ಭುವನೇಶ್ವರ:
ಮಹಾನಗರ ಪಾಲಿಕೆಯ (ಬಿಎಂಸಿ) ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರ ಮೇಲೆ ಸೋಮವಾರ ಸಾರ್ವಜನಿಕ ಕುಂದುಕೊರತೆ ಪರಿಹಾರ ಸಭೆ ನಡೆಸುತ್ತಿದ್ದಾಗ, ಯುವಕರ ಗುಂಪೊಂದು ಕಚೇರಿಯೊಳಗೆ ನುಗ್ಗಿ ಗುಂಪೊಂದು ಹಲ್ಲೆ ನಡೆಸಿದೆ. ಯುವಕರು ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಘಟನೆಯ ವಿಡಿಯೋವೊಂದು ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಸಾಹೂ ಅವರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಪರಿಚಿತ ವ್ಯಕ್ತಿಗಳು ಅಧಿಕಾರಿಯ ಶರ್ಟ್ನ ಕಾಲರ್ ಹಿಡಿದು ಕಟ್ಟಡದ ಹೊರಗೆ ಎಳೆದೊಯ್ದಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಆರು ಯುವಕರು ಸಾಹೂ ಅವರ ಕೊಠಡಿಗೆ ನುಗ್ಗಿ ನಿಂದಿಸಲು ಶುರು ಮಾಡಿದ್ದಾರೆ. ನಂತರ ಅವರು ಅಧಿಕಾರಿಯ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಅಧಿಕಾರಿ ವಿರೋಧ ವ್ಯಕ್ತಪಡಿಸಿದಾಗ ಅವರಿಗೆ ಚೆನ್ನಾಗಿ ಥಳಿಸಲಾಗಿದೆ. ಹಲ್ಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ದಾಳಿಕೋರರ ಗುರುತುಗಳು ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹೂ, “ದಾಳಿಕೋರರು ನನಗೆ ಅಪರಿಚಿತರು. ನಾನು ಇದನ್ನು ಉನ್ನತ ಅಧಿಕಾರಿಗಳಿಗೆ ವರದಿ ಮಾಡುತ್ತೇನೆ ಮತ್ತು ಶೀಘ್ರದಲ್ಲೇ ಎಫ್ಐಆರ್ ದಾಖಲಿಸಲಾಗುವುದು” ಎಂದು ಹೇಳಿದರು.
ದಾಳಿಯನ್ನು ಖಂಡಿಸಿ, ಬಿಎಂಸಿ ನೌಕರರು ಕಚೇರಿ ಆವರಣದಲ್ಲಿ ಸ್ವಯಂಪ್ರೇರಿತವಾಗಿ ಧರಣಿ ನಡೆಸಿದ್ದಾರೆ. ಅವರು ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸಿ ಜೈಲಿಗೆ ಹಾಕಬೇಕೆಂದು ಒತ್ತಾಯಿಸಿದರು. ಘಟನೆ ನಡೆದ ಕೂಡಲೇ ಬಿಎಂಸಿ ಮತ್ತು ಕಮಿಷನರೇಟ್ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಘಟನೆಯನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಅಧಿಕಾರಿ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜನರ ಕುಂದುಕೊರತೆಗಳನ್ನು ಆಲಿಸುತ್ತಿದ್ದ ಅಧಿಕಾರಿಯ ಮೇಲೆ ಹಗಲು ಹೊತ್ತಿನಲ್ಲಿ ದಾಳಿ ನಡೆಸಿರುವುದು “ಭಯಾನಕ” ಸಂಗತಿ ಎಂದು ಅವರು ಹೇಳಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ನಾಗರಿಕರು ಸರ್ಕಾರದಿಂದ ಏನು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸುತ್ತಾರೆ ಎಂದು ನಾಯಕ್ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
