ಚಿಕ್ಕನಾಯಕನಹಳ್ಳಿ:
ಶೆಟ್ಟಿಕೆರೆ ಹೋಬಳಿ ಸಾಸಲು ಗೊಲ್ಲರಹಟ್ಟಿಯಲ್ಲಿ ಮಂಗಳವಾರದಿಂದ ಗುರುವಾರದವರೆಗೂ ಶ್ರೀ ಬಾಲಕೃಷ್ಣಸ್ವಾಮಿ ಹಾಗೂ ಶ್ರೀ ಮೂಡಲಗಿರಿ ತಿಮ್ಮಪ್ಪಸ್ವಾಮಿ ದೇವರುಗಳು ದೀಪೋತ್ಸವ ಕಾರ್ಯಕ್ರಮ ಜರುಗಿತು.ಆರಂಭದ ಮೊದಲ ದಿನ ಮಂಗಳವಾರದಂದು ದೇವರುಗಳನ್ನು ಪಟ್ಟದ ದೇವರ ಕೆರೆಗೆ ಕರೆದೊಯ್ದು ಗಂಗಾಪೂಜೆ ನೆರವೇರಿಸಲಾಯಿತು. ಸಂಜೆ ಸಾಸಲು ಗ್ರಾಮಕ್ಕೆ ಆಗಮಿಸಿದ ದೇವರುಗಳನ್ನು ಆ ಗ್ರಾಮದ ಜನತೆ ವೈಭವಯುತವಾಗಿ ಮೆರವಣಿಗೆಯ ಮೂಲಕ ಬರಮಾಡಿಕೊಂಡರು. ರಾತ್ರಿ ದೇವರುಗಳನ್ನು ಸಾಸಲು ಗೊಲ್ಲರಹಟ್ಟಿಗೆ ಕರೆತರಲಾಯಿತು.
ರಾತ್ರಿ ನಡೆದ ಉತ್ಸವದಲ್ಲಿ ಸಮೀಪದ ಯರೇಹಳ್ಳಿಪಾಳ್ಯದ ವೀರಗಾರಿಕೆಯವರು ಭಾಗವಹಿಸಿದ್ದರು. ಸಿಡಿಮದ್ದುಗಳೊಂದಿಗೆ ಉತ್ಸವ ಜರುಗಿತು. ಮಾರನೆಯ ದಿನ ದೇವರಿಗೆ ಬಿಟ್ಟಿರುವ ನೂತನ ಬಸವನ ಪೂಜೆ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಸವನನ್ನು ದೇವರಿಗೆ ಸಮರ್ಪಿಸಲಾಯಿತು.ಇದಾದ ನಂತರ ಮಣೇವು ಕಾರ್ಯಕ್ರಮ ವಿಶಿಷ್ಟ ಆಚರಣೆಯಾಗಿದ್ದು, ಗೊಲ್ಲರ ಸಾಂಪ್ರದಾಯಿಕ ಆಚರಣೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು. ದೇವರುಗಳ ಹರಕೆ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು. ಇಂದು ಬೆಳಗ್ಗೆ ದೀಪೋತ್ಸವ ಜರುಗಲಿದೆ.
