ಬಾಕಿವೇತನಕ್ಕಾಗಿ ಡಿಗ್ರೂಪ್ ನೌಕರರ ಪ್ರತಿಭಟನೆ

ದಾವಣಗೆರೆ:

ಕೊರೊನಾ ಸಂದರ್ಭದಲ್ಲಿ ಸೋಂಕಿತರ ಸ್ವಚ್ಛತೆ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಿದ ಆಸ್ಪತ್ರೆಗಳ ಡಿ ಗ್ರೂಪ್ ನೌಕರರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಖಾಯಂಯೇತರರ ನೌಕರರ ಒಕ್ಕೂಟದಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಪಂ ಸಿಇಒ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ್, ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ತಡೆಯಲು ಅವಿರತ ಶ್ರಮ ವಹಿಸಿದ ನೌಕರರಲ್ಲಿ ಗ್ರೂಪ್ ಡಿ ನೌಕರರ ಶ್ರಮವೂ ಮುಖ್ಯವಾಗಿದೆ. ಸೋಂಕಿತರನ್ನು ಮಾತನಾಡಿಸಲು ಹೆದರುತ್ತಿದ್ದ ಸಂದರ್ಭದಲ್ಲಿ ರೋಗಿಗಳಿಗೆ ಅತ್ಯಂತ ಸಮೀಪದಲ್ಲಿದ್ದುಕೊಂಡು, ಕೋವಿಡ್ ರೋಗಿಗಳ ಸ್ವಚ್ಛತೆ, ಕೋವಿಡ್‍ನಿಂದ ಮೃತಪಟ್ಟವರ ಹೆಣಗಳನ್ನ ಸಾಗಿಸುವ ಕೆಲಸ ಮಾಡಿದ್ದಾರೆ ಎಂದರು.

ನೌಕರರಿಗೆ ವೇತನ ನೀಡದೇ ಕೆಲಸದ ಒತ್ತಡ ಹಾಕಲಾಗುತ್ತಿದೆ. ವೇತನ ಪಾವತಿಸುವಂತೆ ಗುತ್ತಿಗೆದಾರನಿಗೆ ಆರೋಗ್ಯ ಇಲಾಖೆ ಯಾವುದೇ ಸೂಚನೆ ನೀಡಿಲ್ಲ. ಇದೇ ಕೆಲಸವನ್ನ ನಂಬಿಕೊಂಡಿರುವ ನೌಕರರಿಗೆ ಸ್ವಚ್ಚ ಭಾರತ್ ಎಂದು ಘೋಷಣೆ ಮಾಡಿರುವ ಸರ್ಕಾರ ಸುಮಾರು 10 ತಿಂಗಳ ವೇತನ ಮತ್ತು ಸರ್ಕಾರದ ಆದೇಶ ಆದಾಗಲಿಂದಲೂ ಕೋವಿಡ್ ರಿಸ್ಕ್ ಅಲೋಯೆನ್ಸ್ ಪಾವತಿಸಿಲ್ಲ. ಆದ್ದರಿಂದ ಈ ನೌಕರರ ಕುಟುಂಬಗಳು ಬೀದಿಪಾಲಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಜಿಪಂ ಸಿಇಓ ಕೇಳಿದರೆ ಸರ್ಕಾರಕ್ಕೆ 1ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಗಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಅನುದಾನ ಬಂದ ತಕ್ಷಣವೇ ಹೇಳಿದ್ದಾರೆ. ಅಧಿಕಾರಿಗಳ ತಪ್ಪಿನಿಂದ ನೌಕರರಿಗೆ ವೇತನ ಪಾವತಿ ಆಗುತ್ತಿಲ್ಲ. ಕಾರಣ ಸರ್ಕಾರದ ಅನುದಾನಕ್ಕೆ ಕಾಯದೇ ಬೇರೆ ಮೂಲಗಳಿಮದ ವೇತನ ತಕ್ಷಣವೇ ಪಾವತಿ ಮಾಡಬೇಕೆಂದು ಆಗ್ರಹಿಸಿದರು.

ನೌಕರರನ್ನು ಕೆಲಸದಿಂದ ತೆಗೆದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲಾ ನೌಕರರಿಗೆ ಇಎಸ್‍ಐ, ಇಪಿಎಫ್ ಸೌಲಭ್ಯ ಕಲ್ಪಿಸಬೇಕು. ವಾರದ ರಜೆ ಮತ್ತು ಪರಿಹಾರ ರಜೆ ಕೊಡಬೇಕು. ಗ್ರೂಪ್ ಡಿ ನೌಕರರ ಕುಂದುಕೊರತೆಗಳ ಸಮಿತಿ ರಚಿಸಬೇಕು ಹಾಗೂ ಮಾಸಿಕ ಸಭೆ ಕರೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಟೊ ಚಾಲಕರ ಸಂಘದ ಶ್ರೀನಿವಾಸಮೂರ್ತಿ, ಕಟ್ಟಡ ಕಾರ್ಮಿಕರ ಸಂಘಟನೆಯ ಹೊನ್ನೂರು ತಿಮ್ಮಣ್ಣ, ಆರೋಗ್ಯ ಇಲಾಖೆ ನೌಕರರಾದ ಕುಮಾರ್, ಸರಸ್ವತಿ, ಮಮತ, ಕವಿತ, ಮಂಜುನಾಥ್, ಶಿವಮ್ಮ, ಮಹಾಂತೇಶ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap