ಬೆಂಗಳೂರು:
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಾರಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಮಹಿಳೆಯರಿಗೂ ಶನಿವಾರ ಶುಭಾಶಯಗಳನ್ನು ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ. ದೌರ್ಜನ್ಯ, ಅಸಮಾನತೆಗಳ ವಿರುದ್ಧದ ಮಹಿಳೆಯರ ದನಿಗೆ ನಾವು-ನೀವೆಲ್ಲರೂ ದನಿಗೂಡಿಸೋಣ ಎಂದು ಹೇಳಿದ್ದಾರೆ.
ಹೆಣ್ಣೆಂದರೆ ಸಹನೆ, ಸಹಿಷ್ಣುತೆ, ಪ್ರೀತಿ, ತ್ಯಾಗ, ಮಮತೆಯ ಸಾಕಾರ ಮೂರ್ತಿ. ತಾಯಾಗಿ ಜನ್ಮ ಕೊಟ್ಟು, ಸಹೋದರಿಯಾಗಿ ಸಲಹಿ, ಹೆಂಡತಿಯಾಗಿ ಜೊತೆನಿಂತು, ಮಗಳಾಗಿ ಪೊರೆಯುವವಳು ಹೆಣ್ಣು. ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ದೌರ್ಜನ್ಯ, ಅಸಮಾನತೆಗಳ ವಿರುದ್ಧದ ಮಹಿಳೆಯರ ದನಿಗೆ ನಾವು-ನೀವೆಲ್ಲರೂ ದನಿಗೂಡಿಸೋಣ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿ, ನಾಡಿನ ಸಮಸ್ತ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ʼಗೃಹಜ್ಯೋತಿʼ ತಂದಿತು ಬೆಳಕು, ʼಗೃಹಲಕ್ಷ್ಮಿʼ ಕಟ್ಟಿತು ಬದುಕು. ಅಬಲೆಯನ್ನು ಸಬಲೆಯಾಗಿಸಿತು ʼಶಕ್ತಿʼ, ʼಅನ್ನ ಭಾಗ್ಯʼ ನೀಡಿತು ಹಸಿವಿಗೆ ಮುಕ್ತಿ. ಹೆಣ್ಣೇ ನೀನಲ್ಲ ಒಬ್ಬಂಟಿ, ನಿನ್ನೊಟ್ಟಿಗಿವೆ 5 ಗ್ಯಾರಂಟಿ ಎಂದು ಹೇಳಿದ್ದಾರೆ.
