ಬೆಂಗಳೂರು
ಬೆಂಗಳೂರು ಉತ್ತರ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ದೇವನಹಳ್ಳಿಯ ದೊಡ್ಡ ಸಾಗರದಲ್ಲಿ ಘಟನೆ ನಡೆದಿದ್ದು, ಚರಂಡಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ ವೆಂಕಟೇಶ್ ಎಂಬವರನ್ನು ಸಿನಿಮೀಯ ರೀತಿಯಲ್ಲಿ ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವೆಂಕಟೇಶ್ ಬಚಾವ್ ಆಗಿದ್ದಾರೆ.
ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ಹೊರಮಠಕ್ಕೂ ಜಲದಿಗ್ಬಂಧನವಾಗಿದೆ. ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಇಷ್ಟೇ ಅಲ್ಲ, ನಾಯಕನಹಟ್ಟಿ ಪೊಲೀಸ್ ಠಾಣೆಯೂ ಜಲಾವೃತವಾಗಿದ್ದು, ಠಾಣೆ ಆವರಣದಲ್ಲಿದ್ದ ಜೀಪ್ ಮುಳುಗಡೆಯಾಗಿದೆ. ಪೊಲೀಸ್ ಠಾಣೆಯೊಳಗೆ ಮಳೆ ನೀರು ನುಗ್ಗಿದ್ದು, ದಾಖಲೆಗಳನ್ನ ರಕ್ಷಿಸಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.ದಾವಣಗೆರೆ ಜಿಲ್ಲೆ ತಾಲೂಕಿನ ನ್ಯಾಮತಿ ತಾಲೂಕಿನಲ್ಲಿರೋ ಯರಗನಾಳ ಗ್ರಾಮದಲ್ಲಿ ಗೌಡನಕೆರೆ ಕೋಡಿ ಬಿದ್ದು 50 ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಾರುಗಳು ಮುಳುಗಡೆಯಾಗಿದೆ. ಆತಂಕದಲ್ಲಿದ್ದ 40 ಗ್ರಾಮಸ್ಥರನ್ನ ರಕ್ಷಣೆ ಮಾಡಲಾಗಿದೆ.
ಹಾಸನದ ಹಾಸನಾಂಬ ಬಡಾವಣೆಗೂ ಜಲಬೇಲಿ ಬಿದ್ದಿದೆ. ಮನೆಯಿದ ಹೊರಗೆ ಬರಲಾಗದೇ ಜನ ಲಾಕ್ ಆಗದ್ದಾರೆ. ಕುಡಿಯೋಕೂ ನೀರಿಲ್ಲ ಅಂತಾ ಬಡಾವಣೆ ನಿವಾಸಿಗಳು ಗೋಳಾಡುತ್ತಿದ್ದಾರೆ.
ತೇಜೂರು, ಉದ್ದೂರು ಕೆರೆ ಕೋಡಿ ಬಿದ್ದು, ಹಾಸನದ ಬೇಲೂರು ರಸ್ತೆ ಬಂದ್ ಆಗಿದೆ. ರಸ್ತೆ ಮೇಲೆ ಬೃಹತ್ ಪ್ರಮಾಣದ ನೀರು ಹರಿಯುತ್ತಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಇದೇ ರಸ್ತೆಯಲ್ಲಿ ರಭಸವಾಗಿರೋ ನೀರನ್ನ ಲೆಕ್ಕಿಸದೇ ಬೈಕ್ ಸವಾರರು ಓಡಾಡ್ತಿದ್ದಾರೆ. ನೀರಲ್ಲಿ ನಿಯಂತ್ರಣ ಕಳೆದುಕೊಂಂಡ ಬೈಕ್ ಸವಾರರನ್ನ ಜನರು ರಕ್ಷಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಡಾವಣೆಗಳು ಜಲಾವೃತವಾಗಿದೆ. ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ಜೌಡೇನಹಳ್ಳಿ ಗ್ರಾಮದಲ್ಲಿ ಕಕ್ಕೇರಿ ಕೆರೆ ಕೋಡಿ ಬಿದ್ದು, ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿದೆ.ಕೇವಲ ಬೆಂಗಳೂರಷ್ಟೇ ಅಲ್ಲದೆ, ಕರ್ನಾಟಕ ಇತರ ಜಿಲ್ಲೆಗಳಲ್ಲಿಯೂ ರಣ ಮಳೆಯಾಗಿದ್ದು, ಜನ ನಡುಗಿ ಹೋಗಿದ್ದಾರೆ.
