ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರೇ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಿಂದ ನೀವು ಮಾಡಿದ ‘ಚುನಾವಣಾ ಭಾಷಣ’ವನ್ನು ಗಮನಿಸಿದೆ ಅದರಲ್ಲಿ ನೀವು ದೇಶದ ಅಭಿವೃದ್ಧಿ ವಿಷಯಕ್ಕಿಂತ ಚುನಾವಣೆಗೆ ಪ್ರಚಾರ ಮಾಡಿದ್ದೆ ಹೆಚ್ಚು ಮೊದಲು ದೇಶದ ಜನರ ಹಿತ ನೋಡಿ ನಿಮ್ಮ ಪಕ್ಷದ ಹಿತ ಆಮೇಲೆ ಎಂದು ಸಲಹೆ ನೀಡುತ್ತಲೆ ತಿರುಗೇಟನ್ನು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡದೆ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣವನ್ನು ಚುನಾವಣಾ ಭಾಷಣವನ್ನಾಗಿ ಮಾಡಿಕೊಂಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದರು.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಡ್ಡ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನಿಮಗೆ ಕುಟುಂಬವಾದದ ನೆನಪಾಗುವುದಿಲ್ಲವೇ ಮೋದಿ ಅವರೇ? ಕರ್ನಾಟದಲ್ಲಿ ದೇವೇಗೌಡರ ಕುಟುಂಬ, ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ, ಹರಿಯಾಣದಲ್ಲಿ ಚೌತಾಲಾ ಕುಟುಂಬ, ಕಾಶ್ಮೀರದಲ್ಲಿ ಮುಫ್ತಿ ಕುಟುಂಬ, ಪಂಜಾಬ್ನಲ್ಲಿ ಬಾದಲ್ ಪರಿವಾರ ಇವರೊಂದಿಗೆ ನಿಮ್ಮ ಪಕ್ಷ ಅಧಿಕಾರ ಸವಿದಿಲ್ಲವೇ?.
ದೇಶವನ್ನು ಕಾಡುತ್ತಿರುವ ಗಂಭೀರ ವಿದ್ಯಮಾನಗಳಿಗೆ ಮುಖಾಮುಖಿಯಾಗುವ, ಸಂವಿಧಾನದ ಆಶಯಗಳಡಿ ಅಭಿವೃದ್ಧಿ ಪಥವನ್ನು ಅನಾವರಣಗೊಳಿಸುವ ಮಾತುಗಳನ್ನಾಡಬೇಕಾದ ನೀವು ಚುನಾವಣಾ ಸಮಾವೇಶದಲ್ಲಿ ಮಾಡುವಂತಹ ರಾಜಕೀಯ ಭಾಷಣಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದು ವಿಷಾದನೀಯ ಎಂದು ಟೀಕಿಸಿದ್ದಾರೆ.
ಮಣಿಪುರ ಹಿಂಸಾಚಾರದ ಕುರಿತು ಖಚಿತ ನಿಲುವನ್ನು ಪ್ರಕಟಿಸದೆ ಬಾಯುಪಚಾರದ ಮಾತುಗಳ ಮೂಲಕ ಜಾರಿಕೊಂಡದ್ದು ನಿಮ್ಮ ವೈಫಲ್ಯಕ್ಕೆ ಹಿಡಿದ ಕನ್ನಡಿ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿಹೋಗಿದ್ದಾರೆ. ದೇಶದ ಉತ್ತರ ಭಾಗದಲ್ಲಿ ನೈಸರ್ಗಿಕ ವಿಕೋಪಗಳಾದ ಅತಿವೃಷ್ಟಿ, ಮೇಘಸ್ಫೋಟದಿಂದ ಜನ ಬೀದಿಗೆ ಬಿದ್ದಿದ್ದಾರೆ, ದೇಶದ ರಾಜಧಾನಿಯಲ್ಲಿನ ಪ್ರವಾಹ ಜನರನ್ನು ಭೀತಿಗೀಡುಮಾಡಿದೆ. ಈ ವಿಷಯಗಳ ಬಗೆಗಿನ ನಿಮ್ಮ ಜಾಣಮೌನವನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ