ಬಹು ನಿರೀಕ್ಷೆಯ ಪದ್ಮ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ. ಈ ಬಾರಿ ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ ಅಮೈ ಮಹಾಲಿಂಗ ನಾಯ್ಕ, ಎಚ್.ಆರ್.
ಕೇಶವಮೂರ್ತಿ, ಸುಬ್ಬಣ್ಣ ಅಯ್ಯಪ್ಪನ್, ಅಬ್ದುಲ್ ಖಾದರ್ ನಡಕಟ್ಟಿನ್ ಮತ್ತು ಮರಣೋತ್ತರವಾಗಿ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಕಲೆ, ಸಾಮಾಜಿಕ ಕೆಲಸ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಒಟ್ಟು 128 ಮಂದಿಗೆ ಪ್ರಶಸ್ತಿ ನೀಡಲಾಗಿದೆ.
ಇದರಲ್ಲಿ ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 107 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 34 ಮಂದಿ ಮಹಿಳೆಯರು, 10 ಮಂದಿ ವಿದೇಶಿ/ಎನ್ಆರ್ಐಗಳು, 13 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
ಪದ್ಮವಿಭೂಷಣ
ನಾಲ್ವರಿಗೆ ಪದ್ಮವಿಭೂಷಣ ಘೋಷಿಸಲಾಗಿದ್ದು, ಇವರಲ್ಲಿ ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಕಲೆ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಭಾ ಅತ್ರೆ, ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಉತ್ತರ ಪ್ರದೇಶದ ರಾಧೇಶ್ಯಾಮ್ ಖೇಮ್ಕಾ, ನಾಗರಿಕ ಸೇವೆಯಲ್ಲಿ ಉತ್ತರಾಖಂಡದ ಜ| ಬಿಪಿನ್ ರಾವತ್, ಸಾರ್ವಜನಿಕ ವ್ಯವಹಾರದಲ್ಲಿ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪದ್ಮಭೂಷಣ
ಒಟ್ಟು 17 ಮಂದಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇವರಲ್ಲಿ ಪ್ರಮುಖವಾಗಿ ರಾಜಕೀಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಪಶ್ಚಿಮ ಬಂಗಾಲದ ಎಡಪಕ್ಷಗಳ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಹಾಗೆಯೇ, ಲಸಿಕೆ ತಯಾರಕರಾದ ಭಾರತ್ ಬಯೋಟೆಕ್ನ ಕೃಷ್ಣ ಎಲ್ಲ ಮತ್ತು ಸುಚಿತ್ರಾ ಎಲ್ಲ ಅವರಿಗೆ ಹಾಗೂ ಸೀರಂ ಸಂಸ್ಥೆಯ ಸಂಸ್ಥಾಪಕ ಸೈರಸ್ ಪೂನಾವಾಲ ಅವರಿಗೂ ಪ್ರಶಸ್ತಿ ಸಿಕ್ಕಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೂ ಪದ್ಮಭೂಷಣ ಪ್ರಶಸ್ತಿಯ ಗೌರವ ಸಿಕ್ಕಿದೆ.
ರಾಜ್ಯದ ಐವರಿಗೆ ಗೌರವ
1.ಸುಬ್ಬಣ್ಣ ಅಯ್ಯಪ್ಪನ್: ವಿಜ್ಞಾನ ಮತ್ತು ತಂತ್ರಜ್ಞಾನ
2.ಎಚ್.ಆರ್. ಕೇಶವಮೂರ್ತಿ: ಕಲೆ
3.ಅಬ್ದುಲ್ ಖಾದರ್ ನಡಕಟ್ಟಿನ್: ಆವಿಷ್ಕಾರ
4.ಅಮೈ ಮಹಾಲಿಂಗ ನಾಯ್ಕ: ಕೃಷಿ
5.ಸಿದ್ದಲಿಂಗಯ್ಯ (ಮರಣೋತ್ತರ): ಸಾಹಿತ್ಯ
ಯಾವ ರಾಜ್ಯಕ್ಕೆಷ್ಟು ?
ಉತ್ತರ ಪ್ರದೇಶ 13
ಮಹಾರಾಷ್ಟ್ರ 09
ಪಶ್ಚಿಮ ಬಂಗಾಲ 06
ತಮಿಳುನಾಡು 06
ಗುಜರಾತ್ 06
ಕರ್ನಾಟಕ 05
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ