ಗುಬ್ಬಿ :
ಹೇಮಾವತಿ ನಾಲೆಯಿಂದ ಹೇರೂರು ಕೆರೆಯ ನೀರು ಸಂಗ್ರಹಗಾರಕ್ಕೆ ನೀರು ತುಂಬಿಸಿಕೊಳ್ಳುವ ಕಾರ್ಯಕ್ಕೆ ಪಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ ಅವರು ಶುಕ್ರವಾರ ಚಾಲನೆ ನೀಡಿದರು. ನಂತರ ಹೇರೂರು ನೀರು ಸಂಗ್ರಹಗಾರವು ತುಂಬುವವರೆಗೆ ನಾಲಾ ವ್ಯಾಪ್ತಿಯ ರೈತರು ಯಾವುದೇ ಅಡ್ಡಿಪಡಿಸದಂತೆ ಅವರು ಮನವಿ ಮಾಡಿದರು.
ನಾಲೆಯ ನೀರಿನ ಜೊತೆಗೆ ಸದ್ಯ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕೆರೆ ಬೇಗ ತುಂಬುವ ಸಾಧ್ಯತೆ ಇದೆ. ಇದರಿಂದ ಪಟ್ಟಣದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತಾಗುವುದು ಎಂದು ಹೇಳಿದರು. ಹೇರೂರು ಕೆರೆಯಲ್ಲಿ ಪಟ್ಟಣಕ್ಕೆ ಸರಬರಾಜಾಗುವಷ್ಟು ನೀರನ್ನು ಸಂಗ್ರಹಿಸಿಕೊಳ್ಳುವ ಜೊತೆಗೆ ಈಗಾಗಲೇ ಅಗತ್ಯವಿರುವ ಕೊಳವೆ ಬಾವಿಗಳನ್ನು ಕೊರೆಸಿರುವುದರಿಂದ ಬೇಸಿಗೆಯಲ್ಲಿಯೂ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು. ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ವ್ಯವಸ್ಥಿತವಾಗಿ ಕುಡಿಯುವ ನೀರು ಸರಬರಾಜಾಗುವಂತೆ ನೋಡಿಕೊಳ್ಳಲಾಗುತ್ತದೆ. ತೊಂದರೆ ಇರುವ ಕಡೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಡಿವ ನೀರಿನ ವಿಷಯದಲ್ಲಿ ಯಾವುದೇ ತೊಂದರೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ಅಧ್ಯಕ್ಷರು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಯೋಗೀಶ್ ಅವರು ಮಾತನಾಡಿ ನೀರು ಶುದ್ಧೀಕರಣ ಘಟಕದಲ್ಲಿ ವ್ಯವಸ್ಥಿತವಾಗಿ ಶುದ್ಧೀಕರಣವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ತೊಂದರೆ ಇದ್ದರೂ ತಕ್ಷಣ ಸರಿಪಡಿಸಿ ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಪಪಂಯಿಂದ ಎಲ್ಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಸಿಬ್ಬಂದಿ ಉಪಸ್ಥಿತರಿದ್ದು, ಕೆಲವು ಕಡೆ ನಾಲೆಯನ್ನು ಸ್ವಚ್ಛಗೊಳಿಸಿ, ಸಂಗ್ರಹಗಾರದ ನೀರು ಕೆರೆಗೆ ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
