ಲಕ್ನೋ
ಪ್ರಧಾನಿ ನರೇಂದ್ರ ಮೋದಿಯವರನ್ನು ಮಿಮಿಕ್ರಿ ಮಾಡುತ್ತಾ ವ್ಯಂಗ್ಯವಾಡುತ್ತಲೇ ಹೆಚ್ಚು ಹೆಸರು ಗಳಿಸಿರುವ ಹಾಸ್ಯನಟ ಶ್ಯಾಮ್ ರಂಗೀಲಾ ಅವರು ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಹಾಸ್ಯನಟ ಶ್ಯಾಮ್ ರಂಗೀಲಾ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ವಿರುದ್ಧ ವಾರಣಾಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಮೆಸೇಜ್ನಲ್ಲಿ, ಶ್ಯಾಮ್ ರಂಗೀಲಾ ಅವರು ಪ್ರಧಾನಿ ಮೋದಿಯವರು ಅವರದೇ ಭಾಷೆಯಲ್ಲಿ ಪ್ರತಿಕ್ರಿಯೆಯನ್ನು ಪಡೆಯಬೇಕು. ಹೀಗಾಗಿ ಪ್ರಧಾನಿಯವರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ವಾರಣಾಸಿಗೆ ಬರುತ್ತಿದ್ದೇನೆ ಎಂದಿದ್ದಾರೆ.
ವಿಡಿಯೋದಲ್ಲಿ “ನಾನು, ಶ್ಯಾಮ್ ರಂಗೀಲಾ, ಹಾಸ್ಯನಟ, ನಿಮ್ಮೊಂದಿಗೆ ನನ್ನ ‘ಮನ್ ಕಿ ಬಾತ್’ ಮಾಡಲು ಬಂದಿದ್ದೇವೆ. ನಿಮ್ಮೆಲ್ಲರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ. ಶ್ಯಾಮ್ ರಂಗೀಲಾ ವಾರಣಾಸಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಲ್ಲಿ ನೀವು ಕೇಳುತ್ತಿರುವುದು ನಿಜವೇ..? ಇದು ತಮಾಷೆಯೇ..? ಎಮದು. ಇಂದು ನಾನು ನಿಮಗೆ ಹೇಳುತ್ತೇನೆ, ಇದು ತಮಾಷೆ ಅಲ್ಲ … ನಾನು ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ” ಎಂದು ಘೋಷಿಸಿದ್ದಾರೆ.
ಸೂರತ್ ಕ್ಷೇತ್ರದಲ್ಲಿ ಇತ್ತೀಚಿನ ಅವಿರೋಧ ಗೆಲುವು ಮತ್ತು ಚಂಡೀಗಢದ ಮೇಯರ್ ಚುನಾವಣೆಯಲ್ಲಿನ ವೈಫಲ್ಯವನ್ನು ಉಲ್ಲೇಖಿಸಿದ ಶ್ಯಾಮ್ ರಂಗೀಲಾ, “ಈ ಪ್ರಜಾಪ್ರಭುತ್ವದಲ್ಲಿ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಾನು ಇದನ್ನು ಒಂದು ಕಾರಣಕ್ಕಾಗಿ ಮಾಡುತ್ತಿದ್ದೇನೆ. ಏನೆಂದರೆ, ಮತ ಹಾಕಲು ಬೇರೆ ಯಾವುದೇ ಅಭ್ಯರ್ಥಿ ಇಲ್ಲ ಎಂದು ನನಗೆ ಅನಿಸುತ್ತದೆ. ಒಬ್ಬ ವ್ಯಕ್ತಿಯು ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಲು ಬಯಸಿದರೆ, ಅವನು ಅಥವಾ ಅವಳು ಆ ಹಕ್ಕು ಹೊಂದಿರುತ್ತಾರೆ. ಇವಿಎಂನಲ್ಲಿ ಯಾರದ್ದಾದರೂ ಹೆಸರು ಇರಬೇಕು. ಆದರೆ ವಾರಣಾಸಿಯಲ್ಲಿ ಜನರು ಒಬ್ಬರೇ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬ ಭಯ ನನಗಿದೆ. ಹಾಗಾಗಿ ನಾನು ಅಲ್ಲಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ . ನನ್ನ ಧ್ವನಿ ಅಲ್ಲಿಗೆ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ” ಎಂದು ಶ್ಯಾಮ್ ರಂಗೀಲಾ ಹೇಳಿದ್ದಾರೆ.
ರಾಜಸ್ಥಾನದ 29 ವರ್ಷದ ಹಾಸ್ಯನಟ ಶ್ಯಾಮ್ ರಂಗೀಲಾ, “ವಾರಣಾಸಿಯ ಜನರು ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ನನ್ನ ಉಮೇದುವಾರಿಕೆಯನ್ನು ಘೋಷಿಸಿದ ನಂತರ ನನಗೆ ದೊರೆತ ಪ್ರತಿಕ್ರಿಯೆಯಿಂದ ನಾನು ಉತ್ಸುಕನಾಗಿದ್ದೇನೆ. ನಾನು ಶೀಘ್ರದಲ್ಲೇ ವಾರಣಾಸಿಗೆ ಬರುತ್ತಿದ್ದೇನೆ. ಮೋದಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ಬರುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಚುನಾವಣಾ ಬಾಂಡ್ಗಳ ಬಗ್ಗೆ ಮೋದಿ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಶ್ಯಾಮ್ ರಂಗೀಲಾ, “ಮೊದಲ ಬಾರಿಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಆದ್ದರಿಂದ, ನನಗೆ ನಿಮ್ಮ ಬೆಂಬಲ ಬೇಕು. ನಾನು ಚುನಾವಣಾ ಬಾಂಡ್ಗಳನ್ನು ಹೊಂದಿಲ್ಲ ಮತ್ತು ಯಾರಿಂದಲೂ ತೆಗೆದುಕೊಂಡಿಲ್ಲ. ಹಾಗಾಗಿ ನನಗೂ ಸ್ವಲ್ಪ ಸಂಪತ್ತು ಬೇಕು. ನನ್ನನ್ನು ಬೆಂಬಲಿಸಿ ಮತ ನೀಡಿ” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
1994 ರಲ್ಲಿ ಜನಿಸಿದ ಶ್ಯಾಮ್ ರಂಗೀಲಾ ರಾಜಸ್ಥಾನದ ಪಿಲಿಬಂಗಾ ಪಟ್ಟಣದ ಮನಕ್ತೇರಿ ಗ್ರಾಮದವರು. ತಮ್ಮ ಮಿಮಿಕ್ರಿ ಕಲೆಯಿಂದ ಹೆಚ್ಚು ಗುರುತಿಸಲ್ಪಟ್ಟಿದ್ದಾರೆ. ವಿಶೇಷವಾಗಿ ರಾಜಕೀಯ ವ್ಯಕ್ತಿಗಳನ್ನು ಮಿಮಿಕ್ರಿ ಮಾಡುತ್ತಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಮಿಮಿಕ್ರಿ ಮೂಲಕ ರಂಗೀಲಾ ಖ್ಯಾತಿ ಗಳಿಸಿದರು.
ಅವರ ವೃತ್ತಿಜೀವನವು 2017 ರಲ್ಲಿ ಪಿಎಂ ಮೋದಿ ಅವರ ಮಿಮಿಕ್ರಿಗಳ ಮೂಲಕ ಸಕತ್ ಹೈಪ್ ಆಯಿತು. ಇದನ್ನು ಅವರು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡರು. ಹಲವು ಭಾರಿ ಭಾರೀ ಟೀಕೆಗಳು ಮತ್ತು ಬೆದರಿಕೆಗಳನ್ನು ಎದುರಿಸಿರುವ ಅವರು, ತಮ್ಮ ಕೆಲಸ ಮುಂದುವರೆಸಿದ್ದಾರೆ. ಈಗ ಪ್ರಧಾನಿ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ








