ಗುರುವಿನ ಗುಲಾಮ ಆಗುವುದರಿಂದ ಉತ್ತಮ ಭವಿಷ್ಯ

 ದಾವಣಗೆರೆ:

      ಗುರುವಿನ ಗುಲಾಮನಾಗುವುದು ಎಂದರೆ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ನೀಡುವುದರ ಜತೆಗೆ ಪ್ರೀತಿಯಿಂದ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸ್ಮಾರ್ಟ್ ಸಿಟಿ ಕಾರ್ಯನಿರ್ವಾಹಕ ಅಧಿಕಾರಿ ಅಸಾದ್ ಷರೀಫ್ ತಿಳಿಸಿದರು.

      ಇಲ್ಲಿನ ಮಿಲ್ಲತ್ ಸಭಾಂಗಣದಲ್ಲಿ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಪೋಷಕರ ಬಗ್ಗೆ ಉತ್ತಮ ಮನೋಭಾವ ಹೊಂದಿರಬೇಕು. ವಿದ್ಯಾಭ್ಯಾಸದ ಜತೆ, ಜತೆಗೆ ತಂದೆ-ತಾಯಂದಿರು ಕೈಗೊಂಡಿರುವ ಕೆಲಸ ಕಾರ್ಯಗಳಿಗೂ ಕೈಜೋಡಿಸಬೇಕೆಂದು ಸಲಹೆ ನೀಡಿದರು.

      ಬೇರೆಯವರಲ್ಲಿ ನ್ಯೂನತೆಗಳನ್ನು ಹುಡುಕಬಾರದು. “ನಂಬಿಕೆಯೇ ಜಿವನ ಸಂಶಯವೇ ಮರಣ” ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ನಂಬಿಕೆಯಿಂದ ಜೀವನ ನಡೆಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.

      ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಸಯ್ಯದ್ ಸೈಫುಲ್ಲಾ ಮಾತನಾಡಿ, 1981ರಲ್ಲಿ ಕೇವಲ 56 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ. ಪ್ರಸ್ತುತ ಸುಮಾರು 4 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

     ಬಡವರಾಗಿ ಹುಟ್ಟುವುದು ತಪ್ಪಲ್ಲ, ಆದರೆ, ಬಡವರಾಗಿ ಸಾಯುವುದು ತಪ್ಪು. ಶ್ರದ್ಧೆಯಿಂದ ಶ್ರಮವಹಿಸಿ ಓದಿ ಗುರಿಯನ್ನು ಮುಟ್ಟಬೇಕು. ಮಾನವತೆಯ ಏಳಿಗೆಗಾಗಿ ಒಳ್ಳೆಯದನ್ನು ಕಲಿಯುವ ಹಾಗೂ ಕಲಿಸುವ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. 

      ಕಾರ್ಯಕ್ರಮದಲ್ಲಿ ಡಾ.ನಸಿರ್ ಅಹಮದ್, ಸಯ್ಯದ್ ಅಲಿ, ಯೂಸುಫ್ ಪಾಷ, ಕುಶ್ತರಿ ಬಾನು , ಕಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು. ಮಿಲ್ಲತ್ ಐಟಿಐ ಪ್ರಾಚಾರ್ಯರಾದ ಮಹಮ್ಮದ್ ಜಬಿವುಲ್ಲಾ ಸ್ವಾಗತಿಸಿದರು. ಮಿಲ್ಲತ್ ಕಾಲೇಜಿನ ಪ್ರಾಚಾರ್ಯ ಡಾ.ದಾವೂದ್ ಮೊಹಸಿನ್ ಪ್ರಾಸ್ತಾವಿಕ ಮಾತನಾಡಿದರು. ಉಪ ಪ್ರಾಚಾರ್ಯ ಜಾಕಿರ್ ಹುಸೇನ್ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link