ ಗ್ಲಾಸ್ ಅನ್ನು ಕೆಳಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ.
ನಂತರ ಬಾತ್ ರೂಮ್ ಏರಿಯಾದಲ್ಲೇ ಚಂದ್ರಪ್ರಭಾ-ಸತೀಶ್ ಹಾಗೂ ಧನುಷ್ ನಡುವೆ ಜಗಳ ನಡೆದಿದೆ. ಧನುಷ್ ಅವರು ಸತೀಶ್ ಮೇಲೆ ರೇಗಾಡುತ್ತ ಕೈ-ಕೈ ಮಿಲಾಯಿಸಲು ಮುಂದಾಗಿದ್ದಾರೆ. ಈ ಜಗಳ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಇಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
