ಲಖನೌ:
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಬಿಜೆಪಿ ನಾಯಕ ಯೋಗೇಶ್ ರೋಹಿಲ್ಲಾ ಎಂಬಾತ ಪತ್ನಿ ಹಾಗೂ ಮೂವರು ಮಕ್ಕಳನ್ನು ಗುಂಡಿಕ್ಕಿದ್ದಾನೆ. ಶನಿವಾರ ಸಗತೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಯೋಗೇಶ್ ರೋಹಿಲ್ಲಾ ತನ್ನ ಕುಟುಂಬಕ್ಕೆ ಗುಂಡು ಹಾರಿಸಿರುವುದಾಗಿ ಖುದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೋರ್ವ ಪುತ್ರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಗಂಗೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಯೋಗೇಶ್ ರೋಹಿಲ್ಲಾ, ತನ್ನ ಪತ್ನಿ ನೇಹಾ ವಿವಾಹೇತರ ಸಂಬಂಧ ಹೊಂದಿದ್ದಳು. ಹಲವಾರು ಬಾರಿ ಆಕೆಗೆ ತಿಳಿ ಹೇಳಿದ್ದೆ, ಆದರೂ ಆಕೆ ತನ್ನನ್ನು ತಾನು ಸರಿ ಪಡಿಸಿಕೊಳ್ಳಲಿಲ್ಲ. ಅವಳ ಈ ನಡೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಆಕೆಯ ಅಕ್ರಮ ಸಂಬಂಧಗಳು ಸಮಾಜದಲ್ಲಿ ನನಗೆ ಮುಜುಗರ ತಂದಿದೆ. ಖ್ಯಾತಿಗೆ ಧಕ್ಕೆಯಾಗಿದೆ, ಇದರಿಂದ ಕೋಪಗೊಂಡು ತಾನು ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ್ದೇನೆ ಎಂದು ಆರೋಪಿ ಪೊಲೀಸರ ಬಳಿ ಹೇಳಿದ್ದಾನೆ.
ಯೋಗೇಶ್ ರೋಹಿಲ್ಲಾನ ಇಬ್ಬರು ಮಕ್ಕಳು 12 ವರ್ಷದ ಶ್ರದ್ಧಾ ಮತ್ತು ಐದು ವರ್ಷದ ದೇವಾಂಶ್ ಸ್ಥಳದಲ್ಲೇ ಸಾವನ್ನಪ್ಪಿದರು. ಪತ್ನಿ ಮತ್ತು 7 ವರ್ಷದ ಮಗ ಶಿವಾಂಶ್ನ್ನನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಸಮಯದಲ್ಲಿ ಮಗು ಸಾವನ್ನಪ್ಪಿತು. ಪತ್ನಿಯನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಮಕ್ಕಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ, ಭಾನುವಾರ ಅವರ ಅಂತ್ಯಕ್ರಿಯೆ ವಿಧಿಗಳನ್ನು ನಡೆಸಲಾಯಿತು. ಸದ್ಯ ಆರೋಪಿಯನ್ನು ಬಂಧಿಸಿದ್ದು, ಪರವಾನಗಿ ಪಡೆದ ಪಿಸ್ತೂಲ್, ನಾಲ್ಕು ಶೆಲ್ಗಳು, 10 ಜೀವಂತ ಕಾರ್ಟ್ರಿಡ್ಜ್ಗಳು, ಬಂದೂಕಿನ ಬ್ಯಾರೆಲ್ನಲ್ಲಿ ಸಿಲುಕಿಸಲಾದ ಕಾರ್ಟ್ರಿಡ್ಜ್ ಮತ್ತು ಎರಡು ಮೊಬೈಲ್ ಫೋನ್ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ವಿಚಾರಣೆಯ ಸಮಯದಲ್ಲಿ ರೋಹಿಲ್ಲಾ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 2012 ರಲ್ಲಿ ಆತನ ಮೊದಲ ಹೆಂಡತಿ ಮೃತಪಟ್ಟಿದ್ದಳು. ನಂತರ 2013 ರಲ್ಲಿ ಶಾಮ್ಲಿ ಜಿಲ್ಲೆಯ ಕೈರಾನಾದ ನೇಹಾ ಎಂಬಾಕೆಯನ್ನು ವಿವಾಹವಾಗಿದ್ದ. ಸದ್ಯ ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ಕಾರ್ಯಕರ್ತರೊಬ್ಬರು ತಮ್ಮ ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ಕುರಿತು ಈ ವರೆಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗಂಗೋ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕಿರಾತ್ ಸಿಂಗ್ ಮಾತನಾಡಿ, ಘಟನೆಗೆ ಕಾರಣ ಏನೆಂದು ತಿಳಿದಲ್ಲ, ಇದು ನೋವಿನ ಸಂಗತಿ ಎಂದು ಹೇಳಿದ್ದಾರೆ.








