ತಿಪಟೂರು
2ನೇ ದಿನದ ಬಂದ್ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳು ಬುಧವಾರ ತಿಪಟೂರಿನಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಯ ವ್ಯವಸ್ಥಾಪಕರಾದ ವೆಂಕಟೇಶ್ರವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಪೈಹೋಟೆಲ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿ ಪ್ರಮುಖ ರಸ್ತೆಗಳಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಪಡಿಸಿದರು.
ಈ ವೇಳೆ ಕಾರ್ಮಿಕ ಸಂಘಟನೆ ಮುಖಂಡ ಅಲ್ಲಾಬಕಾಶ್ ಮಾತನಾಡಿ, ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಉತ್ಪಾದನಾ ವೆಚ್ಚದ 1.5 ಪಟ್ಟು ಹೆಚ್ಚು ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ದುಡಿಯುವ ಎಲ್ಲಾ ಕಾರ್ಮಿಕರಿಗೆ ಮಾಸಿಕ ಕನಿಷ್ಠ 18 ಸಾವಿರ ರೂ. ಕೂಲಿ ನಿಗದಿ ಪಡಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸಿ ಹಾಲಿ ನೌಕರನ್ನು ಕಾಯಂಗೊಳಿಸಿ ಸಮಾನ ವೇತನ ಜಾರಿಗೆ ತರಬೇಕು. ಹಮಾಲಿಗಳು, ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳನ್ನು ಹೆಚ್ಚಿಸಬೇಕು. ಬಗರ್ಹುಕುಂ ಸಂಬಂಧಿ ಹಕ್ಕುಪತ್ರ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಕೇಂದ್ರ ಸರ್ಕಾರ ದುಡಿಯುವ ವರ್ಗವನ್ನು ಕಡೆಗಣಿಸುತ್ತಿದ್ದು, ಐಶಾರಾಮಿ ಜೀವನ ನಡೆಸುವವರಿಗೆ ಆದ್ಯತೆ ನೀಡುತ್ತಿದೆ. ರೈತ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡದಿದ್ದರೆ ರೈತನ ಬದುಕು ಅತಂತ್ರವಾಗಲಿದ್ದು ಮತ್ತಷ್ಟು ಆತ್ಮಹತ್ಯೆಗಳಿಗೆ ಸರ್ಕಾರವೇ ಕಾರಣವಾಗಲಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನುಸೂಯ, ಬಿಸಿಯೂಟ ನೌಕರರ ಸಂಘದ ಲಕ್ಷ್ಮೀದೇವಿ, ಎಪಿಎಂಸಿ ಹಮಾಲರ ಸಂಘದ ಉಪಾಧ್ಯಕ್ಷ ಟಿ.ಆರ್. ಮಂಜುನಾಥ್, ಸದಸ್ಯ ರಾಮಕೃಷ್ಣ, ರಾಜ್ಯ ರೈತ ಸಂಘದ ದೇವರಾಜು, ಸೇರಿದಂತೆ ಸಿಐಟಿಯು, ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ, ಬ್ಯಾಂಕ್, ಎಪಿಎಂಸಿ ಹಮಾಲರ ಸಂಘ, ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
