ಬ್ಯಾಂಕ್‌ ಮ್ಯಾನೇಜರ್‌ ಸಮಯಪ್ರಜ್ಞೆಯಿಂದ ತಪ್ಪಿದ ಡಿಜಿಟಲ್‌ ಆರೆಸ್ಟ್‌

ಮಂಗಳೂರು‌

    ಸೈಬರ್‌ ಕ್ರಿಮಿನಲ್‌ಗಳು  ದೊಡ್ಡ ಮೊತ್ತದ ಹಣವನ್ನು ಹೊಂದಿರುವ ಖಾತೆಗಳ ಮಾಹಿತಿಯನ್ನು ಹೇಗೋ ಪಡೆದುಕೊಂಡು ಡಿಜಿಟಲ್‌ ಆರೆಸ್ಟ್‌  ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಂಗಳೂರಿನಲ್ಲಿ   ಇಂಥದೊಂದು ಪ್ರಕರಣ ನಡೆಯಲಿದ್ದುದನ್ನು ಅಲರ್ಟ್‌ ಆಗಿದ್ದ ಬ್ಯಾಂಕ್‌ ಮ್ಯಾನೇಜರ್‌ ತಡೆದ ಘಟನೆ ವರದಿಯಾಗಿದೆ. ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ವೃದ್ಧ ದಂಪತಿಗಳ ಒಟ್ಟು 84 ಲಕ್ಷ ರೂಪಾಯಿ ವಂಚಕರ ಪಾಲಾಗುವುದು ತಪ್ಪಿದೆ.

    ಮುಲ್ಕಿಯ ದಾಮಸಕಟ್ಟೆ ನಿವಾಸಿಗಳಾದ ಬೆನಡಿಕ್ಟ್‌ ಫರ್ನಾಂಡಿಸ್ (84) ಹಾಗೂ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71) ಅವರಿಗೆ ಡಿಸೆಂಬರ್ 1 ರಂದು ಸೈಬರ್‌ ಕ್ರಿಮಿನಲ್‌ಗಳು ಉತ್ತರ ಪ್ರದೇಶದ ಸಿಐಡಿ ಪೊಲೀಸ್ ಎಂಬ ಸೋಗಿನಲ್ಲಿ ಮೊಬೈಲ್ ಫೋನ್- ವಾಟ್ಸ್ಯಾಪ್​ ಮೂಲಕ ಸಂಪರ್ಕಿಸಿದ್ದರು. ವೃದ್ಧ ದಂಪತಿಗಳು 6 ಕೋಟಿ ಮೋಸ ಮಾಡಿರುವುದಾಗಿ, ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಆರೆಸ್ಟ್​​ಗೆ ಒಳಪಡಿಸಿದ್ದರು.

    ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಯಿಸಬೇಕೆಂದು ಸೂಚಿಸಿದ ಮೇರೆಗೆ ದಂಪತಿ ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ಹೋಗಿದ್ದರು. ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು, ದೊಡ್ಡ ಮೊತ್ತದ ಹಣವನ್ನು ಏಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ವೃದ್ದ ದಂಪತಿ ಸರಿಯಾದ ಉತ್ತರ ನೀಡಿರಲಿಲ್ಲ. 

     ಕೂಡಲೇ ಅಲರ್ಟ್‌ ಆದ ಮ್ಯಾನೇಜರ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ದ ದಂಪತಿಗಳ ಮನೆಗೆ ತೆರಳಿ ಅವರ ಮೊಬೈಲ್​ ಪರಿಶೀಲಿಸಿದ್ದು, ಈ ಸಮಯ ಅವರು ಡಿಜಿಟಲ್ ಆರೆಸ್ಟ್​​​ಗೆ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ಹಣ ವರ್ಗಾವಣೆ ಮಾಡದಂತೆ ಸೂಚಿಸಿ, ವೃದ್ಧ ದಂಪತಿಗಳಿಗೆ ತಿಳಿವಳಿಕೆ ನೀಡಿ, ವೃದ್ದ ದಂಪತಿಗಳ ಹಣವನ್ನು ಉಳಿಸಿದ್ದಾರೆ. ಇದರ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯವರು ವಿಚಾರಣೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link