ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ

ಬೆಂಗಳೂರು:

ಆಡಳಿತಾರೂಢ ಬಿಜೆಪಿಗೆ ಸೆಡ್ಡು ಹೊಡೆದ ಕಾಂಗ್ರೆಸ್ 

ರಾಜ್ಯದ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಮರಳಿ ರಾಜ್ಯದ ಅಧಿಕಾರ ಗದ್ದುಗೆ ಹಿಡಿಯುವ ಕನಸನ್ನು ಬಲಗೊಳಿಸಿಕೊಂಡಿದೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಲ್ಲಿ ಕಾಂಗ್ರೆಸ್ ಪಕ್ಷ ಐನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ನಾಲ್ಕು ನೂರರ ಗಡಿ ದಾಟಿದೆ.

ಇದೇ ರೀತಿ ಪಕ್ಷೇತರರು ಮೂರನೇ ಶಕ್ತಿಯಾಗಿ ಹೊರಹೊಮ್ಮಿದ್ದು, ಜಾತ್ಯತೀತ ಜನತಾದಳ ಎರಡಂಕಿಯನ್ನು ದಾಟಲಾಗದೆ ನಾಲ್ಕನೇ ಸ್ಥಾನಕ್ಕೆ ಕುಸಿದು ನಿರಾಶೆ ಅನುಭವಿಸಿದೆ.

ಪರಿಸ್ಥಿತಿ ತನ್ನ ಕೈ ಮೀರುತ್ತಿರುವುದನ್ನು ಅರಿತ ಬಿಜೆಪಿ ಇದೀಗ ಮತ್ತೊಮ್ಮೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಸಜ್ಜಾಗಿದ್ದು, ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ ಪಕ್ಷೇತರರಿಗೆ ಗಾಳ ಹಾಕಿದ್ದು, ಅವರ ಬೆಂಬಲದೊಂದಿಗೆ ಬಹುತೇಕ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರ ಸೂತ್ರ ವಶಪಡಿಸಿಕೊಳ್ಳಲು ವಿದ್ಯುಕ್ತ ಪ್ರಯತ್ನ ಆರಂಭಿಸಿದೆ.

ಅದೇನೇ ಇದ್ದರೂ ಐದು ನಗರಸಭೆ, ಹತ್ತೊಂಭತ್ತು ಪುರಸಭೆ, ಮೂವತ್ತೆಂಟು ಪಟ್ಟಣ ಪಂಚಾಯಿತಿಗಳ ಚುನಾವಣೆಯಲ್ಲಿ ತನಗೆ ಸಿಕ್ಕ ಗೆಲುವಿನಿಂದ ಕಾಂಗ್ರೆಸ್ ಪಕ್ಷ ಮರಳಿ ರಾಜ್ಯದ ಅಧಿಕಾರ ಹಿಡಿಯುವ ಕನಸಿಗೆ ಹತ್ತಿರವಾದಂತಾಗಿದೆ.

ಈ ಹಿಂದೆ ರಾಜ್ಯದ ಎರಡು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ ಇಪ್ಪತ್ತೈದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ನಡಿಗೆಗೆ ಬ್ರೇಕ್ ಹಾಕಿದ್ದ ಕಾಂಗ್ರೆಸ್ ಇದೀಗ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಈ ಬಾರಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.

ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಬಸವರಾಜ ಬೊಮ್ಮಾಯಿ ಅವರು ಗದ್ದುಗೆಯ ಮೇಲೇರುವ ಅವಕಾಶ ಪಡೆದರಾದರೂ, ಅವರ ಆಡಳಿತದ ಮೇಲೆ ಜನ ವಿಶ್ವಾಸ ತೋರಿಸಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಅದೇ ರೀತಿ ಉಪಚುನಾವಣೆ, ವಿಧಾನಪರಿಷತ್ ಚುನಾವಣೆಗಳಲ್ಲಿ ಕಂಡಿದ್ದ ಪ್ರಬಲ ಲಿಂಗಾಯತ ಸಮುದಾಯ ವಲಸೆಯ ಕುರುಹು ಈ ಬಾರಿಯ ಚುನಾವಣೆಯಲ್ಲಿ ಕಣ್ಣಿಗೆ ಕಟ್ಟುವಂತೆ ಢಾಳಾಗಿ ಗೋಚರಿಸಿದೆ.

ಆಡಳಿತದ ವೈಫಲ್ಯದಿಂದ ಜನರ ಅಸಮಾಧಾನಕ್ಕೆ ಗುರಿಯಾಗಿರುವ ಆಡಳಿತಾರೂಢ ಬಿಜೆಪಿ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಇತ್ತೀಚಿನ ಎಲ್ಲ ಚುನಾವಣೆಗಳ ಫಲಿತಾಂಶ ಅದನ್ನು ಪದೇ ಪದೇ ಎತ್ತಿ ತೋರಿಸಿದೆ.

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಏರುತ್ತಿರುವ ಭ್ರಷ್ಟಾಚಾರ, ಮತಬ್ಯಾಂಕ್ ವಿಭಜಿಸುವ ಅದರ ತಂತ್ರ ಸಮಾಜದ ಸ್ವಾಸ್ಥ್ಯ ಕಸಿಯುವಂತೆ ಮಾಡುತ್ತಿದ್ದು, ಇದೆಲ್ಲದರ ಪ್ರತಿಫಲವನ್ನು ಅದು ಅನುಭವಿಸುತ್ತಿರುವುದು ಇದೀಗ ಸ್ಪಷ್ಟವಾಗಿದೆ.

ಅಂದ ಹಾಗೆ ಈ ಬಾರಿಯ ಚುನಾವಣೆಯ ಫಲಿತಾಂಶ ಮೂರನೇ ಶಕ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಜೆಡಿಎಸ್‍ಗೆ ನಿರಾಶೆಯುಂಟು ಮಾಡಿದ್ದು, ಅದರ ಕುಟುಂಬ ರಾಜಕಾರಣ ಮತ್ತು ಸಿದ್ಧಾಂತ ರಹಿತ ರಾಜಕಾರಣದಿಂದ ಜನ ಆಕ್ರೋಶಗೊಂಡಿರುವುದು ಸ್ಪಷ್ಟವಾಗಿದೆ.

ಅದರ ಜಾತ್ಯತೀತ ನೀತಿಗೆ ನೆಲೆಯೇ ಇಲ್ಲದಂತಾಗಿದ್ದು, ಅದೇ ಕಾಲಕ್ಕೆ ಸನ್ನಿವೇಶಕ್ಕನುಗುಣವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಕೈ ಜೋಡಿಸುವ ಅದರ ಮನಸ್ಥಿತಿ ಜನರ ಭ್ರಮನಿರಸನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯುವುದು ನಿಶ್ಚಿತವಾಗಿದ್ದು, ತಮ್ಮ ಅನಿವಾರ್ಯತೆಯ ದೃಷ್ಟಿಯಿಂದ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಕೈಗೂಡಿಸುವ ಸಾಧ್ಯತೆ ಹೆಚ್ಚಾಗಿದೆ.

ಉನ್ನತ ಮೂಲಗಳ ಪ್ರಕಾರ, ಇತ್ತೀಚಿನ ಎಲ್ಲ ಚುನಾವಣೆಗಳ ಫಲಿತಾಂಶದಿಂದ ಭ್ರಮನಿರಸನಗೊಂಡ ಬಿಜೆಪಿ ವರಿಷ್ಠರು ರಾಜ್ಯದ ಮುಂಚೂಣಿ ಕಾಂಗ್ರೆಸ್ ನಾಯಕರ ಮೇಲೆ ಕಣ್ಣಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಮುಂದೆ ಅಚ್ಚರಿಯ ಬೆಳವಣಿಗೆಗಗಳು ನಡೆಯಲಿವೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap