ಬೆಂಗಳೂರು:
ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪೂರ್ವ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ನೋಂದಣಿ ಕಾರ್ಯಕ್ಕೆ ಜೂನ್ 18ರಂದು ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಮೊದಲ ದಿನ 55 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದರೆ, ಎರಡನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿದೆ.
ಗೃಹ ಜ್ಯೋತಿ ಯೋಜನೆಗೆ ನೋಂದಣಿಗಳು ಎರಡನೇ ದಿನದಲ್ಲಿ ಗಣನೀಯವಾಗಿ ಹೆಚ್ಚಿದ್ದು, ಸುಮಾರು 1,06,958 ಜನರು ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಬೆಂಗಳೂರು ಒನ್, ಗ್ರಾಮಾ ಒನ್, ಬೆಸ್ಕಾಂ ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಜನರು ಸರ್ಕಾರದ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದರು. ಆದರೆ, ತಾಂತ್ರಿಕ ದೋಷಗಳು ಹಲವು ಸ್ಥಳಗಳಲ್ಲಿ ಗೊಂದಲ ಮತ್ತು ವಿಳಂಬವನ್ನು ಉಂಟುಮಾಡಿದವು. ಇದರಿಂದಾಗಿ ಜನರು ಸರತಿ ಸಾಲಿನಲ್ಲೇ ಎರಡು ಗಂಟೆಗಳ ಕಾಲ ಕಾಯಬೇಕಾಯಿತು.
ಅನೇಕ ಅರ್ಜಿದಾರರು ಭಾನುವಾರದಿಂದ ಆನ್ಲೈನ್ನಲ್ಲೇ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಲ್ಲೂ ತಾಂತ್ರಿಕ ದೋಷ ಎದುರಾಗಿದ್ದು, ಇದೀಗ ಸುದೀರ್ಘ ಸರತಿಯಲ್ಲಿ ನಿಲ್ಲುವಂತೆ ಮಾಡಿದೆ.ಈ ನೂಕುನುಗ್ಗಲನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಂದಿನ ತಿಂಗಳಿನಿಂದ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
ಗೃಹಜ್ಯೋತಿ ಸೌಲಭ್ಯ ಸಿಗುತ್ತೋ ಇಲ್ಲವೋ ಎಂದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ. ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ. ಅರ್ಜಿ ಸಲ್ಲಿಸಲು ನೂಕು ನುಗ್ಗಲಿನಲ್ಲಿ ತೆರಳುವ ಅವಶ್ಯಕತೆಯಿಲ್ಲ. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್ ಬಿಲ್ ಬರುವುದಿಲ್ಲ. ಆದರೆ, ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ನಮ್ಮ ಇಂಧನ ಸಚಿವರು ತಮಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಪ್ಪದೇ ಅರ್ಜಿ ಸಲ್ಲಿಸಿ, ಆತಂಕ ಪಡಬೇಡಿ ಎಂದಿದ್ದಾರೆ.
ಗ್ರಾಹಕರ ಬಳಕೆಯ ಆಧಾರದ ಮೇಲೆ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯು ಜುಲೈ ಬಳಕೆಗೆ ಅನ್ವಯಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
