ಗುಬ್ಬಿ :
ಸಾರ್ವಜನಿಕರ ಜೇಬಿಗೆ ಕೈ ಹಾಕಿ ಹಣ ಪೀಕುವ ಪೊಲೀಸ್ ಅಧಿಕಾರಿಗಳಿಂದ ಅಪರಾಧ ಕೃತ್ಯಗಳ ಕಡಿವಾಣ ಸಾಧ್ಯವಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಪೊಲೀಸ್ ವೈಪಲ್ಯದ ಬಗ್ಗೆ ಮತ್ತೊಮ್ಮೆ ಪುನರುಚ್ಚರಿಸಿದರು.
ತಾಲ್ಲೂಕಿನ ಕಡಬ ಗ್ರಾಮದಲ್ಲಿ ರೇಣುಕಾಯಲ್ಲಮ್ಮದೇವಿ ದೇವಾಲಯದ ಕಲ್ಯಾಣ ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಡಬ ದಂಡಿನಮಾರಮ್ಮ ದೇವಾಲಯದಲ್ಲಿನ ಕಳವು ಪ್ರಕರಣ ಹಾಗೂ ತುರುವೇಕೆರೆ ಗಡಿ ಗ್ರಾಮಗಳಲ್ಲಿ ನಡೆದ ದೇವಾಲಯಗಳ ಕಳವು ಘಟನೆಗೆ ಬಗ್ಗೆ ಪ್ರತಿಕ್ರಿಯಿಸಿ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ವೈಪಲ್ಯದ ಬಗ್ಗೆ ಮಾತನಾಡಿದ್ದೇನೆ ಎಂದರು.
ಪ್ರಾಮಾಣಿಕ ಅಧಿಕಾರಿಗಳ ನೇಮಕ ಮಾಡುವ ಬದಲು ಸಾರ್ವಜನಿಕರ ಜೇಬಿಗೆ ಕೈ ಹಾಕುವ ಪೊಲೀಸ್ ಅಧಿಕಾರಿಗಳ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೆ. ಇಂತಹ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮಕ್ಕೆ ಎರಡು ಬಾರಿ ಚರ್ಚಿಸಿದ್ದೇನೆ. ಗುಬ್ಬಿ ವೃತ್ತ ನಿರೀಕ್ಷಕರು ಮತ್ತು ಉಪ ನಿರೀಕ್ಷಕರಿಗೂ ಎಚ್ಚರಿಕೆ ನೀಡಿದ್ದೇನೆ. ಮತ್ತೊಮ್ಮೆ ಸಾರ್ವಜನಿಕ ದೂರು ಬಂದಲ್ಲಿ ನಾನೇ ಖುದ್ದು ಠಾಣೆ ಮುಂದೆ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಸ್ಥಳೀಯ ಚುನಾವಣೆಗಳ ಮುಂದೂಡಿಕೆ ಸಮಂಜಸವಾಗಿದೆ. ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಎರಡೂ ಅವೈಜ್ಞಾನಿಕವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಸರ್ಕಾರ ಕ್ರಮವಹಿಸುತ್ತಿರುವುದು ಸ್ವಾಗತಾರ್ಹ ಎಂದರು.
ಪುನರ್ ವಿಂಗಡಣೆಯಲ್ಲಿ ಕೈಗೊಂಡ ಸರ್ವೆ ಕಾರ್ಯ ಮಾಹಿತಿ ಕೊರತೆಯಲ್ಲಿ ನಡೆದಿದೆ. 25 ಕಿಮೀ ದೂರದ ಹಳ್ಳಿಗಳನ್ನು ಕ್ಷೇತ್ರಕ್ಕೆ ಸೇರಿಸಿದ ನಿದರ್ಶನ ತಾಲ್ಲೂಕಿನಲ್ಲಿದೆ. ನಕ್ಷೆ ಪ್ರಕಾರ ಸರ್ವೆ ನಡೆಸಿದಾಗ ಕೆಲವು ಗ್ರಾಮಗಳು ಕೇವಲ 5 ಕಿಮೀ ದೂರ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ಭೌಗೋಳಿಕವಾಗಿ 25 ಕಿಮೀ ದೂರ ಕ್ರಮಿಸಬೇಕಾಗುತ್ತದೆ ಎಂಬುದು ತಿಳಿಯುವುದಿಲ್ಲ. ಇಂತಹ ನೂನ್ಯತೆ ಸರಿಪಡಿಸಬೇಕಿದೆ. ಶ್ರೀಗಂಧ ಕಳವು ಪ್ರಕರಣದ ದೊಡ್ಡ ಮಾಫಿಯಾಗಳು ಇರುವ ಬಗ್ಗೆ ತನಿಖೆ ನಡೆದಿದೆ. ಈ ದಂಧೆಯ ಮೂಲ ಹುಡುಕಿ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಗಂಗಮ್ಮ, ಪಟೇಲ್ ದೇವರಾಜ್, ಸಿ.ಕೆ.ಗೌಡ, ವೆಂಕಟರಾಮಯ್ಯ, ದರ್ಶನ್, ಕೆ.ಎನ್.ಬಾಲಕೃಷ್ಣ, ಚನ್ನಿಗರಾಮಯ್ಯ, ಯತೀಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
