ವಾಲ್ಮೀಕಿ ನಿಗಮ ಹಗರಣ: ​ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಡಿ ಚಾರ್ಜ್​ಶೀಟ್

ಬೆಂಗಳೂರು

    ಬಹುಕೋಟಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ಎಸ್​​ಐಟಿಯಿಂದ ಬಚಾವಾಗಿದ್ದ ಮಾಜಿ ಸಚಿವ ಬಿ ನಾಗೇಂದ್ರ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಸ್​ಐಟಿ ಚಾರ್ಜ್​ಶೀಟ್​​ನಲ್ಲಿ ನಾಗೇಂದ್ರ ಹೆಸರೇ ಉಲ್ಲೇಖಿಸಿರಲಿಲ್ಲ.

   ಮುಖ್ಯಮಂತ್ರಿ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರೂ ಸಹ ಹಗರಣದಲ್ಲಿ ನಾಗೇಂದ್ರ ಕೈವಾಡ ಇಲ್ಲ ಎಂದೇ ಹೇಳಿದ್ದರು. ಅವರನ್ನು ಸಮರ್ಥಿಸಿಕೊಂಡಿದ್ದರು. ಆದಾಗ್ಯೂ, ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದೀಗ ಹಗರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​​ನಿಂದ ಸ್ಫೋಟಕ ಅಂಶಗಳು ಬಯಲಾಗಿವೆ.ಬಹುಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರದ ಮಾಸ್ಟರ್ ಮೈಂಡ್ ಮಾಜಿ ಸಚಿವ ನಾಗೇಂದ್ರ ಎಂಬುದನ್ನು ಸಾಕ್ಷಿ ಸಮೇತ ಜನಪ್ರತಿನಿಧಿಗಳ ಕೋರ್ಟ್​​ಗೆ ಸಲ್ಲಿಸಿರುವ ಚಾರ್ಜ್​​​ಶೀಟ್​​ನಲ್ಲಿ ಇಡಿ ಉಲ್ಲೇಖಿಸಿದೆ. ಆರೋಪಿ ಸತ್ಯನಾರಯಣವರ್ಮ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಗ್ಗೆ ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಿದ್ದು, ನಾಗೇಂದ್ರನ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

   ಅವ್ಯವಹಾರದ 21 ಕೋಟಿ ರೂಪಾಯಿ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಮನಿಟ್ರಯಲ್ ನಡೆದಿದೆ ಎಂದು ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

   ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತು. ಮಾಜಿ ಸಚಿವ ನಾಗೇಂದ್ರ ತಲೆದಂಡಕ್ಕೆ ಕಾರಣವಾದ ಹಗರಣದಲ್ಲಿ ರಾಜಕಾರಣಿಗಳ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಹೈಗ್ರೌಂಡ್ಸ್ ಹೋಟೆಲ್​​ನ ಮೀಟಿಂಗ್​ನಿಂದ ನಿಗಮದ‌ ಲೆಕ್ಕ ಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ನಡೆದು ವಿಡಿಯೋ ವೈರಲ್ ಆಗುವವರೆಗೆ ಷಡ್ಯಂತ್ರ, ಅಕೌಂಟ್ ಟ್ರಾನ್ಸ್ ಕ್ಷನ್, ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದು, ತೆಲಾಂಗಣದ ಬ್ಯಾಂಕ್ ಗೆ ಹಣ ವರ್ಗಾವಣೆ, ಆಮೂಲಕ ಇತರರಿಗೆ ಹಣ ವರ್ಗಾವಣೆಗಳು ಒಂದಕ್ಕೊಂದು ಇಡೀ ಅವ್ಯವಹಾರದ ಚಿತ್ರಣ ಬಿಚ್ಚಿಟ್ಟಿದ್ದವು. ಇ.ಡಿ. ತನಿಖೆ ವೇಳೆ ಒಂದೊಂದೇ ಅಸಲಿಯತ್ತು ಅನಾವರಣಗೊಂಡಿತ್ತು.

   ವಾಲ್ಮೀಕಿ ನಿಗಮಕ್ಕೆ ಪದ್ಮನಾಭರನ್ನು ವ್ಯವಸ್ಥಾಪ ನಿರ್ದೇಶಕರನ್ನಾಗಿ ನೇಮಿಸಿ ಹಣ ಲಪಟಾಯಿಸಲು ನಾಗೇಂದ್ರ ಸಂಚು ಹೂಡಿದ್ದರು. ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ಹಣದ ಬಂಡಲ್ ಫೋಟೋಗಳ ಜತೆಗೆ ಎಲ್ಲೆಲ್ಲಿಗೆ ನಗದು ಪೂರೈಸಬೇಕೆಂದು ಉಲ್ಲೇಖಿಸಿದ್ದ ಚೀಟಿಯ ಚಿತ್ರಗಳು ಪತ್ತೆಯಾಗಿವೆ ಎಂದು ಇಡಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

   ಲೋಕಸಭೆ ಚುನಾವಣೆ ಸಂದರ್ಭದಲ್ಲಿ 20.19 ಕೋಟಿ ರೂ.ಗಳನ್ನು ಪ್ರತಿ ಬೂತ್‌ಗೂ ಹಂಚಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಅಂದಿನ ಸಚಿವ ಬಿ. ನಾಗೇಂದ್ರ ಖುದ್ದು 5.26 ಕೋಟಿ ರೂ. ಬಳಸಿರುವುದನ್ನು 15 ಸಾಕ್ಷಿಗಳಿಂದ ದೃಢಪಡಿಸಿಕೊಳ್ಳಲಾಗಿದೆ ಎಂದು ಚಾರ್ಜ್​​ಶೀಟ್​​ನಲ್ಲಿ ಇ.ಡಿ ಉಲ್ಲೇಖಿಸಿದೆ. 

  ನಾಗೇಂದ್ರ ಅಪ್ತವಲಯದಲ್ಲಿದ್ದ ನೆಕ್ಕುಂಟೆ ನಾಗರಾಜ್, ಸತ್ಯನಾರಾಯಣ ವರ್ಮಾ ನಿಕಟ ಸಂಪರ್ಕದಲ್ಲಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಸೇರಿ ಐವರ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಅವ್ಯವಹಾರದ ಆಳ-ಆಗಲ ಭೇದಿಸುತ್ತಿರುವ ಇಡಿ ಇಕ್ಕಳದಲ್ಲಿ ಮತ್ತಷ್ಟು ಆರೋಪಿಗಳ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿವೆ.

Recent Articles

spot_img

Related Stories

Share via
Copy link