ನವದೆಹಲಿ:
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕೆ ಸೇನಾ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ಬಂಧಿಸುವ ಮೊದಲು, ಭಾರತವು 15 ವರ್ಷಗಳ ಹಿಂದೆ ಇದೇ ರೀತಿಯ ದೇಶದ್ರೋಹದ ಘಟನೆಗೆ ಸಾಕ್ಷಿಯಾಗಿತ್ತು. ಇಸ್ಲಾಮಾಬಾದ್ನಲ್ಲಿ ರಾಜತಾಂತ್ರಿಕ ಗುಪ್ತಚರ ಕಾರ್ಯಾಚರಣೆಯ ಕೇಂದ್ರದಲ್ಲಿ ಭಾರತೀಯ ವಿದೇಶಾಂಗ ಸೇವೆಯ ಗ್ರೇಡ್ ಬಿ ಅಧಿಕಾರಿಯಾಗಿದ್ದ ಮಾಧುರಿ ಗುಪ್ತಾ , ಪಾಕಿಸ್ತಾನದ ಕುಖ್ಯಾತ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಗೆ ಗುಪ್ತವಾಗಿ ಸೇವೆ ಸಲ್ಲಿಸಿದ ಆರೋಪದಡಿ ಬಂಧಿತರಾಗಿದ್ದರು.
2010ರ ಆರಂಭದಲ್ಲಿ, 26/11 ಮುಂಬೈ ಭಯೋತ್ಪಾದಕ ದಾಳಿಯ ಒಂದೂವರೆ ವರ್ಷದ ನಂತರ, ಇಸ್ಲಾಮಾಬಾದ್ನ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಗೂಢಾಚಾರಿಯೊಬ್ಬರಿರುವ ಬಗ್ಗೆ ಗುಪ್ತಚರ ಮಾಹಿತಿ ತಿಳಿಯಿತು. ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಒತ್ತಡ ತೀವ್ರವಾಗಿರುವ ಸಂದರ್ಭದಲ್ಲಿ, ಗುಪ್ತಚರ ವೈಫಲ್ಯವು ಭಾರತಕ್ಕೆ ಅಪಾಯವಾಗಿತ್ತು. ಆಗ ಗುಪ್ತಚರ ವಿಭಾಗದ ಮುಖ್ಯಸ್ಥ ರಾಜೀವ್ ಮಾಥುರ್ಗೆ ಮಾಧುರಿ ಗುಪ್ತಾ ಎಂಬ ಗ್ರೇಡ್ ಬಿ ವಿದೇಶಾಂಗ ಸೇವೆಯ ಅಧಿಕಾರಿ ಮತ್ತು ಇಸ್ಲಾಮಾಬಾದ್ನಲ್ಲಿ ಸೆಕೆಂಡ್ ಸೆಕ್ರೆಟರಿ ಆಗಿದ್ದವರ ಹೆಸರು ಶಂಕಿತರಾಗಿ ಕಾಣಿಸಿಕೊಂಡಿತು. ಉರ್ದು ಭಾಷೆಯಲ್ಲಿ ವಿದ್ವತ್ಪೂರ್ಣ ಜ್ಞಾನ, ಸೂಫಿಸಂ ಮತ್ತು ಕಾವ್ಯದಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದ ಗುಪ್ತಾ ಅವರರು ಬೇಹುಗಾರಿಕೆ ಮಾಡುತ್ತಿರುವಂತೆ ಕಾಣುತ್ತಿರಲಿಲ್ಲ. ಆದರೆ, ಸೋರಿಕೆಯಾದ ಮಾಹಿತಿಗಳ ಸುಳಿವು ಭಿನ್ನ ಕಥೆಯನ್ನು ಬಿಚ್ಚಿಟ್ಟಿತು.
ಗುಪ್ತಾ ಅವರ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ಮೊದಲಿನ ಗುಪ್ತಚರ ಮಾಹಿತಿ ಸಿಕ್ಕಾಗ, ರಾಜೀವ್ ಮಾಥುರ್ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮುಖ್ಯಸ್ಥ ಕೆ.ಸಿ.ವರ್ಮಾ ಮತ್ತು ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರಿಗೆ ತಿಳಿಸಿದರು. ಎರಡು ವಾರಗಳ ಕಾಲ ಗುಪ್ತಾ ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಈ ಅವಧಿಯಲ್ಲಿ, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ನೀಡಲಾಯಿತು. ಇದು ಸೋರಿಕೆಯಾದಾಗ ಅಸಲಿ ವಿಚಾರ ಬಹಿರಂಗವಾಗಿತ್ತು.
2010ರ ಏಪ್ರಿಲ್ 21ರಂದು ಭೂತಾನ್ನಲ್ಲಿ ನಡೆಯಲಿರುವ SAARC ಶೃಂಗಸಭೆಗೆ ಮಾಧ್ಯಮ ಸಂಬಂಧಗಳಿಗೆ ಸಹಾಯ ಮಾಡುವ ನೆಪದಲ್ಲಿ ಮಾಧುರಿ ಗುಪ್ತಾರನ್ನು ದೆಹಲಿಗೆ ಕರೆಸಿಕೊಳ್ಳಲಾಯ್ತು. ವೆಸ್ಟ್ ದೆಹಲಿಯ ತಮ್ಮ ನಿವಾಸದಲ್ಲಿ ಒಂದು ರಾತ್ರಿ ಕಳೆದ ನಂತರ, ಮರುದಿನ ಬೆಳಿಗ್ಗೆ ಅವರು ವಿದೇಶಾಂಗ ಸಚಿವಾಲಯದ ಕಚೇರಿಗೆ ಬಂದರು. ದಕ್ಷಿಣ ಬ್ಲಾಕ್ನಲ್ಲಿ, ದೆಹಲಿ ಪೊಲೀಸರ ವಿಶೇಷ ಘಟಕವು ತಕ್ಷಣವೇ ಕಾರ್ಯಪ್ರವೃತ್ತವಾಗಿ, ಗುಪ್ತಾರನ್ನು ರಕ್ಷಣಾ ರಹಸ್ಯಗಳನ್ನು ಐಎಸ್ಐಗೆ ಸೋರಿಕೆ ಮಾಡಿದ ಆರೋಪದಡಿ ಬಂಧಿಸಿತು.
2010ರ ಏಪ್ರಿಲ್ 22ರಂದು, ಮಾಧುರಿ ಗುಪ್ತಾರನ್ನು ಅಧಿಕೃತ ರಹಸ್ಯ ಕಾಯಿದೆಯಡಿ (Official Secrets Act) ಬಂಧಿಸಲಾಯಿತು. ತನಿಖಾಧಿಕಾರಿಗಳ ಪ್ರಕಾರ, ಅವರು ಪಾಕಿಸ್ತಾನದಲ್ಲಿ ನಿಯೋಜಿತವಾಗಿದ್ದ ಭಾರತೀಯ ಗುಪ್ತಚರ ಅಧಿಕಾರಿಗಳ ಗುರುತನ್ನು ಬಯಲಿಗೆಡವಿದ್ದರು. ಆಗಿನ ವರದಿಗಳು, ಇಸ್ಲಾಮಾಬಾದ್ನ R&AW ಸ್ಟೇಷನ್ ಚೀಫ್ ಆರ್.ಕೆ.ಶರ್ಮಾ ಅವರ ಗುರುತನ್ನು ಬಹಿರಂಗಪಡಿಸಿದ್ದಾಗಿ ತಿಳಿಸಿತು, ಇದರಿಂದ ಅವರ ಕಾರ್ಯಾಚರಣೆಗೆ ಧಕ್ಕೆಯಾಯಿತು. ತನಿಖಾಧಿಕಾರಿ ಪಂಕಜ್ ಸೂದ್, “ಮಾಧುರಿ ಗುಪ್ತಾ ಪಾಕಿಸ್ತಾನದಲ್ಲಿರುವ ಎಲ್ಲ ಭಾರತೀಯ ಗುಪ್ತಚರ ಅಧಿಕಾರಿಗಳ ಗುರುತನ್ನು ಬಹಿರಂಗಗೊಳಿಸಿದ್ದಾರೆ, ಹೈ ಕಮಿಷನ್ನ ಎಲ್ಲ ಉದ್ಯೋಗಿಗಳ ಜೀವನ ಚರಿತ್ರೆಯ ವಿವರಗಳನ್ನು ನೀಡಿದ್ದಾರೆ, ಮತ್ತು ‘ಭಾರತಕ್ಕೆ ಕೆಲವು ರಹಸ್ಯ ಮಾರ್ಗಗಳು’ ಇವೆ ಎಂದು ಉಲ್ಲೇಖಿಸಿದ್ದಾರೆ” ಎಂದು ತಿಳಿಸಿದರು.
ಮಾಧುರಿ ಗುಪ್ತಾರ ಪತನಕ್ಕೆ ಕಾರಣವೇನು? ತನಿಖಾಧಿಕಾರಿಗಳು, ಗುಪ್ತಾ ಒಂದು ‘ಹನಿಟ್ರ್ಯಾಪ್’ಗೆ ಬಲಿಯಾಗಿದ್ದಾರೆ ಎಂದು ತೀರ್ಮಾನಿಸಿದರು. “ಅವರ ಮೇಲೆ ಒಬ್ಬ ಯುವಕನನ್ನು ಬಿಟ್ಟರು ಮತ್ತು ಅವರು ಆ ಜಾಲಕ್ಕೆ ಸಿಕ್ಕಿಬಿದ್ದರು” ಎಂದು ಪಂಕಜ್ ಸೂದ್ ‘ದಿ ಕಾರವಾನ್’ಗೆ ತಿಳಿಸಿದರು. ಆ ಯುವಕ ಜಮ್ಶೆಡ್ ಎಂಬ 30 ವರ್ಷದ ಪಾಕಿಸ್ತಾನಿ ಗೂಢಾಚಾರಿಯಾಗಿದ್ದ, ಇವನು ಮಾಧುರಿ ಗುಪ್ತಾರನ್ನು ಆಕರ್ಷಿಸಿ ರಹಸ್ಯ ಮಾಹಿತಿಯನ್ನು ಕದಿಯಲು ಯೋಜನೆ ರೂಪಿಸಿದ್ದ. ಮತ್ತೊಬ್ಬ ನಿರ್ವಾಹಕ, ಮುದಾಸ್ಸರ್ ರಜಾ ರಾಣಾ, ಆಗಿನ ಪಾಕಿಸ್ತಾನದ ಗೃಹ ಸಚಿವ ರೆಹಮಾನ್ ಮಲಿಕ್ನ ಸಹಪಾಠಿಯಾಗಿದ್ದ, ಈ ಯೋಜನೆಯನ್ನು ರೆಡಿ ಮಾಡಿದ್ದ.
ಗುಪ್ತಾರನ್ನು ಮೊದಲು ಒಬ್ಬ ಮಹಿಳಾ ಪತ್ರಕರ್ತೆಯ ಮೂಲಕ ಸಂಪರ್ಕಿಸಲಾಯಿತು. ಜೈಶ್-ಎ-ಮೊಹಮ್ಮದ್ನ ಮುಖ್ಯಸ್ಥ ಮೌಲಾನಾ ಮಸೂದ್ ಅಜ಼ರ್ನ ಅಪರೂಪದ ಪುಸ್ತಕವನ್ನು ಪಡೆಯಲು ಸಹಾಯ ಮಾಡುವ ಮೂಲಕ ಅವರ ವಿಶ್ವಾಸ ಗಳಿಸಲಾಯಿತು. ಇಸ್ಲಾಮಾಬಾದ್ನ ತಮ್ಮ ನಿವಾಸದ ಕಂಪ್ಯೂಟರ್ ಮತ್ತು ಬ್ಲಾಕ್ಬೆರಿ ಫೋನ್ ಮೂಲಕ ಗುಪ್ತಾ ಈ ಇಬ್ಬರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ತನಿಖೆಯ ಪ್ರಕಾರ, ಗುಪ್ತಾ, ಜಮ್ಶೆಡ್ನ ಮೇಲಿನ ಮೋಹದಿಂದ, ಇಸ್ಲಾಂಗೆ ಮತಾಂತರಗೊಂಡು ಅವನನ್ನು ಮದುವೆಯಾಗಿ ಇಸ್ತಾಂಬುಲ್ಗೆ ಪಯಣಿಸಲು ಇಚ್ಛಿಸಿದ್ದರು. ಅವರ ಸಂವಹನವು ಸೂಫಿಸಂ, ರೂಮಿ, ಮತ್ತು ಉರ್ದು ಕಾವ್ಯದ ಸುತ್ತ ಸುತ್ತಿತ್ತು, ಇದನ್ನು ಜಮ್ಶೆಡ್ ದುರ್ಬಳಕೆ ಮಾಡಿಕೊಂಡ. 2010ರ ಮಾರ್ಚ್ನಲ್ಲಿ, ರಾಣಾ ಅವರ ಸೂಚನೆಯಂತೆ ಮಾಧುರಿ ಗುಪ್ತಾ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಅಲ್ಲಿ, ರಾಜ್ಯದ ವಾರ್ಷಿಕ ಯೋಜನಾ ವರದಿ ಮತ್ತು 310 ಮೆಗಾವ್ಯಾಟ್ನ ಜಲವಿದ್ಯುತ್ ಯೋಜನೆಯ ವಿವರಗಳನ್ನು ಪಡೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು, ಪಾಕಿಸ್ತಾನಿ ಗೂಢಾಚಾರಿಗಳು ಗುಪ್ತಾರಿಗಾಗಿ ರಚಿಸಿದ್ದ ಎರಡು ಇಮೇಲ್ ಖಾತೆಗಳಾದ lastrao@gmail.com ಮತ್ತು arao@gmail.com ಮೂಲಕ 73 ಇಮೇಲ್ಗಳನ್ನು ವಶಪಡಿಸಿಕೊಂಡಿದ್ದರು.
2012ರಲ್ಲಿ, ಮಾಧುರಿ ಗುಪ್ತಾರ ವಿರುದ್ಧ ಅಧಿಕೃತ ರಹಸ್ಯ ಕಾಯಿದೆಯ ಸೆಕ್ಷನ್ 3 ಮತ್ತು 5ರಡಿ ಆರೋಪ ಹೊರಿಸಲಾಯಿತು, ಇದು ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ಒಳಗೊಂಡಿತ್ತು. ಆರಂಭದಲ್ಲಿ, ಅವರು 21 ತಿಂಗಳು ತಿಹಾರ್ ಜೈಲಿನಲ್ಲಿ ಕಳೆದ ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು. 2018ರಲ್ಲಿ, ದೆಹಲಿಯ ನಗರ ನ್ಯಾಯಾಲಯವು ಅವರನ್ನು ಪಾಕಿಸ್ತಾನಕ್ಕೆ ಗೂಢಾಚರಿಕೆ ಮಾಡಿದ ಆರೋಪದಲ್ಲಿ ದೋಷಿಯೆಂದು ಘೋಷಿಸಿತು. ರಾಜಸ್ಥಾನದ ಭಿವಾಡಿಯಲ್ಲಿ ವಾಸಿಸುತ್ತಿದ್ದ ಗುಪ್ತಾ, 2021ರ ಅಕ್ಟೋಬರ್ನಲ್ಲಿ 64ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣದ ಸಮಯದಲ್ಲಿ, ದೆಹಲಿ ಹೈಕೋರ್ಟ್ನಲ್ಲಿ ಅವರ ಶಿಕ್ಷೆಯ ವಿರುದ್ಧದ ಮೇಲ್ಮನವಿ ಬಾಕಿಯಿತ್ತು.
