ದಾವಣಗೆರೆ:
ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹಾಗೂ ಭತ್ತಕ್ಕೆ ಮೂರು ಸಾವಿರ ರೂಗಳ ಮೇಲೆ ಬೆಂಬಲ ಘೋಷಿಸಲು ಒತ್ತಾಯಿಸಿ ದಾವಣಗೆರೆ ನಗರದಲ್ಲಿ ರೈತರು ಭತ್ತವನ್ನು ರಸ್ತೆಯಲ್ಲೇ ಸುರಿದು ಪ್ರತಿಭಟನೆ ನಡೆಸಿದರು. ಶನಿವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ನೂರಾರು ರೈತರು ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಹೊರಟು ನಗರದ ಎಸಿ ಕಚೇರಿ ಬಳಿ ಜಮಾಯಿಸಿ ಟ್ಯ್ರಾಕ್ಟರ್ ನಲ್ಲಿ ತಂದ ಭತ್ತವನ್ನು ರಸ್ತೆಯಲ್ಲೇ ಸುರಿದ ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತರು ಬೆಳೆಯುವ ಬೆಳೆಗಳಿಗೆ ಬೆಲೆ ದಿನೇ ದಿನೇ ಕುಸಿಯುತ್ತಿದೆ. 1900ಕ್ಕೆ ಭತ್ತವನ್ನು ಖರೀದಿಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರ ಈ ಕೂಡಲೇ ಮೂರು ಸಾವಿರ ರೂ ಗಳ ಮೇಲೆ ಬೆಂಬಲ ಬೆಲೆಯನ್ನು ಕೊಡಬೇಕು. ಜೊತೆಗೆ ಆದಷ್ಟು ಬೇಗ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಒತ್ತಾಯಿಸಿದರು.ಈ ನಡುವೆ ಬೈಕ್ ಸವಾರನೊಬ್ಬ ಪ್ರತಿಭಟನೆಯ ನಡುವೆ ನುಗ್ಗಿದ್ದರಿಂದ ರೊಚ್ಚಿಗೆದ್ದ ರೈತರು ಬೈಕನ್ನು ತಳ್ಳಲಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡಿಯಿತು.
