ನವದೆಹಲಿ :
ಕ್ರಿಕೆಟರ್ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ಅವರು ನಾಲ್ಕು ವರ್ಷಗಳ ದಾಂಪತ್ಯವನ್ನು ಇತ್ತೀಚೆಗೆ ಕೊನೆಗೊಳಿಸಿದ್ದಾರೆ. ಅವರು ವಿಚ್ಛೇದನದ ಬಳಿಕ ತಲೆಮೇಲೆ ಕೈ ಹೊತ್ತು ಸುಮ್ಮನೆ ಕೂತಿಲ್ಲ ಅಥವಾ ಯಾರಾದರೂ ಏನಾದರೂ ಅಂದುಕೊಂಡರೆ ಎಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದನ್ನು ನಿಲ್ಲಿಸಿಲ್ಲ. ಧನಶ್ರೀ ಈಗ ಹಿಂದಿಯ ದೊಡ್ಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರು ಚಿತ್ರರಂಗಕ್ಕೂ ಕಾಲಿಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಹಿಂದಿಯಲ್ಲಿ ‘ಖತ್ರೋ ಕೆ ಖಿಲಾಡಿ’ ಸಾಕಷ್ಟು ಜನಪ್ರಿಯತೆ ಪಡೆದ ರಿಯಾಲಿಟಿ ಶೋ. ಈಗಾಗಲೇ 14 ಸೀಸನ್ಗಳು ಬಂದು ಹೋಗಿದ್ದು, 15ನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಇದನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರು ನಡೆಸಿಕೊಡಲಿದ್ದಾರೆ. ಈ ಶೋಗೆ ಧನಶ್ರೀ ಅವರು ಬರಲಿದ್ದು, ತಮ್ಮ ಸಾಮರ್ಥ್ಯವನ್ನು ಅವರು ತೋರಿಸಲಿದ್ದಾರೆ ಎಂದು ವರದಿ ಆಗಿದೆ.
ಸದ್ಯ ‘ಖತ್ರೋ ಕೆ ಖಿಲಾಡಿ’ ತಂಡದವರು ಧನಶ್ರೀ ಜೊತೆ ಮಾತುಕತೆ ನಡೆಸಿದ್ದಾರೆ. ಧನಶ್ರೀ ಅವರು ಸದ್ಯ ಎಲ್ಲ ಕಡೆಗಳಲ್ಲೂ ಸುದ್ದಿಯಲ್ಲಿದ್ದಾರೆ. ಅವರನ್ನು ಶೋಗೆ ಕರೆತಂದರೆ ಒಳ್ಳೆಯದು ಎಂಬುದು ವಾಹಿನಿಯವರ ಆಲೋಚನೆ. ಹೀಗಾಗಿ, ಸದ್ಯ ಮೊದಲ ಹಂತದ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಫೈನಲ್ ಆದರೆ, ಅವರು ‘ಖತ್ರೋ ಕೆ ಖಿಲಾಡಿ’ಯ 15ನೇ ಸೀಸನ್ನ ಸ್ಪರ್ಧಿ ಆಗಲಿದ್ದಾರೆ. ಧನಶ್ರೀ ಅವರಿಗೆ ರಿಯಾಲಿಟಿ ಶೋ ಹೊಸದಲ್ಲ. ಈ ಮೊದಲು ‘ಝಲಕ್ ಧಿಕ್ಲಾ ಜಾ’ ಶೋನಲ್ಲಿ ಅವರು ಭಾಗಿ ಆಗಿದ್ದರು. 2023ರಲ್ಲಿ ಶೋ ಪ್ರಸಾರ ಕಂಡಿತ್ತು. ಚಹಾಲ್ ಕೂಡ ಶೋನಲ್ಲಿ ಭಾಗಿ ಆಗಿ ಪತ್ನಿಗೆ ಬೆಂಬಲ ಸೂಚಿಸಿದ್ದರು.
ಧನಶ್ರೀ ಹಾಗೂ ಚಾಹಲ್ 2020ರಲ್ಲಿ ವಿವಾಹ ಆದರು. ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ಇವರು ಈ ವರ್ಷ ಮಾರ್ಚ್ನಲ್ಲಿ ಬೇರೆ ಆದರು. ಇವರು 2022ರಿಂದಲೇ ಬೇರೆ ಬೇರೆ ಆಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಧನಶ್ರೀಗೆ 4.75 ಕೋಟಿ ರೂಪಾಯಿ ಜೀವನಾಂಶ ಸಿಕ್ಕಿದೆ.








