ಲಖನೌ:
ಕನ್ವಾರ್ ಯಾತ್ರೆಯ ಸಮಯದಲ್ಲಿ, ಲಚ್ಚಿವಾಲಾ ಶ್ರೇಣಿಯ ಮಣಿ ಮಾಯ್ ದೇವಸ್ಥಾನದ ಬಳಿಯ ಭಂಡಾರಕ್ಕೆ ಆನೆಗಳು ನುಗ್ಗಿದ ಪರಿಣಾಮ ಕನ್ವಾರ್ನಲ್ಲಿ ಕಾಲ್ತುಳಿತ ಉಂಟಾಯಿತು. ಯಾತ್ರೆಯ ಸಮಯದಲ್ಲಿ ಧ್ವನಿ ವ್ಯವಸ್ಥೆಯಿಂದ ಬಂದ ದೊಡ್ಡ ಶಬ್ದದಿಂದ ಕೋಪಗೊಂಡ ಆನೆಗಳು ಎರಡು ಟ್ರಾಲಿಗಳನ್ನು ಉರುಳಿಸಿದವು. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ. ಅದೃಷ್ಟವಶಾತ್, ಆನೆಗಳು ಪೆಂಡಾಲ್ ಒಳಗೆ ಪ್ರವೇಶಿಸಲಿಲ್ಲ. ಹಾಗಾಗಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದೆ.
ಘಟನೆಯ ವೇಳೆ ಅರಣ್ಯ ಇಲಾಖೆಯು ತಕ್ಷಣವೇ ಪೆಂಡಾಲ್ ಅನ್ನು ಸ್ಥಳಾಂತರಿಸಿತು ಮತ್ತು ಅರಣ್ಯ ಪ್ರದೇಶದಲ್ಲಿ ಕಾಲಹರಣ ಮಾಡದಂತೆ ಜನರಿಗೆ ನಿರ್ದೇಶನ ನೀಡಿತು. ಪೊಲೀಸರು ಸಹ ಆಗಮಿಸಿ, ಸಂಚಾರವನ್ನು ನಿರ್ವಹಿಸಿದರು ಮತ್ತು ವಾಹನಗಳು ಸರಾಗವಾಗಿ ಹಾದುಹೋಗುವಂತೆ ನೋಡಿಕೊಂಡಿದ್ದಾರೆ.
ಶನಿವಾರ ರಾತ್ರಿ ಸುಮಾರು 8:30 ರ ಸುಮಾರಿಗೆ, ಗಂಡು ಮತ್ತು ಹೆಣ್ಣು ಆನೆಗಳು ತಮ್ಮ ಮರಿಯೊಂದಿಗೆ ದೇವಾಲಯದ ಹಿಂದಿನ ಕಾಡಿನಿಂದ ರಸ್ತೆಗೆ ಬಂದವು. ಕನ್ವಾರ್ ಯಾತ್ರೆಯ ಗದ್ದಲವು ಅವುಗಳಿಗೆ ಕಿರಿಕಿರಿಯನ್ನುಂಟು ಮಾಡಿದ್ದವು. ಅಲ್ಲದೇ ಕೆಲವು ಜನರು ಆನೆಗಳ ವಿಡಿಯೊವನ್ನು ಮಾಡಲು ಪ್ರಯತ್ನಿಸಿದಾಗ ಅದು ಆನೆಗಳನ್ನು ಕೆರಳಿಸಿತು. ಹಾಗಾಗಿ ಅವುಗಳು ಆಕ್ರಮಣ ಮಾಡಲು ಮುಂದಾದವು. ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತು.
ಆನೆಗಳು ನಿಲ್ಲಿಸಿದ್ದ ಟ್ರಾಲಿಗಳನ್ನು ಉರುಳಿಸಿದ್ದರಿಂದ, ಅಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆಗ ಅರಣ್ಯ ಇಲಾಖೆಯ ಇನ್ಸ್ಪೆಕ್ಟರ್ ಪೂರಣ್ ಸಿಂಗ್ ರಾವತ್ ನೇತೃತ್ವದಲ್ಲಿ ಕೂಡಲೇ ಪೆಂಡಲ್ ಅನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಮತ್ತು ನಂತರ ರಾತ್ರಿಯ ಗಸ್ತು ತಿರುಗುವವರು ಪಟಾಕಿಗಳನ್ನು ಸಿಡಿಸುವ ಮೂಲಕ ಆನೆಗಳನ್ನು ಹೆದರಿಸಿ ಮತ್ತೆ ಕಾಡಿಗೆ ಕಳುಹಿಸಲು ಪ್ರಯತ್ನಿಸಿದ್ದಾರೆ.
