ಐಎಎಫ್‌ ಅಧಿಕಾರಿ ಮೇಲೆ ಹಲ್ಲೆ; ಬೈಯಪ್ಪನಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಬೆಂಗಳೂರು:

    ನಗರದಲ್ಲಿ ಐಎಎಫ್‌ ಅಧಿಕಾರಿ ಮೇಲೆ ಹಲ್ಲೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಐಎಎಫ್‌ ಅಧಿಕಾರಿ ಶಿಲಾಧಿತ್ಯ ಬೋಸ್ ಅವರ ಪತ್ನಿ ಮಧುಮಿತಾ ದತ್ತ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಸಿ.ವಿ.ರಾಮನ್‌ ನಗರದಲ್ಲಿ ಭಾನುವಾರ ಸಂಜೆ ಕಾರಿನಲ್ಲಿ ಹೋಗುತ್ತಿದ್ದ ಅಧಿಕಾರಿ ಮೇಲೆ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿತ್ತು. ಇದರಿಂದ ವಾಯುಸೇನೆ ಅಧಿಕಾರಿ ಮುಖ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಎಫ್‌ಐಆರ್‌ ದಾಖಲಾಗಿದೆ.

   ನಗರದ ಸಿ.ವಿ.ರಾಮನ್‌ ನಗರದಲ್ಲಿ ಐಎಎಫ್‌ ಅಧಿಕಾರಿ ಶಿಲಾಧಿತ್ಯ ಬೋಸ್ ಮೇಲೆ ಹಲ್ಲೆ ನಡೆದಿತ್ತು. ನಗರದ ಡಿಆರ್‌ಡಿಒ ಕಾಲೋನಿ ನಿವಾಸಿಯಾದ ಇವರು ಪತ್ನಿ ಮಧುಮಿತಾ ಜತೆ ಕಾರಿನಲ್ಲಿ ಸಿ.ವಿ.ರಾಮನ್‌ ನಗರದಿಂದ ಏರ್‌ಪೋರ್ಟ್‌ಗೆ ತೆರಳುವಾಗ ಹಲ್ಲೆ ನಡೆಸಲಾಗಿತ್ತು. ಇವರ ಪತ್ನಿ ಕೂಡ ಐಎಎಫ್‌ನ ಸ್ಕ್ವಾಡ್ರನ್‌ ಲೀಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಹಲ್ಲೆಯಿಂದ ಮುಖ ಹಾಗೂ ಕತ್ತಿನ ಭಾಗದಿಂದ ರಕ್ತ ಸೋರುತ್ತಿರುವ ನಡುವೆಯೇ ವಿಡಿಯೋ ಮಾಡಿದ್ದ ಐಎಎಫ್‌ ಅಧಿಕಾರಿ, ನಾವು ಕಾರಿನಲ್ಲಿ ಹೋಗುವಾಗ ಬೈಕ್‌ನಲ್ಲಿ ಹಿಂದಿನಿಂದ ಬಂದ ಒಬ್ಬ ವ್ಯಕ್ತಿ ನಮ್ಮ ಕಾರನ್ನು ನಿಲ್ಲಿಸಿ, ಏಕಾಏಕಿ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ. ಕಾರಿನ ಮೇಲಿನ ಸ್ಟಿಕ್ಕರ್‌ ನೋಡಿ ನೀವು ಡಿಆರ್‌ಡಿಒಗೆ ಸೇರಿದವರಾ? ಎಂದು ಕೇಳಿದೆ. ಈ ವೇಳೆ ನಾನು ಕೆಳಗಿಳಿದಾಗ, ವ್ಯಕ್ತಿಯೊಬ್ಬ ನನ್ನ ಮೇಲೆ ಬೈಕ್‌ ಕೀಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದರು.

 ಘಟನೆ ನಡೆದಾಗ, ನಿಮ್ಮನ್ನು ರಕ್ಷಿಸುವ ಜನರನ್ನು ನೀವು ಹೇಗೆ ರಕ್ಷಿಸುತ್ತೀರಿ, ಸೈನಿಕರನ್ನು ಯಾರಾದರೂ ಈ ರೀತಿ ನಡೆಸಿಕೊಳ್ಳುತ್ತಾರಾ? ಎಂದು ಅಲ್ಲಿದ್ದ ಜನರನ್ನು ಕೇಳಿದೆ. ಆದರೆ, ಅಲ್ಲಿದ್ದವರು ನಮ್ಮನ್ನೇ ನಿಂದಿಸಲು ಪ್ರಾರಂಭಿಸಿದರು. ಹಲ್ಲೆ ಮಾಡಿದ್ದ ವ್ಯಕ್ತಿ ಮತ್ತೆ ಒಂದು ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹೊಡೆಯಲು ಯತ್ನಿಸಿದ. ಅದು ನನ್ನ ತಲೆಗೆ ಬಡಿಯಿತು ಎಂದು ಅಧಿಕಾರಿ ಹೇಳಿದ್ದರು. ಹಲ್ಲೆ ವೇಳೆ ನನ್ನ ಹೆಂಡತಿ ಪಕ್ಕದಲ್ಲೇ ಇದ್ದಿದ್ದರಿಂದ ಆಕೆ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದಳು. ಬಳಿಕ ಘಟನೆ ಬಗ್ಗೆ ನಾವು ದೂರು ನೀಡಲು ಹೋದಾಗ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು.

Recent Articles

spot_img

Related Stories

Share via
Copy link