ಶ್ರೀರಾಮನ ಅವಹೇಳನ ಆರೋಪ: ಪ್ರಕರಣದಲ್ಲಿ ಲೇಖಕ ಭಗವಾನ್‌ ಖುಲಾಸೆ

ಬೆಂಗಳೂರು:

    ಶ್ರೀರಾಮನ ಅವಹೇಳನ  ಮಾಡಲಾಗಿದೆ ಎಂದು ದಾಖಲಿಸಲಾಗಿರುವ ಪ್ರಕರಣದಲ್ಲಿ ಲೇಖಕ ಕೆ.ಎಸ್ ಭಗವಾನ್‌  ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು (Criminal Case) ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ. ‘ರಾಮ ಮಂದಿರ ಏಕೆ ಬೇಡ’ ಎಂಬ ತಮ್ಮ ಪುಸ್ತಕದಲ್ಲಿ ಶ್ರೀರಾಮನನ್ನು ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದು, ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ವಕೀಲೆ ಮೀರಾ ರಾಘವೇಂದ್ರ ಎಂಬವರು ಆರೋಪಿಸಿ ಕೋರ್ಟ್‌ ಮೊರೆ ಹೋಗಿದ್ದರು.

    ಮೀರಾ ರಾಘವೇಂದ್ರ ಅವರು ಐಪಿಸಿ ಸೆಕ್ಷನ್‌ 298 ಮತ್ತು 505ರ ಅಡಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 37ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಂ. ಸೈಯದ್‌ ಅರಾಫತ್‌ ಇಬ್ರಾಹಿಂ ಅವರು, ಭಗವಾನ್‌ ಅವರನ್ನು ಖುಲಾಸೆಗೊಳಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಇಂತಹುದೇ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯ ಇತ್ತಿಚೆಗೆಷ್ಟೇ ಕೆ.ಎಸ್ ಭಗವಾನ್ ಅವರನ್ನು ಖುಲಾಸೆಗೊಳಿಸಿತ್ತು. ಎರಡೂ ಪ್ರಕರಣಗಳಲ್ಲಿ ಹಿರಿಯ ವಕೀಲ ಸಿ.ಎಚ್ ಹನುಮಂತರಾಯ ಅವರು ಭಗವಾನ್‌ ಪರ ವಾದ ಮಂಡಿಸಿದ್ದರು.

   ಇದಕ್ಕೂ ಮೊದಲು, ಮೀರಾ ಅವರ ವಿರುದ್ಧ ಭಗವಾನ್‌ ಅವರು ದಾಖಲಿಸಿದ್ದ ದೂರನ್ನು ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿ ವಿಚಾರಣೆ ನಡೆಸಿದೆ. ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲಿ ಕೋರ್ಟ್‌ ಆವರಣದಲ್ಲಿ ತಮ್ಮ ಮುಖಕ್ಕೆ ಮೀರಾ ಮಸಿ ಬಳಿದಿದ್ದಾರೆ ಎಂದು ಆರೋಪಿಸಿ ಭಗವಾನ್‌ ಅವರು ದಾಖಲಿಸಿದ್ದ ದೂರನ್ನು ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಎಸ್‌. ಮಹೇಶ್‌ ಮತ್ತು ಪರಿಷತ್‌ ಸದಸ್ಯ ಎಸ್‌. ಹರೀಶ್‌ ನೇತೃತ್ವದ ಸಮಿತಿ ವಿಚಾರಣೆ ನಡೆಸಿತ್ತು. ಕೋರ್ಟ್‌ ಆವರಣದಲ್ಲಿ ಕಕ್ಷಿದಾರ ಭಗವಾನ್‌ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಬಾರದು ಎಂದು ರಾಜ್ಯ ವಕೀಲರ ಪರಿಷತ್‌ ಇತ್ತೀಚೆಗಷ್ಟೇ ಆದೇಶಿಸಿತ್ತು.

Recent Articles

spot_img

Related Stories

Share via
Copy link