ತುಮಕೂರು : ಮಳೆಗೆ ಬಟಾಬಯಲಾಗುತ್ತಿವೆ ಕಳಪೆ ಕಾಮಗಾರಿಗಳು

ತುಮಕೂರು :

      ಕಳೆದ ಒಂದು ವಾರದಿಂದ ಸುರಿಯುತ್ತಿರುವ ತುಂತುರು ಮಳೆಗೆ ನಗರದ ಕಾಮಗಾರಿಗಳ ಅಧ್ವಾನಗಳು ಬಟಾಬಯಲಾಗತೊಡಗಿವೆ. ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಕಾಮಗಾರಿಗಳಾದಿಯಾಗಿ ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳು ಸಹ ಈಗ ಅನಾವರಣಗೊಳ್ಳುತ್ತಿವೆ.

      ನಗರದ ವಿವಿಧ ಪ್ರದೇಶಗಳಲ್ಲಿ ಸ್ಮಾರ್ಟ್ ರಸ್ತೆ ಕಾಮಗಾರಿಗಳು ಮುಂದುವರೆದಿವೆ. ಎಂದೋ ಮುಗಿಯಬೇಕಿದ್ದ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿವೆ. ಇವು ಪೂರ್ಣಗೊಳ್ಳದೆ ಇಲ್ಲಿನ ನಾಗರಿಕರಿಗೆ ನೆಮ್ಮದಿ ಇಲ್ಲ. ಒಂದು ಕಡೆ ಹಲವು ತಿಂಗಳುಗಳಿಂದ ನಡೆಯುತ್ತಿರುವ ಕಾಮಗಾರಿಗಳು, ಮತ್ತೊಂದು ಕಡೆ ತಮಗೆ ಬೇಕಾದ ಹಾಗೆ ನಡೆಸಿಕೊಂಡು ಹೋಗುತ್ತಿರುವ ಕೆಲಸಗಳು. ಇವುಗಳಿಂದ ಸಾರ್ವಜನಿಕರು ರೋಸಿ ಹೋಗುತ್ತಿದ್ದಾರೆ.

      ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಾಗಿ ರಸ್ತೆಯ ನೀರು ಸಹ ಸುಗಮವಾಗಿ ಹರಿಯುತ್ತಿಲ್ಲ. ಅಲ್ಲಲ್ಲಿ ನೀರು ಸಂಗ್ರಹಣೆಗೊಂಡು ಸಂಚಾರಿ ವ್ಯವಸ್ಥೆಗೆ ಅಡಚಣೆಯಾಗಿದೆ. ಸ್ಮಾರ್ಟ್ ರಸ್ತೆಗಳು ಮುಗಿದಿದ್ದರೂ ಕೆಲವೊಂದು ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮವಾಗಿ ನೀರು ಸರಾಗವಾಗಿ ಹರಿಯದ ಪರಿಸ್ಥಿತಿ ಇದೆ. ಡಾ.ರಾಧಾಕೃಷ್ಣನ್ ರಸ್ತೆಯು ನೋಡಲು ಅಂದವಾಗಿದೆ. ಆದರೆ ಸೇತುವೆ ಬಳಿಯಿಂದ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯನ್ನೇ ಮಾಡಿಲ್ಲ. ರೈಲ್ವೆ ಸ್ಟೇಷನ್ ರಸ್ತೆ ಸಂಪರ್ಕಿಸುವ ಭಾಗದಲ್ಲಿ ಬ್ರಿಡ್ಜ್ ಕೆಳಗೆ ನೀರು ಸಂಗ್ರಹಗೊಳ್ಳುತ್ತಿದೆ.

ಬಿ.ಎಚ್.ರಸ್ತೆಗೆ ಇತ್ತೀಚೆಗೆ ಡಾಂಬರ್ ಮತ್ತು ಕಾಂಕ್ರಿಟ್ ಕಾಮಗಾರಿ ನಡೆದಿತ್ತು. ಇವೆಲ್ಲ ಅವೈಜ್ಞಾನಿಕ ಎಂಬುದನ್ನು ಮಳೆ ತೋರಿಸುತ್ತಿದೆ. ಬಿ.ಎಚ್.ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿಗೆ ರಸ್ತೆಯ ನೀರು ಸರಾಗವಾಗಿ ಹರಿಯಲು ಹಾಗೂ ಪೈಪ್‍ಲೈನ್ ಅಳವಡಿಸಲು ರಸ್ತೆಯ ಅಂಚಲ್ಲಿ ಅಗೆಯಲಾಗಿದೆ. ಇಂತಹ ಕಡೆಗಳಲ್ಲಿ ತಗ್ಗು ಉಂಟಾಗಿ ಕುಸಿದಿರುವ ಉದಾಹರಣೆಗಳು ಅಲ್ಲಲ್ಲಿ ಕಂಡುಬರುತ್ತಿವೆ.
ಎಂ.ಜಿ.ರಸ್ತೆ ಸಂಪರ್ಕಿಸುವ ರಸ್ತೆಗಳಂತೂ ಅಧ್ವಾನದಿಂದ ಕೂಡಿವೆ. ಸ್ವಾತಂತ್ರ್ಯ ಚೌಕದ ಬಳಿಯಿಂದ ಹೊರಪೇಟೆ ಮಾರ್ಗವಾಗಿ ಎಂ.ಜಿ.ರಸ್ತೆಗೆ ಬರಬೇಕೆಂದರೆ ಹರಸಾಹಸ ಪಡುವಂತಾಗಿದೆ. ವಿವೇಕಾನಂದ ರಸ್ತೆ ಅದೆಷ್ಟು ಬಾರಿ ಅಗೆತ ಕಂಡಿದೆಯೋ ಲೆಕ್ಕಕ್ಕಿಲ್ಲ. ಇನ್ನೂ ಕಾಮಗಾರಿ ನಡೆಯುತ್ತಲೆ ಇದೆ. ಈ ರಸ್ತೆಯಲ್ಲಿ ವಹಿವಾಟು ಸಂಪೂರ್ಣ ಕುಸಿದು ಹೋಗಿದೆ. ಎಷ್ಟೋ ಜನ ಅಂಗಡಿಗಳನ್ನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಪದೆ ಪದೆ ರಸ್ತೆ ಕುಸಿಯುವುದು, ಡ್ರೈನೇಜ್ ಲೀಕ್ ಆಗುವುದು, ಚರಂಡಿ ಅವ್ಯವಸ್ಥೆಯಿಂದಾಗಿ ಇಲ್ಲಿನ ನರಕ ಹೇಳತೀರದು.

ಇನ್ನು ಎಂ.ಜಿ.ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿಯೂ ಇದೇ ಆಗಿದೆ. ಅಲ್ಲಲ್ಲಿ ಜಲ್ಲಿ ಗುಡ್ಡೆಗಳು ನಿರ್ಮಾಣವಾಗಿದ್ದು, ರಸ್ತೆ ಅಗೆತ ಮಾಡಿರುವ ಕಾರಣ ಮನೆಗಳಿಗೆ ನೀರು ನುಗ್ಗತೊಡಗಿದೆ. ಇತ್ತೀಚೆಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ನೆಲ ಸಮತಟ್ಟು ಮಾಡುವ ಪ್ರಕ್ರಿಯೆ ನಡೆಯಿತು. ಒಂದಷ್ಟು ಸುಧಾರಣೆ ಕಂಡುಬಂದಿದ್ದರೂ ಬೇಗ ಕಾಮಗಾರಿ ಮುಗಿಯದ ಕಾರಣ ಅಲ್ಲಿನ ನಿವಾಸಿಗಳು ನಿತ್ಯ ಸಂಕಟ ಪಡುವಂತಾಗಿದೆ.

      ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳು ಇಲಾಖೆಗಳಿಂದ ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ ಎಂಬುದಕ್ಕೆ ಇತ್ತೀಚೆಗೆ ಬೆಸ್ಕಾಂ ಹೊರಡಿಸಿರುವ ಒಂದು ಪ್ರಕಟಣೆಯೆ ಸಾಕ್ಷಿ. ಭೂಗತ ಕಾಮಗಾರಿ ನಿರ್ವಹಣೆ ಮುನ್ನ ಬೆಸ್ಕಾಂ ಅನುಮತಿ ಅಗತ್ಯ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಸಾರ್ವಜನಿಕರು, ವಿವಿಧ ಇಲಾಖೆ, ಕಂಪನಿಗಳು ರಸ್ತೆ-ಭೂಗತ ಕಾಮಗಾರಿ ನಿರ್ವಹಿಸುವ ಮುನ್ನ ಬೆವಿಕಂ ಕಚೇರಿಯನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ಒಂದು ವೇಳೆ ಅವಘಡಗಳೇನಾದರು ಸಂಭವಿಸಿದಲ್ಲಿ ನಾವು ಹೊಣೆಗಾರರಲ್ಲ ಎಂಬ ಹೇಳಿಕೆ ನೀಡಲಾಗಿದೆ. ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಈಗ ಕಾಕತಾಳೀಯವೇ ?

ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇದೆಲ್ಲದಕ್ಕೂ ಮಹಾನಗರ ಪಾಲಿಕೆ, ಬೆಸ್ಕಾಂ, ನಗರ ನೀರು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಅಗತ್ಯ. ಆದರೆ ಒಂದಕ್ಕೊಂದು ಇಲಾಖೆಗಳ ನಡುವೆ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಏನು ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಮತ್ತೊಂದು ಇಲಾಖೆಗೆ ತಿಳಿಯುತ್ತಿಲ್ಲ. ತಿಳಿದರೂ ಗೊತ್ತಿಲ್ಲದಂತೆ ಇದ್ದಾರೆ. ಹೀಗೆ ವಿವಿಧ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇದರ ಪರಿಣಾಮವನ್ನು ನಗರದ ನಾಗರಿಕರು ಅನುಭವಿಸಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link