ಪಾವಗಡ:
ವಿವಿಧ ಕೆಲಸಗಳಿಗಾಗಿ ನಾಗಲಮಡಿಕೆ ಗ್ರಾಮದ ನಾಡಕಛೇರಿ ಬಳಿ ಸಾಲುಗಟ್ಟಿ ನಿಂತು, ಬರಿದೇ ಕಾಯುತ್ತಿರುವ ಗ್ರಾಮೀಣ ರೈತ ಸಮೂಹ.
ನಾಗಲಮಡಿಕೆ ನಾಡಕಛೇರಿಯಲ್ಲಿ ಸಮಯಕ್ಕೆ ಬಾರದ ಸಿಬ್ಬಂದಿಯಿಂದಾಗಿ ಹೈರಾಣಾಗುತ್ತಿರುವ ರೈತರು ಮತ್ತು ಸಾರ್ವಜನಿಕರು ತಹಸೀಲ್ದಾರ್ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ತಾಲ್ಲೂಕಿನ ನಾಗಲಮಡಿಕೆ ಗ್ರಾಮವು ಹೋಬಳಿ ಕೇಂದ್ರ ಸ್ಥಾನವಾಗಿದ್ದು, ಇಲ್ಲಿ ನಾಡಕಛೇರಿ ಇದ್ದು ಸುಮಾರು 40 ರಿಂದ 50 ಗ್ರಾಮಗಳು ಹೋಬಳಿ ವ್ಯಾಪ್ತಿಗೆ ಸೇರಿವೆ. ಜಾತಿ ಮತ್ತು ವರಮಾನ, ಪಹಣಿ, ಜಮೀನು ಖಾತೆ ಮಾಡಲು ಆಧಾರ್ ಕಾರ್ಡ್, ಪಡಿತರ ಚೀಟಿ ಪಡೆಯಲು, ಪಿಂಚಣಿಗಾಗಿ, ಇನ್ನಿತರೆ ದಾಖಲೆಗಳನ್ನು ಪಡೆದುಕೊಳ್ಳಲು ನಾಗಲಮಡಿಕೆ ಗ್ರಾಮಕ್ಕೆ ಸುಮಾರು 20 ರಿಂದ 30 ಕಿಲೋಮೀಟರ್ ಪ್ರಯಾಣ ಮಾಡಿ ಆಗಮಿಸಬೇಕು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಕಛೇರಿಗೆ 12 ಘಂಟೆಗೆ ಬರುವುದು, 4 ಗಂಟೆಗೆ ಕಛೇರಿಗೆ ಬೀಗ ಜಡಿದು ತಮಗಿಷ್ಟ ಬಂದಹಾಗೆ ಹೋಗುವುದು ಮಾಡುತ್ತಿದ್ದಾರೆ.
ಇದರಿಂದ ರೈತರು, ಕೂಲಿಕಾರರು ಕಛೇರಿಗೆ ಬಂದು ಕಾದು, ಕಾದು ತಮ್ಮ ಕೆಲಸಗಳು ಆಗದೆ ಅಲೆಯಬೇಕಾಗಿದೆ ಎಂದು ಹೋಬಳಿ ವ್ಯಾಪ್ತಿಯ ಪಳವಳ್ಳಿ, ಬುಗಡೂರು, ಬಿ.ಕೆ.ಹಳ್ಳಿ, ಹುಸೇನ್ಪುರ, ಉಪ್ಪಾರಹಳ್ಳಿ, ವೆಂಕಟಮ್ಮನಹಳ್ಳಿ, ಇಂಟೂ ರಾಯನಹಳ್ಳಿ, ತಿರುಮಣಿ ಗ್ರಾಮಸ್ಥರು ನೋವು ತೋಡಿ ಕೊಂಡಿದ್ದಾರೆ.
ಏಷ್ಯಾಖಂಡದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕ್ ನಾಗಲಮಡಿಕೆ ಹೋಬಳಿಯ ತಿರುಮಣಿ ಸುತ್ತಮುತ್ತ ನಿರ್ಮಾಣವಾಗಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಾಗಲಮಡಿಕೆ ಗ್ರಾಮದಲ್ಲಿ ಸುಪ್ರಸಿದ್ದ ಅಂತ್ಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಸಹ ಇದ್ದು, ನಿತ್ಯ ನೂರಾರು ಭಕ್ತರು ದರ್ಶನಕ್ಕಾಗಿ ಆಗಮಿಸು ತ್ತಾರೆ. ಇಂತಹ ಗ್ರಾಮದಲ್ಲಿ ನಾಡಕಛೇರಿ ಇದ್ದು ರೈತರು ಅಲೆದಾಡುತ್ತಿರುವುದು ದುರಂತದ ಸಂಗತಿಯಾಗಿದೆ.
ಬೆಸ್ಕಾಂನ ಹಳೆಯ ಶಿಥಿಲವಾದ ವಸತಿಗೃಹದಲ್ಲಿ ನಾಡಕಛೇರಿ :
ಇಂತಹ ಪುರಾಣ ಪ್ರಸಿದ್ದವಾದ ನಾಗಲಮಡಿಕೆಯಲ್ಲಿ ಹಳೆ ಶಿಥಿಲಾವಸ್ಥೆಯಲ್ಲಿರುವ ಬೆಸ್ಕಾಂ ಸಿಬ್ಬಂದಿಯ ವಸತಿಗೃಹದಲ್ಲಿ ನಾಡಕಛೇರಿ ಇದ್ದು, ಯಾವುದೆ ಮೂಲಭೂತಸೌಕರ್ಯಗಳು ಇಲ್ಲ. ನಿತ್ಯ ಮಹಿಳೆಯರು ಸೇರಿ, ನೂರಾರು ರೈತರು ಕಛೇರಿಗೆ ಆಗಮಿಸುತ್ತಾರೆ. ಆದರೆ ಶೌಚಾಲಯವಾಗಲಿ, ಕುಡಿಯುವ ನೀರಿನ ಸೌಕರ್ಯಗಳಾಗಿಲಿ, ಕನಿಷ್ಠ ಕುಳಿತುಕೊಳ್ಳಲು ಅವಕಾಶವಾಗಲಿ ಇಲ್ಲ. ಈ ಕಛೇರಿಯನ್ನು ಸಹಾಯಕರು ಬೆಳಗ್ಗೆ 9 ಘಂಟೆಗೆ ತೆರೆಯುತ್ತಾರೆ, ಆದರೆ ಸಿಬ್ಬಂದಿ ಬರುವುದು ಮಾತ್ರ 12 ಘಂಟೆಗೆ. ಅಲ್ಲಿಯವರೆಗೂ ಕಾಯಬೇಕು.
ಮಿತಿ ಮೀರಿದ ಲಂಚಗುಳಿತನ : ಸಿಬ್ಬಂದಿ ತಮಗೆ ಬೇಕಾದ ವರನ್ನು ಒಳಗೆ ಕರೆಯಿಸಿ, ಲಂಚ ಪಡೆದುಕೊಂಡು ಕೆಲಸ ಮಾಡಿಕೊಡುತ್ತಾರೆ. ಅಮಾಯಕ ಜನರು ಮಾತ್ರ ಸುಮ್ಮನೆ ಅಲೆಯಬೇಕು. ಈ ಬಗ್ಗೆ ತಾಲ್ಲೂಕು ದಂಡಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದೇ ರೀತಿ ಮುಂದುವರೆದರೆ ಇಲ್ಲಿನ ಸಿಬ್ಬಂದಿ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರಾದ ಶಿವಕುಮಾರ್, ನಾರಾಯಣಪ್ಪ, ರಮೇಶ್, ಕೃಷ್ಣಕುಮಾರ್, ತಿಮ್ಮರಾಜು, ರವಿನಾಯಕ್, ನಾಗರಾಜ್, ರಾಮಣ್ಣ, ರಾಮಕೃಷ್ಣ, ನರೇಶ್, ತಿಮ್ಮರಾಜು ಪಾಳ್ಳೆಗಾರ ಎಚ್ಚರಿಸಿದ್ದಾರೆ.ಕಛೇರಿಯಲ್ಲಿ ನಾನು ಸೇರಿ ಇಬ್ಬರು ಸಿಬ್ಬಂದಿ ಇದ್ದು, ಸರಿಯಾದ ಸಮಯಕ್ಕೆ ಹಾಜರಾಗುತ್ತೇವೆ. ಸುಖಾಸುಮ್ಮನೆ ರೈತರು ದೂರುತ್ತಿದ್ದಾರೆ.
-ಗಿರೀಶ್, ಗ್ರೇಡ್- 2 ತಹಸೀಲ್ದಾರ್, ನಾಗಲಮಡಿಕೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
