ಅಂಗಡಿಗಳಿಗೆ ಮಳೆ ನೀರು ; ವ್ಯಾಪಾರಿಗಳಿಗೆ ಮತ್ತೊಂದು ಹೊಡೆತ!!

ಗುಬ್ಬಿ: 

      ಪಟ್ಟಣದಲ್ಲಿ ಜೂನ್ 2ರ ರಾತ್ರಿ ಬಾರಿ ಮಳೆ ಸುರಿಯಿತು. ಚರಂಡಿಗಳು ಕಟ್ಟಿ ಕೊಂಡಿದ್ದರಿಂದ ಮಳೆ ನೀರು ಅಂಗಡಿ ಮಳಿಗೆಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಪಟ್ಟಣದ ಹೆದ್ದಾರಿಯ ಎರಡು ಕಡೆಗಳಲ್ಲಿ ಇರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಇರುವುದರಿಂದ ರಾತ್ರಿ ಸುರಿದ ಮಳೆಯಿಂದ ರಭಸವಾಗಿ ನೀರು ಹರಿದು ಅಂಗಡಿ ಮಳಿಗೆಗಳಿಗೆ ನುಗ್ಗಿದೆ. ಅಂಗಡಿಯವರಿಂದ ಕಂದಾಯ ವಸೂಲು ಮಾಡುವ ಪಟ್ಟಣ ಪಂಚಾಯಿತಿಯವರು ಚರಂಡಿಗಳನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಡಬೇಕಾಗಿತ್ತು. ಪಟ್ಟಣ ಪಂಚಾಯಿತಿಯವರ ನಿರ್ಲಕ್ಷದಿಂದ ಈ ರೀತಿ ಅಂಗಡಿಗಳಿಗೆ ನೀರು ನುಗ್ಗಲು ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಪಟ್ಟಣ ಪಂಚಾಯಿತಿಯವರು ಹೆದ್ದಾರಿ ಪ್ರಾಧಿಕಾರದ ಮೇಲೆ, ಹೆದ್ದಾರಿಯವರು ಪಟ್ಟಣ ಪಂಚಾಯಿತಿಯವರ ಮೇಲೆ ದೂರುತ್ತಾ ಸೂಕ್ತ ಕ್ರಮವಹಿಸದಿದ್ದರಿಂದ ಚರಂಡಿಯ ನೀರು ಅಂಗಡಿಗಳಿಗೆ ನುಗ್ಗುಲು ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದರು. ಪ.ಪಂ.ನವರ ಬೇಜವಾಬ್ದಾರಿಗೆ ನಮಗೆ ನಷ್ಟವಾಗುತ್ತಿದೆ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿನ ಸುಮಾರು ಅಂಗಡಿಗಳಿಗೆ ನೀರು ನುಗ್ಗಿ ಸಾಮಾನು-ಸರಂಜಾಮುಗಳು ನೀರು ಪಾಲಾಗಿವೆ. ಅಂಗಡಿಗಳಿಗೆ ನುಗ್ಗಿದ್ದ ನೀರನ್ನು ಮೋಟಾರು ಪಂಪ್‍ನಿಂದ ಹೊರಗೆ ಹಾಕಿದರೂ ಇನ್ನೂ ಬರುತ್ತಲೇ ಇದೆ. ನಮಗೆ ಏನು ಮಾಡಬೇಕೆಂದು ದಿಕ್ಕೆ ತೋಚುತ್ತಿಲ್ಲ ಎಂದು ವ್ಯಾಪಾರಸ್ಥರು ತಮ್ಮ ಗೋಳು ತೋಡಿಕೊಂಡರು.

ನೆಲಮಹಡಿ ಅಂಗಡಿಗಳನ್ನು ಕಟ್ಟುವಾಗ ಅನುಸರಿಸಬೇಕಾದ ನಿಯಮಗಳನ್ನು ಅಂಗಡಿ ಮಾಲೀಕರು ಪಾಲಿಸದೆ ಇರುವುದರ ಜೊತೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ವ್ಯಾಪಾರಸ್ಥರು ತೊಂದರೆಯನ್ನು ಅನುಭವಿಸಿ ಲಕ್ಷಾಂತರ ರೂ ನಷ್ಟ ಮಾಡಿಕೊಳ್ಳುವಂತಾಗಿದೆ. ಇಂತಹ ಮಳಿಗೆಗಳಿಗೆ ಪಟ್ಟಣ ಪಂಚಾಯಿತಿಯವರು ಪರವಾನಿಗೆ ನೀಡುವಾಗ ಯಾವ ಕ್ರಮಗಳನ್ನು ಅನುಸರಿಸಿದ್ದರು? ಯಾವ ಆಧಾರದ ಮೇಲೆ ಪರವಾನಿಗೆ ನೀಡಲಾಗಿದೆ? ಎಂದು ಪ್ರಜ್ಞಾವಂತ ಸಾರ್ವಜನಿಕರು ಕೇಳುತ್ತಿದ್ದಾರೆ.

“ಚರಂಡಿ ಒಳಗೆ ಮರದ ಬೇರು ಅಡ್ಡ ಬಂದಿರುವುದರಿಂದ ನೀರು ಮೇಲೆ ನುಗ್ಗಿದೆ. ಹೆದ್ದಾರಿ ಅಧಿಕಾರಿಗಳಿಗೆ ಪತ್ರ ಬರೆದು ಚರಂಡಿ ಸ್ವಚ್ಛ ಗೊಳಿಸಿ ಕೊಡಲು ಸೂಚಿಸಲಾಗುವುದು”

– ಯೋಗೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap