ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟೀಸ್ ಜಾರಿ…..!

ಬೆಂಗಳೂರು:

   ನಟ ದರ್ಶನ್ ಮತ್ತು ಗ್ಯಾಂಗ್ ಸೇರಿಕೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯು ಚುರುಕುಗೊಂಡಿದ್ದು, ಈ ನಡುವಲ್ಲೇ ಹತ್ಯೆಯಾದ ಸ್ಥಳವಾದ ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ.

   ಆರ್‌.ಆರ್‌.ನಗರದ ಪಟ್ಟಣಗೆರೆ ಮುಖ್ಯ ರಸ್ತೆಯ ಹೆಮ್ಮಿಗೆಪುರದಲ್ಲಿರುವ ಶೆಡ್‌ ಮೇಲಿನ ಆಸ್ತಿ ತೆರಿಗೆ ಪಾವತಿಸುವಂತೆ ಜಯಣ್ಣ ಅವರಿಗೆ ಬಿಬಿಎಂಪಿ ನೋಟಿಸ್​ ಜಾರಿ ಮಾಡಿದೆ.

   ಪಟ್ಟಣಗೆರೆ ಶೆಡ್ ಮಾಲೀಕ ಕೆ ಜಯಣ್ಣ ಅವರು ನಿಗದಿಯ ಜಾಗಕ್ಕೆ ಪಾಲಿಕೆಗೆ ಆಸ್ತಿ ತೆರಿಗೆಗೆ ಪಾವತಿಸಿಲ್ಲ. ಈ ಹಿನ್ನೆಲೆ ಆರ್ ಆರ್ ನಗರ ವಲಯ ಸಹಾಯಕ ಕಂದಾಯ ಅಧಿಕಾರಿ ಕೆ ಜಯಣ್ಣಗೆ ನೋಟೀಸ್ ಜಾರಿ ಮಾಡಿದ್ದಾರೆ. 

   2008ರಿಂದ ಈ ಸ್ವತ್ತಿಗೆ ಇದುವರೆಗೂ ಕೂಡ ಆಸ್ತಿ ತೆರಿಗೆ ಪಾವತಿಯಾಗಿಲ್ಲ. ಈ ಹಿನ್ನೆಲೆ 15 ದಿನಗಳ ಅವಧಿಯ ಒಳಗಾಗಿ ಸಂಬಂಧಪಟ್ಟ ದಾಖಲೆ ಹಾಗೂ ಕಾರಣ ನೀಡುವಂತೆ ನೋಟೀಸ್ ನೀಡಿದ್ದಾರೆ.

   ಕಂದಾಯ ನಿರೀಕ್ಷಕರು ಜಯಣ್ಣ ಅವರಿಗೆ ಖುದ್ದಾಗಿ ನೋಟಿಸ್ ನೀಡಿದ್ದು, ಅವರಿಂದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

   ಈ ಜಮೀನು ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, 2009ರಿಂದ ಅನ್ವಯವಾಗುವ ತೆರಿಗೆಯನ್ನು ಪಾಲಿಕೆ ನಿಯಮಗಳ ಪ್ರಕಾರ ಸಂಗ್ರಹಿಸಲಾಗುವುದು ಎಂದು ಬಿಬಿಎಂಪಿಯ ಕೆಂಗೇರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ