ಚಿಕ್ಕನಾಯಕನಹಳ್ಳಿ : ಬಸ್‍ಗಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳ ಪರದಾಟ

 ಚಿಕ್ಕನಾಯಕನಹಳ್ಳಿ :

      ಪಟ್ಟಣದಲ್ಲಿ ಪ್ರತಿ ನಿತ್ಯ ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು, ಪ್ರಯಾಣಿಕರು, ಉದ್ಯೋಗಸ್ಥರು ಬಸ್‍ಗಳ ಸಮರ್ಪಕ ವ್ಯವಸ್ಥೆ ಇಲ್ಲದೆ ಬಾಗಿಲ ಬಳಿ ನೇತಾಡಿಕೊಂಡೇ ಕಿಲೋಮೀಟರ್‍ಗಟ್ಟಲೆ ಪ್ರಯಾಣಿಸುತ್ತಿದ್ದು ಈ ಸಮಯದಲ್ಲಿ ತೆರಳುವ ಪ್ರತಿಯೊಬ್ಬರಿಗೂ ಪ್ರಯಾಣಿಸುವಾಗ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

      ಪಟ್ಟಣಕ್ಕೆ ಮುಂಜಾನೆಯಿಂದ ಕಾಲೇಜು ಆರಂಭ, ಕಛೇರಿ ಸಮಯದ ವೇಳೆಯಲ್ಲಿ ಬಸ್‍ಗಳು ಇದ್ದರೂ ಕಡಿಮೆ ಪ್ರಮಾಣದಲ್ಲಿ ಬಸ್‍ಗಳ ವ್ಯವಸ್ಥೆ ಇದೆ. ಈ ವೇಳೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಸ್ಥರು ಅಲ್ಲದೆ ಚಿ.ನಾ.ಹಳ್ಳಿಯಿಂದ ಬೇರೆ ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರು ಸಾಕಷ್ಟು ಮಂದಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇರುತ್ತಾರೆ, ತುಂಬಿ ತುಳಕುವ ಬಸ್‍ಗಳಲ್ಲಿ ಜಾಗವಿಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ತೆರಳಲು ಬಸ್‍ನ ಬಾಗಿಲ ಬಳಿ ನೇತಾಡಿಕೊಂಡೇ ತೆರಳುವ ದೃಶ್ಯ ಸಾಮಾನ್ಯವಾಗಿ ಪ್ರತಿನಿತ್ಯ ಕಂಡುಬರುತ್ತದೆ.

      ಬೆಳಗ್ಗೆ 6.30ರಿಂದ 10 ಗಂಟೆವರೆಗೆ ವಿದ್ಯಾರ್ಥಿಗಳು, ಉದ್ಯೋಗಸ್ಥರೇ ಪಟ್ಟಣದಿಂದ ತುಮಕೂರು, ಬೆಂಗಳೂರುಗಳಿಗೆ ಹೆಚ್ಚಾಗಿ ತೆರಳುತ್ತಿದ್ದಾರೆ, ಇನ್ನೂ ಬಸ್ ಪಾಸ್ ಮಾಡಿಸಿರುವ ವಿದ್ಯಾರ್ಥಿಗಳಂತೂ ಕೆ.ಎಸ್.ಆರ್.ಟಿ.ಸಿ ಬಸ್‍ಗಾಗಿಯೇ ಕಾಯುತ್ತಾರೆ, ಬಸ್ ಹತ್ತುವ ವೇಳೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು, ಪ್ರಯಾಣಿಕರು ಬಸ್‍ನಲ್ಲಿ ಕೂರುವಷ್ಠು ಜಾಗವಿಲ್ಲದೆ ನಿಂತುಕೊಂಡೇ ದೂರದೂರುಗಳಿಗೆ ಪ್ರಯಾಣಿಸುತ್ತಾರೆ, ಬಸ್ ಸಿಗದೆ ಹಲವರು ತಾವು ತೆರಳುವ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗದೆ ಪ್ರತಿ ದಿನ ತಡವಾಗಿಯೇ ತೆರಳುತ್ತಿದ್ದೇವೆ ಎಂದು ಪ್ರಯಾಣಿಕರೊಬ್ಬರು ಪತ್ರಿಕೆಗೆ ತಿಳಿಸಿದರು.

ತುಮಕೂರುಗೆ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ತೆರಳುತ್ತಾರೆ, ವಿದ್ಯಾರ್ಥಿಗಳು ಕಳೆದ ಹತ್ತು ವರ್ಷಗಳಿಂದಲೂ ಬಸ್‍ನ ಸಮಸ್ಯೆ ಎದುರಿಸುವುದನ್ನು ನೋಡುತ್ತಲೇ ಇದ್ದೇವೆ, ಮುಂಜಾನೆಯೇ ಎದ್ದು ಕಾಲೇಜಿಗೆ ತೆರಳುವ ಹಲವು ವಿದ್ಯಾರ್ಥಿಗಳು ಬೆಳಗಿನ ಉಪಹಾರ ಮಾಡದೆಯೇ ಬಸ್‍ಗಾಗಿಯೇ ಬರುತ್ತಾರೆ, ಬಸ್ ಸಿಕ್ಕಿದ ನಂತರ ನಿಂತುಕೊಂಡು, ನೇತಾಡಿಕೊಂಡು ತುಮಕೂರಿಗೆ ತೆರಳುವಷ್ಟರಲ್ಲಿ ಸುಸ್ತಾಗಿ ಕೆಳಗೆ ಬಿದ್ದಿರುವ ಪ್ರಸಂಗಗಳೂ ಇವೆ, ಈ ಘಟನೆಗಳನ್ನೆಲ್ಲಾ ನೋಡಿದರೆ ತುಂಬಾ ಬೇಸರವಾಗುತ್ತದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

      ಬಸ್‍ನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು, ಬಸ್ ಬಾಗಿಲು ಬಳಿ ನಿಂತುಕೊಂಡೇ ಹೋಗುತ್ತಿದ್ದಾರೆ, ಈಗ ಬೇರೆ ಚಿ.ನಾ.ಹಳ್ಳಿ ಕೆ.ಬಿ.ಕ್ರಾಸ್, ತುಮಕೂರು ರಸ್ತೆಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಬಸ್ ಸ್ವಲ್ಪ ವಾಲಿದರೂ ನೇತಾಡುತ್ತಿರುವ ಪ್ರಯಾಣಿಕರು ಬಸ್‍ನಿಂದ ಕೆಳಗೆ ಬೀಳುವ ಸಂಭವವೂ ಇದೆ, ಪ್ರಯಾಣಿಕರಿಗೆ ಪ್ರಾಣಾಪಾಯಾವೂ ಇದೆ, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಪ್ರಯಾಣಿಕರ, ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹರಿಸಿದರೆ ಸಾವಿರಾರು ಜನರಿಗೆ ಅನುಕೂಲವಾಗಲಿದೆ.

-ದೀಪಕ್.ಆರ್, ಪ್ರಯಾಣಿಕ.

Recent Articles

spot_img

Related Stories

Share via
Copy link