ಬೆಂಗಳೂರು:
ರಾಜಧಾನಿಯ ಶಾಸಕರ ಭವನದ ಬಳಿ ಗಿರೀಶ್ ಮಟ್ಟಣ್ಣವರ್ ಬಾಂಬ್ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ಬಗ್ಗೆ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗಳಿಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರು ನೀಡಿದ್ದಾರೆ. ಶಾಸಕರ ಭವನದ ಬಳಿ ಬಾಂಬ್ ಇಟ್ಟಿದ್ದ ಪ್ರಕರಣವನ್ನು ಮರುತನಿಖೆ ನಡೆಸಬೇಕು ಹಾಗೂ NIA ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿರುವ ಪ್ರಶಾಂತ್ ಸಂಬರಗಿ ತಾವೇ ಬಾಂಬ್ ತಯಾರಿಸಿ ಇಟ್ಟಿದ್ದಾಗಿ ಒಪ್ಪಿಕೊಂಡಿರುವ ರೀತಿಯಲ್ಲಿ ಗಿರೀಶ್ ಮಟ್ಟಣ್ಣವರ್ ಹೇಳಿರುವ ಹಲವು ವಿಡಿಯೋಗಳನ್ನು ದಾಖಲೆ ರೂಪದಲ್ಲಿ ನೀಡಿದ್ದಾರೆ.
ಪ್ರಕರಣ ಈಗಾಗಲೇ ಕೋರ್ಟ್ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣ ಖುಲಾಸೆಯಾದ ಬಳಿಕವೂ ಹಲವು ಸಂದರ್ಭಗಳಲ್ಲಿ ಈ ಕುರಿತು ಮಟ್ಟಣ್ಣವರ್ ಮಾತನಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ತಿಳಿಸಿದ್ದಾರೆ.








