ಗದಗ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ವಶದಲ್ಲಿರುವ ನಟ ದರ್ಶನ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಎರಡು ತಿಂಗಳ ಹಿಂದೆ ಅನೇಕಲ್ನಲ್ಲಿರುವ ದರ್ಶನ್ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಶ್ರೀಧರ್ (35) ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಇದೀಗ ಮತ್ತೆ ಚರ್ಚೆ ಆರಂಭವಾಗಿದ್ದು, ಮತ್ತೊಬ್ಬ ಮಾಜಿ ಮ್ಯಾನೇಜರ್ ಗದಗದ ಮಲ್ಲಿಕಾರ್ಜುನ ಸಂಕನಗೌಡರ 2018ರಿಂದ ನಾಪತ್ತೆಯಾಗಿರುವುದು ಮುನ್ನೆಲೆಗೆ ಬರುತ್ತಿದೆ.
ಗದಗದ ಪಂಚಾಕ್ಷರಿನಗರದಲ್ಲಿ ನೆಲೆಸಿರುವ ಮಲ್ಲಿಕಾರ್ಜುನ ಕುಟುಂಬಸ್ಥರು, ಆತ ಎಲ್ಲಿದ್ದಾನೆ ಎಂಬುದೇ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮಲ್ಲಿಕಾರ್ಜುನ ಎಲ್ಲಿದ್ದಾರೆಂದು ತಮಗೆ ತಿಳಿದಿಲ್ಲದ ಕಾರಣ ಅವರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಅವರ ಸಹೋದರ ಹೇಳಿದ್ದಾರೆ.
ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದ ನಂತರ ಮಲ್ಲಿಕಾರ್ಜುನ್ ಅವರ ಸಂಬಂಧಿಕರು ಮತ್ತು ಸ್ನೇಹಿತರು ಈಗ ಭಯದಲ್ಲಿ ಬದುಕುತ್ತಿದ್ದಾರೆ.
ಮಲ್ಲಿಕಾರ್ಜುನ್ ಅವರು ಚಲನಚಿತ್ರ ನಿರ್ಮಾಪಕರಾಗಲು ಬಯಸಿದ್ದರು ಮತ್ತು ನಟ ಶಿವ ರಾಜ್ಕುಮಾರ್ ಅಭಿನಯದ ‘ವಾಲ್ಮೀಕಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ಎನ್ನಲಾಗಿದೆ.
‘ವಾಲ್ಮೀಕಿ’ ಸೆಟ್ನಲ್ಲಿ ದರ್ಶನ್ ಅವರ ಸಹೋದರ ದಿನಕರ್ ಸಹ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೀಗಾಗಿ, ಮಲ್ಲಿಕಾರ್ಜುನ ಮತ್ತು ದರ್ಶನ್ ನಡುವೆ ಸಂಪರ್ಕ ಬೆಳೆದಿತ್ತು. ನಂತರ ಮಲ್ಲಿಕಾರ್ಜುನ ಅವರು ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡರು ಮತ್ತು ಆ ಸಮಯದಲ್ಲಿ ದರ್ಶನ್ ಅವರಿಗೆ ತಿಳಿಯದಂತೆ 2 ಕೋಟಿ ರೂ. ತೆಗೆದುಕೊಂಡಿದ್ದರು ಮತ್ತು ‘ಪ್ರೇಮ ಬರಹ’ ಬಿಡುಗಡೆಯಾದ ನಂತರ ಸರ್ಜಾ ಅವರಿಗೆ 1 ಕೋಟಿ ರೂ. ವಂಚಿಸಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಮಲ್ಲಿಕಾರ್ಜುನ ವಿರುದ್ಧ ಸರ್ಜಾ ಪ್ರಕರಣ ದಾಖಲಿಸಿದ್ದಾರೆ.
