ಕೊಚ್ಚಿ:
ಮಲಯಾಳಂ ನಟಿ ಹನಿ ರೋಸ್ ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಜೈಲಿನಿಂದ ಹೊರಬರಲು ನಿರಾಕರಿಸಿದ ಪ್ರಮುಖ ಉದ್ಯಮಿ ಬಾಬಿ ಚೆಮ್ಮನೂರು ಅವರನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಬಾಬಿ ಚೆಮ್ಮನೂರು ವರ್ತನೆಯಿಂದ ಕೋಪಗೊಂಡ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್, ಹೈಕೋರ್ಟ್ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಜಾಮೀನು ನೀಡಿದರೆ ಅದನ್ನು ರದ್ದುಗೊಳಿಸಬಹುದು ಎಂದು ಹೇಳಿದರು.ಜಾಮೀನು ಪಡೆದ ನಂತರವೂ ಏಕೆ ಹೊರಬರಲಿಲ್ಲ ಎಂಬುದಕ್ಕೆ ಮಧ್ಯಾಹ್ನ 12 ಗಂಟೆಯೊಳಗೆ ವಿವರಣೆ ನೀಡುವಂತೆ ಹೈಕೋರ್ಟ್ ಚೆಮ್ಮನೂರು ಅವರನ್ನು ಕೇಳಿದೆ.
ನಿನ್ನೆ ಮಂಗಳವಾರ ಸಂಜೆ 4.08 ರೊಳಗೆ ಜಾಮೀನು ಆದೇಶವನ್ನು ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಸಂಜೆ 4.45 ರೊಳಗೆ ಬಿಡುಗಡೆ ಆದೇಶವನ್ನು ಹೊರಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ಅದರ ನಂತರ ಅವರನ್ನು ಜೈಲಿನಲ್ಲಿ ಏಕೆ ಉಳಿಸಿಕೊಳ್ಳಲಾಯಿತು ಎಂದು ಅದು ಕೇಳಿದೆ.
ಜೈಲಿನಲ್ಲಿ ಹಲವಾರು ರಿಮಾಂಡ್ ಕೈದಿಗಳಿರುವುದರಿಂದ ಅವರು ಜಾಮೀನು ಪಡೆದಿದ್ದರೂ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯಮಿ ಹೇಳಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಬಾಂಡ್ ಕಾರ್ಯಗತಗೊಳಿಸಲು ಅವರ ಬಳಿ ಹಣವಿಲ್ಲದ ಕಾರಣ ಜಾಮೀನು ಸಿಕ್ಕಿದ್ದರೂ ಹೊರಗೆ ಬರಲು ಸಾಧ್ಯವಾಗಲಿಲ್ಲ.
ಇದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುನ್ಹಿಕೃಷ್ಣನ್ , ನೀವು ರಿಮಾಂಡ್ ಕೈದಿಗಳ ವಕಾಲತ್ತು ತೆಗೆದುಕೊಳ್ಳಬೇಕಾಗಿಲ್ಲ. ಅವರನ್ನು ನೋಡಿಕೊಳ್ಳಲು ಹೈಕೋರ್ಟ್ ಮತ್ತು ನ್ಯಾಯಾಂಗವಿದೆ. ನ್ಯಾಯಾಲಯದೊಂದಿಗೆ ನಾಟಕವಾಡಬೇಡಿ. ಅವರು ಮಾಧ್ಯಮಗಳ ಗಮನ ಸೆಳೆಯಲು ಬಯಸುತ್ತಾರೆ, ಬಿಡುಗಡೆ ಆದೇಶವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಜಾಮೀನನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿದರು.
ನೀವು ಕಾನೂನಿಗೆ ಮೀರಿದವರು ಎಂದು ಭಾವಿಸುತ್ತೀರಾ? ಅವರನ್ನು ಬಂಧಿಸಿ ಎರಡು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲು ಆದೇಶಿಸುವಂತೆ ನಾನು ಪೊಲೀಸರನ್ನು ಕೇಳಬಹುದು ಎಂದರು.ಇಂದು ಬೆಳಗ್ಗೆ ಜೈಲಿನಿಂದ ಹೊರಬಂದ ಚೆಮ್ಮನೂರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅನೇಕ ಕೈದಿಗಳು ಜಾಮೀನು ಪಡೆದಿದ್ದರೂ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು ಏಕೆಂದರೆ ಅವರ ಬಳಿ ಬಾಂಡ್ ನ್ನು ಕಾರ್ಯಗತಗೊಳಿಸಲು ಹಣವಿಲ್ಲ ಎಂದರು. ಅವರು ನನ್ನ ಬಳಿಗೆ ಬಂದಾಗ, ನಾವು ಸಮಸ್ಯೆಯನ್ನು ಪರಿಹರಿಸಬಹುದು ಎಂದು ಅವರಿಗೆ ಹೇಳಿದೆ. ಅದಕ್ಕಾಗಿ ನಾನು ಒಂದು ದಿನ ಮಾತ್ರ ಜೈಲಿನಲ್ಲಿಯೇ ಇದ್ದೆ ಎಂದರು.
