ಮುಂಬಯಿ:
ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ರೋಹಿತ್ ಶರ್ಮ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಸಿಯೆಟ್ ಕ್ರಿಕೆಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್, ಚಾಂಪಿಯನ್ಸ್ ಟ್ರೋಫಿ ತಂಡದ ಮೇಲೆ ನನಗೆ ಅಭಿಮಾನವಿತ್ತು ಎಂದಿದ್ದಾರೆ. ಜತೆಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಶ್ರೇಯವನ್ನು ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅರ್ಪಿಸಿದ್ದಾರೆ.
“ನೋಡಿ, ನಾನು ಆ ತಂಡವನ್ನು ಪ್ರೀತಿಸುತ್ತೇನೆ, ಅವರೊಂದಿಗೆ ಆಟವಾಡುವುದನ್ನು ಇಷ್ಟಪಟ್ಟೆ ಮತ್ತು ಇದು ನಾವೆಲ್ಲರೂ ಹಲವು ವರ್ಷಗಳಿಂದ ಅನುಭವಿಸಿದ ಪ್ರಯಾಣ” ಎಂದು ರೋಹಿತ್ ಹೇಳಿದರು. “ಇದು ಒಂದು ವರ್ಷ ಅಥವಾ ಎರಡು ವರ್ಷಗಳ ಕೆಲಸದ ಬಗ್ಗೆ ಅಲ್ಲ. ಇದು ಹಲವು ವರ್ಷಗಳಿಂದ ಕೆಲಸಕ್ಕೆ ಸೇರುವ ಬಗ್ಗೆ. ನಾವು ಆ ಟ್ರೋಫಿಯನ್ನು ಹಲವು ಬಾರಿ ಗೆಲ್ಲುವ ಹತ್ತಿರ ಬಂದಿದ್ದೇವೆ ಆದರೆ ನಾವು ಗೆರೆಯನ್ನು ದಾಟಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಎಲ್ಲರೂ ನಾವು ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದೇವೆ” ಎಂದರು.
“ಭಾರತದ ಯಶಸ್ಸು ದ್ರಾವಿಡ್ ಮತ್ತು ಅವರು ತಮ್ಮ ಪಾಲುದಾರಿಕೆಯ ಸಮಯದಲ್ಲಿ ಹುಟ್ಟುಹಾಕಿದ ಮನಸ್ಥಿತಿಯ ಬದಲಾವಣೆಯಿಂದ ಹುಟ್ಟಿಕೊಂಡಿತು” ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೋಚ್ ಗಂಭೀರ್ಗೆ ತಿರುಗೇಟು ನೀಡಿದರು.
ಈಗಾಗಲೇ ಅಂ.ರಾ. ಟಿ20, ಟೆಸ್ಟ್ಗೆ ನಿವೃತ್ತಿ ಘೋಷಿಸಿರುವುದರಿಂದ ರೋಹಿತ್ ಶರ್ಮಾರ ನಾಯಕತ್ವ ಯುಗಾಂತ್ಯ ಕಂಡಿದೇ ಎಂದೇ ವಿಶ್ಲೇಷಿಸಲಾಗುತ್ತಿದೆ. ಅವರಿಗೆ ಇನ್ನು ಏಕದಿನದಲ್ಲೂ ನಾಯಕರಾಗುವ ಅವಕಾಶ ಇಲ್ಲ. ಈವರೆಗೂ ಭಾರತ ರೋಹಿತ್ ನಾಯಕತ್ವದಲ್ಲಿ ಆಡಿದ 56 ಏಕದಿನದಲ್ಲಿ 42ರಲ್ಲಿ ಗೆದ್ದಿದೆ. 2 ಬಾರಿ ಏಷ್ಯಾಕಪ್, 1 ಬಾರಿ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದ್ದರೂ, 2027ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಗಿಲ್ಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.








