ತುಮಕೂರು:

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ವ್ಯಾಪಕ ಪ್ರಚಾರವಿರುವ ದಿನಪತ್ರಿಕೆ ಮತ್ತು ಟಿವಿ ಮಾಧ್ಯಮದಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳ ಬಗ್ಗೆ 3 ಬೇರೆ ಬೇರೆ ದಿನಾಂಕಗಳಲ್ಲಿ 43ರಲ್ಲಿ ಪ್ರಚಾರ ಮಾಡಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ/ರಾಜ್ಯ ರಾಜಕೀಯ ಪಕ್ಷಗಳು, ನೋಂದಣಿಯಾಗದ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯ ಕ್ರಿಮಿನಿಲ್ ಪ್ರಕರಣಗಳ ಬಗ್ಗೆ ಮೂರು ಬೇರೆ ಬೇರೆ ದಿನಾಂಕಗಳಲ್ಲಿ ನಿಗಧಿತ ನಮೂನೆ ಈoಡಿmಚಿಣ 43ರಲ್ಲಿ ವ್ಯಾಪಕ ಪ್ರಚಾರ ಇರುವ ದಿನ ಪತ್ರಿಕೆ, ಪಕ್ಷದ ವೆಬ್ಸೈಟ್ ಮತ್ತು ಟಿ.ವಿ. ಚಾನಲ್ಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದರು.
ಅಭ್ಯರ್ಥಿಗಳು ದಿನಪತ್ರಿಕೆಗಳಲ್ಲಿ ಟಿ.ವಿ. ಚಾನಲ್ಗಳಲ್ಲಿ ಪ್ರಕಟಿಸಿರುವ ಮಾಹಿತಿಯ ದಾಖಲೆಗಳನ್ನು ಚುನಾವಣೆ ಮುಗಿದ ನಂತರ ನಮೂನೆ ಸಿ-4ರಲ್ಲಿ ಹಾಗೂ ರಾಜಕೀಯ ಪಕ್ಷಗಳು ದಿನ ಪತ್ರಿಕೆ, ಪಕ್ಷದ ವೆಬ್ಸೈಟ್ ಮತ್ತು ಟಿ.ವಿ. ಚಾನಲ್ಗಳಲ್ಲಿ ಪ್ರಕಟಿಸಿರುವ ಮಾಹಿತಿಯ ದಾಖಲೆಗಳನ್ನು ನಮೂನೆ ಸಿ-5ರಲ್ಲಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನವೆಂಬರ್ 23ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸುವಾಗ ನಿಗಧಿತ ನಮೂನೆ-2ಇ ಎಲ್ಲಾ ಕಾಲಂ ಭರ್ತಿ ಮಾಡಿ ರುಜು ಮಾಡಬೇಕು. ನಿಗಧಿತ ನಮೂನೆಯ ಎಲ್ಲಾ ಕಾಲಂಗಳನ್ನು ಭರ್ತಿ ಮಾಡದ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು. ನಾಮಪತ್ರದೊಂದಿಗೆ ಇತ್ತೀಚಿನ 3 ತಿಂಗಳ ಒಳಗೆ ತೆಗೆಸಿರುವ ಅಭ್ಯರ್ಥಿಯ 3 ಪಾಸ್ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರಗಳನ್ನು ಲಗತ್ತಿಸಬೇಕು. ಭಾವಚಿತ್ರದ ಹಿಂದೆ ಅಭ್ಯರ್ಥಿಯು ಸಹಿ ಮಾಡಬೇಕು. ನಿಗಧಿತ ನಮೂನೆಯಲ್ಲಿ ಅಭ್ಯರ್ಥಿಯ ಹೆಸರು, ವಯಸ್ಸಿನ ವಿವರವನ್ನು ಸ್ಪುಟವಾಗಿ ನಮೂದಿಸಬೇಕು.
ಅಭ್ಯರ್ಥಿ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಬಗ್ಗೆ ತಹಸೀಲ್ದಾರರು ನೀಡಿರುವ ಮತದಾರರ ಪಟ್ಟಿಯ ದೃಢೀಕೃತ ಪ್ರತಿ ಲಗತ್ತಿಸಬೇಕು. ಹತ್ತು ಜನ ಸೂಚಕರ ಹೆಸರು, ಭಾಗದ ಸಂಖ್ಯೆ, ಕ್ರಮ ಸಂಖ್ಯೆ, 14-ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ನಮೂದುಗಳನ್ನು ಸರಿಯಾಗಿ ನಮೂದಿಸಬೇಕು. ಅಭ್ಯರ್ಥಿಯು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ನೋಂದಾಯಿತ ರಾಜಕೀಯ ಪಕ್ಷದಿಂದ ಸ್ವರ್ಧಿಸಿದ್ದಲ್ಲಿ ನವೆಂಬರ್ 23ರ ಮಧ್ಯಾಹ್ನ 3 ಗಂಟೆ ಒಳಗಾಗಿ ನಮೂನೆ ಎಎ ಮತ್ತು ಬಿಬಿ ಸಲ್ಲಿಸಬೇಕು ಎಂದರು.
ಸಾಮಾನ್ಯ ಅಭ್ಯರ್ಥಿ ಆಗಿದ್ದಲ್ಲಿ 10,000 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿ( ತಹಸೀಲ್ದಾರ್ರಿಂದ ಪಡೆದ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು) ಆಗಿದ್ದಲ್ಲಿ 5,000 ರೂ. ಠೇವಣಿ ಜಮಾ ಮಾಡಬೇಕು. ಜಮಾ ಮಾಡಿದ ರಶೀದಿ ಲಗತ್ತಿಸಬೇಕು. ಮತಪತ್ರದಲ್ಲಿ ಅಭ್ಯರ್ಥಿಯ ಹೆಸರನ್ನು ಹೇಗೆ ಮುದ್ರಿಸಬೇಕು ಎಂಬ ಬಗ್ಗೆ ಕನ್ನಡ ಮತ್ತು ಇಂಗ್ಲೀಷ್ನಲ್ಲಿ ವಿವರ ಲಗತ್ತಿಸಬೇಕು ಹಾಗೂ ಅಭ್ಯರ್ಥಿಯ ಮಾದರಿ ರುಜು ಲಗತ್ತಿಸಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ಹಾಗೂ ನಾಮಪತ್ರ ಸಲ್ಲಿಸಿದ ನಂತರ ಯಾವುದೇ ರೀತಿಯ ಮೆರವಣಿಗೆ, ಸಾರ್ವಜನಿಕ ಸಭೆ, ಮೋಟಾರ್/ಬೈಕ್/ಸೈಕಲ್ ರ್ಯಾಲಿಯಂತಹ ರೋಡ್ಶೋ ನಡೆಸುವುದನ್ನು ನಿಷೇಧಿಸಲಾಗಿದೆ.ಚುನವಣಾ ಪ್ರಚಾರ ಅವಧಿಯಲ್ಲಿ ಅಭ್ಯರ್ಥಿಗಳು ಕನಿಷ್ಟ 200 ಮಂದಿ ಮೀರದಂತೆ ಒಳಾಂಗಣ ಸಭೆ ಹಾಗೂ 1000 ಮಂದಿ ಮೀರದಂತೆ ತಾರಾ ಪ್ರಚಾರಕರ (ಸ್ಟಾರ್ ಕ್ಯಾಂಪೇನರ್) ಮತ್ತು 500 ಮಂದಿ ಮೀರದಂತೆ ಇತರೆ ಹೊರಾಂಗಣ ಸಭೆಗಳನ್ನು ನಡೆಸಲು ಅವಕಾಶವಿದೆ. ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಮಾಡಿದ ವೆಚ್ಚದ ವಿವರವನ್ನು ಚುನಾವಣಾಧಿಕಾರಿಗಳಿಗೆ ಕಡ್ಡಾಯವಾಗಿ ಒದಗಿಸಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಸೇರಿ(1+2)ದಂತೆ ಮೂರು ಮಂದಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಸಿಪಿಐ, ಸಿಪಿಎಂ, ಕಾಂಗ್ರೆಸ್, ಬಿಜೆಪಿ ಪಕ್ಷದ ಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








