ಬೆಂಗಳೂರು:
ನಾಡಿನ ಎಲ್ಲ ಪುಣ್ಯಕ್ಷೇತ್ರಗಳ ನದಿ, ಸರೋವರ, ಕೆರೆ, ಕಲ್ಯಾಣಿಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶ್ಯಾಂಪೂ ಇತ್ಯಾದಿ ಮಾರಾಟ ಮಾಡದಂತೆ ಹಾಗೂ ಭಕ್ತರು ತಮ್ಮ ವಸ್ತ್ರಗಳನ್ನು ವಿಸರ್ಜಿಸದಂತೆ ನಿರ್ಬಂಧಿಸಲು ಸೂಕ್ತ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ನದಿ, ಸರೋವರ, ದೇವಾಲಯದ ಕೆರೆ ಮತ್ತು ಇತರ ಜಲಮೂಲಗಳಲ್ಲಿ ಜನರು ಎಸೆಯುವ ಸೋಪುಗಳು, ಶಾಂಪೂಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು, ಜಲಮೂಲಗಳಿಂದ 500 ಮೀಟರ್ ಒಳಗೆ ಈ ವಸ್ತುಗಳ ಮಾರಾಟವನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಭಕ್ತರು ಶಾಂಪೂ ಮತ್ತು ಸೋಪು ಬಳಸಿ ಸ್ನಾನ ಮಾಡಿ ಉಳಿದ ಸೋಪು ತುಂಡುಗಳು ಮತ್ತು ಶಾಂಪೂ ಪ್ಯಾಕೆಟ್ಗಳನ್ನು ಸ್ನಾನದ ಸ್ಥಳಗಳಲ್ಲಿ ಬಿಡುತ್ತಾರೆ. ಇವೆಲ್ಲವೂ ಜಲಮೂಲಗಳಲ್ಲಿ ನೊರೆಯೊಂದಿಗೆ ಮಿಶ್ರಣಗೊಂಡು ನೀರನ್ನು ಕಲುಷಿತಗೊಳಿಸುತ್ತಿವೆ ಎಂದು ಖಂಡ್ರೆ ತಿಳಿಸಿದ್ದಾರೆ.
ಈ ಸೋಪುಗಳು ಮತ್ತು ಶಾಂಪೂ ಸ್ಯಾಚೆಟ್ಗಳನ್ನು ಜಲಮೂಲಗಳ ಸುತ್ತಲೂ 1 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನದಿಗಳು, ಕೊಳಗಳು ಮತ್ತು ಸರೋವರಗಳಿಂದ 500 ಮೀಟರ್ ಒಳಗೆ ಅವುಗಳ ಮಾರಾಟವನ್ನು ನಿಷೇಧಿಸುವಂತೆ ನಿರ್ದೇಶಿಸಿದ್ದಾರೆ. ಭಕ್ತರು ತಮ್ಮ ಬಟ್ಟೆಗಳನ್ನು ನದಿಗಳು, ಸರೋವರಗಳು, ಕೊಳಗಳು ಮತ್ತು ಕಲ್ಯಾಣಿಗಳಲ್ಲಿ ವಿಲೇವಾರಿ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಅವರು ಸೂಚನೆ ನೀಡಿದ್ದಾರೆ.
ಪುಣ್ಯಕ್ಷೇತ್ರಗಳ ಬಳಿ ಇರುವ ಜಲಮೂಲಗಳಲ್ಲಿ ಭಕ್ತರು, ಪ್ರವಾಸಿಗರು ಸ್ನಾನಮಾಡಿ ಉಳಿದ ಶ್ಯಾಂಪೂ ಮತ್ತು ಸೋಪಿನ ಸ್ಯಾಷೆಗಳನ್ನು ದಂಡೆಯಲ್ಲಿ ಎಸೆದು ಹೋಗುತ್ತಿದ್ದಾರೆ. ಅಲ್ಲಿನ ಪರಿಸರದಲ್ಲಿ ಕಸದ ಪ್ರಮಾಣ ಹೆಚ್ಚುವುದಲ್ಲದೆ, ಈ ರಾಸಾಯನಿಕ ವಸ್ತು ಮತ್ತು ಪ್ಲಾಸ್ಟಿಕ್ ಜಲಮೂಲವನ್ನು ಸೇರುತ್ತಿವೆ. ಇದರಿಂದ ನೀರು ಕಲುಷಿತವಾಗುತ್ತಿದೆ. ಜತೆಗೆ ಜಲಚರಗಳೂ ಸಾಯುತ್ತಿವೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
