ಹುಳಿಯಾರು
ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತ್ಮಸ್ತೈರ್ಯ, ನಿರ್ಭಯ ಮತ್ತು ನಿರ್ಭಿತಿಯಿಂದ ಮತ ಚಲಾಯಿಸಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಭದ್ರತೆಗಾಗಿ ಶನಿವಾರ ಹುಳಿಯಾರು ಪಟ್ಟಣದಲ್ಲಿ ಬಿಎಸ್ಎಫ್ ಯೋಧÀರು ಪಥ ಸಂಚಲನ ನಡೆಸಿದರು.
ಪ್ಯಾರಾ ಮಿಲಿಟರಿ, ಪೊಲೀಸ್, ಹೋಂ ಗಾರ್ಡ್ ಯೋಧರು ಪಟ್ಟಣದ ಪ್ರಮುಖ ಬೀದಿಯಲ್ಲಿ ಪಥ ಸಂಚಲನ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆ ಬದಿ ನಿಂತು ಪುಷ್ಪಾರ್ಚನೆ ಮಾಡಿದರು. ಮಕ್ಕಳು ಯೋಧರ ಕೈ ಕುಲುಕಿ ಖುಷಿ ಪಟ್ಟರು. ಸೈನಿಕರಿಗೆ ಮಜ್ಜಿಗೆ ಪಾನಕ ನೀಡಿದರು. ಶಾಲು ಹೂ ಮಾಲೆ ಹಾಕಿ ಸಂಭ್ರಮಿಸಿದರು. ಹುಳಿಯಾರು ಎಪಿಎಂಸಿ ಠಾಣೆಯಿಂದ ಆರಂಭವಾದ ಪಥ ಸಂಚಲನ ಆಂಜನೇಯಸ್ವಾಮಿ ದೇವಸ್ಥಾನ, ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆಯವರೆವಿಗೂ ನಡೆಯಿತು.
ಹುಳಿಯಾರು ರಾಮಗೋಪಾಲ್ ಸರ್ಕಲ್ ಬಳಿ ಮುಸ್ಲಿಂ ಬಾಂಧವರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರೆ, ಬಸ್ ನಿಲ್ದಾಣದಲ್ಲಿ ಕರವೇ ಕಾರ್ಯಕರ್ತರು ತಂಪು ಪಾನೀಯ ನೀಡಿದರು. ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದವರೂ ಸಹ ಮ್ಯಾಕ್ಸಿಕ್ಯಾಬ್ ಮೇಲೆ ನಿಂತು ಯೋಧರಿಗೆ ಹೂವಿನ ಮಳೆ ಸುರಿಸಿದರು.
ವೃತ್ತ ನಿರೀಕ್ಷಕ ಹರೀಶ್ ಮಾತನಾಡಿ, ಮತದಾರರು ಯಾರ ಒತ್ತಡ, ಆಮಿಷಗಳಿಗೆ ಒಳಗಾಗದೆ, ಮತಗಟ್ಟೆಗೆ ಮುಕ್ತವಾಗಿ ಬಂದು ಮತದಾನ ಮಾಡಬೇಕು. ಅಂತಹ ಒಂದು ವಾತಾವರಣವನ್ನು ಪೊಲೀಸ್ ಇಲಾಖೆ ಮಾಡಿದೆ ಎಂಬುದನ್ನು ತಿಳಿಸುವ ಉದ್ದೇಶದಿಂದ ಪಥ ಸಂಚಲನ ನಡೆಸಲಾಗಿದೆ. ಅದೇ ರೀತಿ ಸಮಾಜ ಘಾತುಕ ಶಕ್ತಿಗಳಿಗೆ ಎಚ್ಚರಿಕೆ ಸಂದೇಶ ಕೂಡ ಇದರಲ್ಲಿ ಇದೆ ಎಂದರು.
ಪಿಎಸ್ಐ ಕೆ.ವಿ.ಮೂರ್ತಿ ಮಾತನಾಡಿ, ಕ್ಷೇತ್ರದ ಯಾವುದೆ ಮೂಲೆಯಲ್ಲಾದರೂ, ಚುನಾವಣೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು, ದೌರ್ಜನ್ಯ, ಆಮಿಷ, ಒತ್ತಡ, ಜೀವ ಭಯ, ಮದ್ಯ ಹಾಗೂ ಇನ್ನಿತರ ವಸ್ತುಗಳ ಹಂಚಿಕೆ ಕಂಡು ಬಂದರೆ ಕೂಡಲೆ ಚುನಾವಣಾ ಆಯೋಗದ ಸಹಾಯವಾಣಿ ಹಾಗೂ ಪೊಲೀಸ್ ಇಲಾಖೆಯ 112, ಹಾಗೂ ಅಧಿಕಾರಿಗಳಿಗೆ ಕೂಡಲೆ ಮಾಹಿತಿ ತಿಳಿಸಬೇಕು. ಅಲ್ಲದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಸ್ವಯಂ ಪ್ರಚಾರ ಮಾಡಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/04/8HULIYAR2.jpg)