ಸಂಕಷ್ಟ ನಿವಾರಣೆಗೆ ದೇವರ ಮೊರೆ ಹೋದ ಚಿತ್ರರಂಗ….!

ಬೆಂಗಳೂರು:

    ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಂಕಷ್ಟ ನಿವಾರಣೆಗೆ ಹಾಗೂ ಚಲನಚಿತ್ರೋದ್ಯಮದ ಒಳತು ಬೆಳವಣಿಗೆಗಾಗಿ ಕನ್ನಡ ಚಲನಚಿತ್ರ ಕಲಾವಿದರ ಸಂಘ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟದಲ್ಲಿ ಇಂದು ಬುಧವಾರ ಬೆಳಗ್ಗೆಯಿಂದಲೇ ವಿವಿಧ ಹೋಮ ಹವನಗಳು ನಡೆಯುತ್ತಿವೆ.

    ಬೆಳಗ್ಗೆ 8 ಗಂಟೆಯಿಂದ ಪೂಜೆ ಆರಂಭವಾಗಲಿದ್ದು, ಗಣಪತಿ ಹೋಮ , ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡೆಯಲಿದೆ. ಪೂಜೆ ಬಳಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೋಮ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರಿಗೂ ಆಹ್ವಾನ ನೀಡಲಾಗಿದೆ.

    ಪೂಜೆ, ಹೋಮ ಹವನದ ಉಸ್ತುವಾರಿಯನ್ನು ಜ್ಯೋತಿಷಿ- ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ಅವರು ವಹಿಸಿಕೊಂಡಿದ್ದಾರೆ. ಚಲನಚಿತ್ರ ರಂಗವು ಚೈತನ್ಯವನ್ನು ಕಳೆದುಕೊಂಡಂತೆ ಆಗಿದೆ. ಅದಕ್ಕೆ ಮತ್ತೆ ಜೀವ ಚೈತನ್ಯ ಬರಬೇಕು. ಹಾಗೆ ಬರಬೇಕು ಅಂತಾದರೆ ಆ ಉದ್ಯಮಕ್ಕೆ ಅಧಿ ದೇವತೆಯಾದಂಥ ನಾಗದೇವರ ಆರಾಧನೆ ಆಗಬೇಕು. ಅದರಂತೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಹಾಗೂ ನಾಗದರ್ಶನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ಅವರು ತಿಳಿಸಿದ್ದಾರೆ.

   ಹೋಮ ಹವನದ ನೇತೃತ್ವವನ್ನು ಚಿತ್ರರಂಗದ ಹಿರಿಯರಾದ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ವಹಿಸಿಕೊಂಡಿದ್ದಾರೆ. ಇಂದಿನ ಹೋಮ ಹವನಕ್ಕೆ ವೈಯಕ್ತಿಕವಾಗಿ ಯಾರಿಗೂ ಆಹ್ವಾನ ನೀಡಿಲ್ಲ, ಇಡೀ ಕನ್ನಡ ಚಿತ್ರರಂಗದವರನ್ನು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ರಾಕ್ ಲೈನ್ ಮತ್ತು ದೊಡ್ಡಣ್ಣ ಕರೆದಿದ್ದರು.

   ಆಗಸ್ಟ್ 14ರಂದು ಬೆಳಿಗ್ಗೆ ಎಂಟಕ್ಕೆ ಸಂಕಲ್ಪ ನಡೆಯಲಿದೆ. ನಂತರ ಮೂರು ಹೋಮಗಳು ನಡೆಯಲಿವೆ. ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಸರ್ಪ ಶಾಂತಿ ನಡೆಯಲಿದೆ. ಇದರಲ್ಲಿ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ. ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಕೋವಿಡ್‍ ನಂತರವೇ ಇಂಥದ್ದೊಂದು ಯೋಚನೆ ಇತ್ತು.

   ಕೋವಿಡ್‍ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ಕಾರಣಾಂತರಗಳಿಂದ ಆಗಲಿಲ್ಲ. ದೊಡ್ಡಣ್ಣ ಅವರು ಒಂದು ತಿಂಗಳ ಮುಂಚೆ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ. ಇದಕ್ಕೆ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇವೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದರು.

    ಉತ್ತಮ ವಿಷಯ ಮತ್ತು ಕಥೆಯಿರುವ ಸದಭಿರುಚಿಯ ಚಿತ್ರಗಳನ್ನು ನೀಡದೆ ಕನ್ನಡ ಚಿತ್ರರಂಗ ಸಂಕಷ್ಟದಿಂದ ಹೊರಬರಬೇಕೆಂದು ಪೂಜೆ, ಹೋಮ ಹವನಕ್ಕೆ ಮೊರೆ ಹೋಗುತ್ತಿರುವುದು ಖೇದಕರ ಸಂಗತಿ. ಅತ್ಯುತ್ತಮ ಕಥೆಗಳೊಂದಿಗೆ ಗುಣಮಟ್ಟದ ಚಿತ್ರಗಳನ್ನು ನೀಡದ ಸ್ಯಾಂಡಲ್‌ವುಡ್‌ ಮಂದಿ ಚಿತ್ರರಂಗವನ್ನು ಹೋಮ, ಹವನ, ಪೂಜೆಗಳಿಂದ ಉಳಿಸಲು ಹೊರಟಿದ್ದಾರೆ ಎಂದು ವ್ಯಾಪಕ ಟೀಕೆ ಕೇಳಿಬರುತ್ತಿದೆ.

    ಅಲ್ಲದೆ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಬಿಡುಗಡೆಗೆ ಈ ಹೋಮ-ಹವನ ನಡೆಯುತ್ತಿದೆ ಎಂಬ ಮಾತುಗಳೂ ಸಹ ಕೇಳಿಬಂತು. ಅದಕ್ಕೆ ರಾಕ್ ಲೈನ್ ಸ್ಪಷ್ಟನೆ ನೀಡಿ ದರ್ಶನ್ ಅವರಿಗೋಸ್ಕರ ಮಾಡಿದ್ದರೆ ನಾನು ನನ್ನ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಮಾಡಿಸುತ್ತಿದ್ದೆ. ಕಲಾವಿದರ ಸಂಘದಲ್ಲಿ ಹೋಮ, ಹವನ ಮಾಡಿಸುತ್ತಿರಲಿಲ್ಲ ಎಂದಿದ್ದಾರೆ.