ಗುಬ್ಬಿ :
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿಯಿಂದಾಗಿ ಪಾಚಿ ಕಟ್ಟಿ ಕಲುಷಿತಗೊಂಡಿರುವ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದು ಈ ನೀರು ಬಳಸಲು ಯೋಗ್ಯ ಇಲ್ಲದಿರುವ ಬಗ್ಗೆ ಗುಬ್ಬಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪನವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಹೇರೂರಿನ ಕೆರೆಯ ನೀರು ಸಂಗ್ರಹಗಾರ ಹಾಗೂ ಪಟ್ಟಣದ ನೀರು ಶುದ್ಧೀಕರಿಸುವ ಘಟಕಕ್ಕೆ ಭೇಟಿಕೊಟ್ಟು ಮಾತನಾಡಿದ ಅವರು ನ್ಯಾಯಾಧೀಶರುಗಳ ಮನೆಗಳಿಗೆ ಪಾಚಿ ಕಟ್ಟಿದ ನೀರು ಸರಬರಾಜಗುತ್ತಿದೆ ಎಂದರೆ ಸಾಮಾನ್ಯ ಜನಗಳ ಗತಿಯೇನು? ಎಂದು ಪ್ರಶ್ನಿಸಿ ಜನರ ಆರೋಗ್ಯದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಎಲ್ಲ ಸಾರ್ವಜನಿಕರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಜವಾಬ್ದಾರಿ ಪಟ್ಟಣ ಪಂಚಾಯಿತಿಯ ಅಧಿಕಾರಿಗಳದ್ದು, ಆಗಿರುವ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಿಕೊಂಡು ಕೊಳಚೆ ನೀರು ಕುಡಿಯುವ ನೀರಿನ ಜೊತೆ ಸೇರದಂತೆ ಎಚ್ಚರವಹಿಸಿ ಎಂದರಲ್ಲದೆ, ನೀರು ಸರಬರಾಜು ಮಾಡುವ ಕೊಳಾಯಿಗಳನ್ನು ಬದಲಾಯಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಸತ್ಯನಾರಾಯಣ್ ಅವರಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ ಪಟ್ಟಣದ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡುವಂತೆ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು. ಹೇರೂರು ಕೆರೆಯ ನೀರು ಸಂಗ್ರಹಗಾರಕ್ಕೆ ಪಟ್ಟಣದ ಬಡಾವಣೆಯಲ್ಲಿನ ಗಲೀಜು ನೀರು ಹೋಗುವಂತೆ ಮಾಡಿರುವುದು ಅಕ್ಷಮ್ಯ. ತಕ್ಷಣವೇ ವ್ಯವಸ್ಥೆಯನ್ನು ಸರಿಪಡಿಸಿ ಕೆರೆಯನ್ನು ಸ್ವಚ್ಛವಾಗಿಡುವಂತೆ ತಿಳಿಸಿದರು.
ಅನೇಕ ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕೆರೆಯ ನೀರು ಸಂಗ್ರಹಗಾರಕ್ಕೆ ಗಲೀಜು ನೀರು ಬರದಂತೆ ತಡೆಯುವಂತೆ ಮನವಿ ಸಲ್ಲಿಸಿದ್ದರೂ ಅವರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ನ್ಯಾಯಾಧೀಶರಿಗೆ ತಮ್ಮ ನೋವನ್ನು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ತಕ್ಷಣವೇ ಹೇರೂರು ಕೆರೆಯ ನೀರು ಸಂಗ್ರಹಗಾರಕ್ಕೆ ಗಲೀಜು ನೀರು ಸೇರದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ಶುದ್ಧವಾದ ನೀರು, ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯ. ಈಗಾಗಲೇ ಕೋವಿಡ್ ನಿಂದ ಜನರು ತತ್ತರಿಸಿರುವುದರ ಜೊತೆಗೆ ಅಶುದ್ಧ ನೀರು ಕೊಳಚೆ ವಾತಾವರಣ ಉಂಟುಮಾಡಿದರೆ ಜನರು ಬದುಕುವುದಾದರೂ ಹೇಗೆ ಎಂದು ಅಧಿಕಾರಿಗಳ ಮೇಲೆ ಗರಂ ಆದರು. ತಕ್ಷಣ ಸಮಸ್ಯೆ ಸರಿಪಡಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವರಾಜ್ ವಿ ಸಿದ್ದೇಶ್ವರ, ಅಧಿಕ ಸಿವಿಲ್ ನ್ಯಾಯಾಧೀಶರಾದ ಪ್ರೇಮಕುಮಾರ್, ಪ.ಪಂ ಮುಖ್ಯಾಧಿಕಾರಿ ಯೋಗೇಶ್, ಇಂಜಿನಿಯರ್ ಸತ್ಯನಾರಾಯಣ್, ಆರೋಗ್ಯಾಧಿಕಾರಿ ಜಯರಾಮ್, ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ನಾರಾಯಣ್ ಹಾಗೂ ಪ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
