ಚಿಕ್ಕಬಳ್ಳಾಪುರ
ಪ್ರಕೃತಿ ಸೊಬಗಿಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ ಕಂಡು ಸ್ವತಃ ಮಹಾತ್ಮ ಗಾಂಧೀಜಿಯವರೇ ಆನಂದ ಪಟ್ಟಿದ್ದರು. 65 ದಿನಗಳ ಕಾಲ ಗಾಂಧೀಜಿ ನಂದಿ ಗಿರಿಧಾಮದಲ್ಲಿ ತಂಗಿದ್ದರು ಎನ್ನುವುದೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಇಂದು (ಅ.02) ಮಹಾತ್ಮ ಗಾಂಧೀಜಿಯವರ ಜಯಂತಿ ಹಿನ್ನೆಲೆಯಲ್ಲಿ ಗಾಂಧೀಜಿ ಹಾಗೂ ನಂದಿಬೆಟ್ಟದ ನಂಟಿನ ಬಗ್ಗೆ ಒಂದು ವರದಿ ಇಲ್ಲಿದೆ.
ಪ್ರಕೃತಿ ಸೌಂದರ್ಯವನ್ನು ಹೊದ್ದು ಮಲಗಿರುವ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಿಹರಿಸಿದರೆ ಮನಸ್ಸಿಗೆ ಅಲ್ಲಾದಕರವಾಗುತ್ತೆ. ಬೆಳ್ಳಂಬೆಳಿಗ್ಗೆ ಗಿರಿಧಾಮದಲ್ಲಿ ಕೊರೆಯುವ ಚಳಿ, ತುಂತುರು ಮಳೆ, ಪ್ರಣಯ ಪಕ್ಷಿಗಳ ಕಲರ್ಫುಲ್ ಸೊಬಗು ಮನಸೊರೆಗೊಳಿಸುತ್ತದೆ. 1600 ಮೀಟರ್ ಎತ್ತರದಲ್ಲಿರುವ ಗಿರಿಧಾಮ ವಾತಾವರಣ ಅಹ್ಲಾದಕರವಾಗಿರುತ್ತೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ಮಹಾತ್ಮ ಗಾಂಧೀಜಿಯವರು ಆಯಾಸದಿಂದ ಬಳಲಿದ್ದರಂತೆ. ವೈದ್ಯರು ವಿಶ್ರಾಂತಿಗೆ ಮನವಿ ಮಾಡಿದ್ದರು. ಆಗ ಗಾಂಧೀಜಿಯವರು 1927ರಲ್ಲಿ 45 ದಿನ ಹಾಗೂ 1936ರಲ್ಲಿ 20 ದಿನ ಹೀಗೆ ಒಟ್ಟು 65 ದಿನಗಳ ಕಾಲ ನಂದಿಬೆಟ್ಟದಲ್ಲಿ ತಂಗಿದ್ದರು. ಅಂದಿನ ಸುಲ್ತಾನಪೇಟೆಯ ಕೆಲವು ಯುವಕರು ಗಾಂಧೀಜಿಯವರನ್ನು ಡೋಲಿಯಲ್ಲಿ ಹೊತ್ತುಕೊಂಡು ಹೋಗಲು ಮುಂದಾದರು. ಆದರೆ ಗಾಂಧೀಜಿಯವರು ಇದಕ್ಕೆ ನಿರಾಕರಿಸಿ ಬೆಟ್ಟದ ತುತ್ತತುದಿಯವರೆಗೂ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಕನ್ನಿಂಗ್ಹ್ಯಾಮ್ ಭವನದಲ್ಲಿ ತಂಗಿದರು. ಗಾಂಧೀಜಿಯವರು ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ತಂಗಿದ್ದ ಸ್ಮರಣಾರ್ಥ ಕನ್ನಿಂಗ್ಹ್ಯಾಮ್ ಭವನವನ್ನು ಗಾಂಧಿ ಭವನವೆಂದು ಮರುನಾಮಕರಣ ಮಾಡಲಾಗಿದೆ.
ಮಹಾತ್ಮ ಗಾಂಧೀಜಿಯವರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಧಾಮದಲ್ಲಿ 65 ದಿನಗಳ ಕಾಲ ತಂಗಿದ್ದರ ಸ್ಮರಣಾರ್ಥ ಗಿರಿಧಾಮದಲ್ಲಿ ಮಹಾತ್ಮಗಾಂಧಿಯವರ ಪ್ರತಿಮೆ ಸ್ಥಾಪಿಸಲಾಗಿದೆ. ನಡೆದುಕೊಂಡಯ ಹೋಗುತ್ತಿರುವ ರೀತಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.