ಚಿಕ್ಕನಾಯಕನಹಳ್ಳಿ :
ಪಟ್ಟಣದ 18ನೇ ವಾರ್ಡ್ನಲ್ಲಿರುವ ದೊಡ್ಡ ಚರಂಡಿ ಎಂದೇ ಪಟ್ಟಣದಲ್ಲಿ ಕುಖ್ಯಾತಗೊಂಡಿರುವ ಪ್ರದೇಶದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ, ಕೊಳಚೆ, ಚರಂಡಿ ವಾಸನೆ ಹೆಚ್ಚಾಗಿ ಈ ಭಾಗದಲ್ಲಿ ವಾಸಿಸುವ ಜನರಿಗೆ ಅನಾರೋಗ್ಯ ಸೃಷ್ಠಿಯಾಗುತ್ತಿದೆ ಎಂದು ಸ್ಥಳೀಯ ನಾಗರೀಕ ದೇವರಾಜು ಆರೋಪಿಸಿದ್ದಾರೆ.
ಕುರುಬರಶ್ರೇಣಿ ಶಾಲೆ ಎದುರು ಇರುವ ಹಾಗೂ ಮತಿಘಟ್ಟ ಗೇಟ್ ಮೂಲಕ ಹುಳಿಯಾರು ಸಂಪರ್ಕಿಸುವ ಈ ರಸ್ತೆಯ ಸಮೀಪದಲ್ಲಿ ಈ ಚರಂಡಿ ಇದ್ದು ದೊಡ್ಡಚರಂಡಿಗೆ ನಾಲ್ಕೈದು ಚಿಕ್ಕಚಿಕ್ಕ ಚರಂಡಿಗಳು ಸಂಪರ್ಕಗೊಳ್ಳುತ್ತದೆ, ದೊಡ್ಡಚರಂಡಿಗೆ ಹಲವಾರು ಕಸಕಡ್ಡಿ, ಅನೈರ್ಮಲ್ಯವನ್ನು ಹಾಕುವುದರಿಂದ ಇಲ್ಲಿ ಕೆಟ್ಟ ವಾಸನೆ ಇದೆ ಈ ಬಗ್ಗೆ ಹಲವಾರು ವರ್ಷಗಳಿಂದ ಪುರಸಭೆಗೆ ಲಿಖಿತ ದೂರು ಜೊತೆಗೆ ಮೌಖಿಕ ಹೇಳಿಕೆಯನ್ನು ಸ್ಥಳೀಯ ನಿವಾಸಿಗಳು, ಮಾಜಿ ಪುರಸಭಾ ಸದಸ್ಯರು ನೀಡಿದ್ದರೂ ಈವರೆಗೂ ಪುರಸಭಾ ಆಡಳಿತ ಕ್ರಮ ಕೈಗೊಂಡಿಲ್ಲ, ದೊಡ್ಡಚರಂಡಿಯಲ್ಲಿ ಏರ್ಪಡುತ್ತಿರುವ ಕೆಟ್ಟ ವಾಸನೆಯಿಂದ ಈ ಭಾಗದ ಸುತ್ತಮುತ್ತಲಿನ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಸುಮಾರು 8 ವಾರ್ಡ್ ಗಳ ಚರಂಡಿ ನೀರು ಈ ದೊಡ್ಡಚರಂಡಿಗೆ ಹರಿಯುತ್ತಿದೆ, ರಸ್ತೆ ಕಾಮಗಾರಿಯವರು ಈ ಚರಂಡಿಯನ್ನು ಕಿತ್ತು ಅದರ ಮೇಲೆ ಅದರಲ್ಲಿರುವ ಕಸವನ್ನು ಹಾಗೆಯೇ ಬಿಟ್ಟಿದ್ದಾರೆ, ಇದರ ಬಗ್ಗೆ ಪರಿಸರ ಇಂಜನಿಯರ್ ಗೆ ದೂರು ಕೊಟ್ಟರೂ ಅವರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ರಸ್ತೆ ಕೆಲಸದವರ ವ್ಯಾಪ್ತಿಗೆ ಬರುತ್ತದೆ, ಈ ಸಮಸ್ಯೆ ಈಗೇ ಬಿಟ್ಟರೆ ಇಲ್ಲಿ ರೋಗ, ರುಜುನಗಳು ಜಾಸ್ತಿಯಾಗುತ್ತದೆ, ಪುರಸಭೆಗೆ ಈ ಬಗ್ಗೆ ದೂರು ನೀಡಿದರೂ ಯಾರೂ ಕೆಲಸ ಮಾಡುತ್ತಿಲ್ಲ, ಕಾಮಗಾರಿ ಮಾಡುತ್ತಿರುವವರು ಸೇಡಿನ ರಾಜಕಾರಣ ಮಾಡುತ್ತಾರೆ, ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದರೆ ಪೊಲಿಸರನ್ನು ಕರೆದುಕೊಂಡು ಬಂದು ದೌರ್ಜನ್ಯ ಮಾಡುತ್ತಾರೆ , ಈಗಲಾದರೂ ಪುರಸಭೆ ಆಡಳಿತ ಜನಸಾಮಾನ್ಯರ ಸಮಸ್ಯೆಯನ್ನು ಆಲಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
