ಚಿಕ್ಕನಾಯಕನಹಳ್ಳಿ :
ಬೇಸಿಗೆ ಇನ್ನೂ ಶುರುವಾಗೇ ಇಲ್ಲ, ಆಗಲೇ ಹಲವೆಡೆ ನೀರಿಗಾಗಿ ಪರದಾಟ ಶುರುವಾಗಿದೆ, ನೀರಿಗಾಗಿ ಜನರು ಕ್ಯೂ ನಿಲ್ಲುವ ದೃಶ್ಯ ಆರಂಭವಾಗಿದೆ, ಗ್ರಾಮಕ್ಕೆ ಬರುವ ಟ್ಯಾಂಕರ್ಗಳತ್ತ ಮಹಿಳೆಯರು ಬಿಂದಿಗೆ ಹಿಡಿದು ಓಡುವಂತಾಗಿದೆ.
ತಾಲ್ಲೂಕಿನ ಹೊಸಹಳ್ಳಿಯಲ್ಲಿ ಕಳೆದ 20 ದಿನಗಳಿಂದ ನೀರಿಗಾಗಿ ಪರದಾಡುತ್ತಿದ್ದಾರೆ, ಇರುವ ಮೂರು ಬೋರ್ವೆಲ್ನಲ್ಲಿ ಎರಡು ಬೋರ್ವೆಲ್ ಕೆಟ್ಟಿವೆ. ಪ್ರಸಕ್ತ ಒಂದು ಬೋರ್ ವೆಲ್ ನಲ್ಲಿ ಮಾತ್ರ ನೀರು ಬರುತ್ತಿದ್ದು ಅದರಲ್ಲೂ ಅರ್ಧ ಇಂಚು ನೀರು ಬರುತ್ತಿದೆ, ಗ್ರಾಮದ ಜನರಿಗೆ ನೀರು ದೊರಕದೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವರ್ಷವೂ ಈ ಗ್ರಾಮದಲ್ಲಿ ಬೇಸಿಗೆ ಶುರವಾಗಲು ಎರಡು ತಿಂಗಳು ಇರುವ ಮುಂಚೆಯೇ ನೀರಿಗಾಗಿ ಪರದಾಡುವ ದೃಶ್ಯ ನೋಡುತ್ತಲೇ ಇದ್ದೇವೆ, ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಈ ಗ್ರಾಮದ ನೀರಿನ ಸಮಸ್ಯೆ ಈವರೆಗೂ ಬಗೆಹರಿದಿಲ್ಲ ಎನ್ನುವುದೇ ಗ್ರಾಮದವರಿಗೆ ಬೇಸರದ ಸಂಗತಿ.
ಹೊಸಹಳ್ಳಿ ಗ್ರಾಮದಲ್ಲಿ 500ಜನ ಇದ್ದಾರೆ, ನೀರಿನ ಟ್ಯಾಂಕ್ಗೆ ಬರುತ್ತಿರುವ ನೀರು ಗ್ರಾಮದ ಜನರಿಗೆ ಸಾಕಾಗುತ್ತಿಲ್ಲ, ಜನತೆ ದಿನ ಬೆಳಗಾದರೆ ಗ್ರಾಮದಲ್ಲಿರುವ ಟ್ಯಾಂಕರ್ ಮುಂದೆ ಬಿಂದಿಗೆ ಹಿಡಿದು ಕ್ಯೂ ನಿಲ್ಲುತ್ತಿದ್ದಾರೆ, ಗ್ರಾಮದಲ್ಲಿ ಅರ್ಧ ಇಂಚಿನಲ್ಲಿ ತೊಟ್ಟಿಗೆ ಹರಿಯುವ ನೀರನ್ನೂ ಸಹ ಕ್ಯೂ ನಿಂತೇ ಪಡೆಯಲಾಗುತ್ತಿದೆ, ನಾಲ್ಕು ಬಿಂದಿಗೆ ನೀರು ಹಿಡಿಯಬೇಕೆಂದರೂ ಗಂಟೆ ಗಟ್ಟಲೆ ಕಾಯಬೇಕಾದ ಸ್ಥಿತಿ ಉದ್ಭವಿಸಿದೆ, ಹಾಗಾಗಿ ಟ್ಯಾಂಕರ್ ನಲ್ಲಿ ಹರಿಸುವ ನೀರಿಗೆ ಮೊರೆಯಿಡುತ್ತಿದ್ದಾರೆ ಗ್ರಾಮದ ಜನತೆ.
ನೀರಿನ ಸಮಸ್ಯೆ ಪರಿಹರಿಸಲು ಸಭೆ ನಡೆಸಿ :
ಬೇಸಿಗೆ ಆರಂಭವಾಗುತ್ತಿದೆ, ನೀರಿನ ಹಾಹಾಕಾರ ಸೃಷ್ಠಿಯಾಗುತ್ತಿದೆ, ಒಂದು ಕಡೆ ಕುಡಿಯುವ ನೀರಿಗೆ ಜನತೆ ಹಪಹಪಿಸಲು ಶುರು ಮಾಡುತ್ತಿದ್ದಾರೆ, ಹೇಮಾವತಿ ನೀರು ಹರಿಯದ ಭಾಗಗಳಲ್ಲಿ ಹೆಚ್ಚಾಗಿ ನೀರಿನ ಸಮಸ್ಯೆ ಕಾಣಿಸುವುದು ಸಹಜ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ತಾಲ್ಲೂಕಿನ ಹೊಸಹಳ್ಳಿ, ಮಾಳಿಗೆಹಳ್ಳಿ, ಚಿ.ನಾ.ಹಳ್ಳಿ ಪಟ್ಟಣ, ದುಗಡಿಹಳ್ಳಿ ಗ್ರಾಮಗಳ ಗ್ರಾಮಸ್ಥರು ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ, ಈ ಗ್ರಾಮಗಳ ಹೊರತಾಗಿಯೂ ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ ತಾಲ್ಲೂಕು ಆಡಳಿತ ಈಗಿನಿಂದಲೇ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡರೇ ಮಾರ್ಚ್, ಏಪ್ರಿಲ್, ಮೇ ನಲ್ಲಿ ಎದುರಿಸಬಹುದಾದ ನೀರಿನ ಹಾಹಾಕಾರವನ್ನು ತಗ್ಗಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
