ತುಮಕೂರು:
ಈಗಾಗಲೆ ತಿಳಿಸಿರುವಂತೆ ಸೋಮವಾರ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದು ಮತ್ತು ನಾಳೆ ತಾಲ್ಲೂಕಿನ ಹಲವು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಈಗಾಗಲೇ ಸ್ಪೀಕರ್ ಅವರ ಬಳಿ ಮಾತನಾಡಿದ್ದು ಸೋಮವಾರದ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುವೆ ಎಂದರು.
ಬಹಳ ವಿಶೇಷವಾಗಿ ಜಗಜೀವನ್ ರಾಮ್ ಕಟ್ಟಡ ನಿರ್ಮಾಣವಾಗಿದ್ದು, ಅತ್ಯುತ್ತಮ ಕೊಠಡಿ, ಅಡುಗೆ ಕೋಣೆ ಹಾಗೂ ಕೊಠಡಿಗಳಿದ್ದು ಸಣ್ಣಪುಟ್ಟ ಸಮಾರಂಭಗಳನ್ನು ಮಾಡಿಕೊಳ್ಳಲು ಇದು ಸಹಕಾರಿಯಾಗಲಿದೆ. ಡಿಎಸ್ಎಸ್ನ ಮುಖಂಡರುಗಳು ಸಭೆ-ಸಮಾರಂಭ ಮಾಡಲು ನಮಗೆ ಸ್ಥಳಾವಕಾಶವಿಲ್ಲವೆಂದು ಮೊದಲಿನಿಂದಲೂ ಹೇಳುತ್ತಿದ್ದರು.
ಕಾರ್ಯಕ್ರಮಗಳನ್ನು ಪ್ರವಾಸಿ ಮಂದಿರದಲ್ಲಿ ಮಾಡುವ ಹಾಗಾಗಿದ್ದು ಚುನಾವಣಾ ನೀತಿ ಸಂಹಿತೆ ಬಂದರೆ ಅಲ್ಲೂ ಮಾಡುವ ಹಾಗಿಲ್ಲ ಎಂಬ ಕೊರಗನ್ನು ನಾನಿಂದು ನಿವಾರಿಸಿದ್ದೇನೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ಕೆಲವರು ಅಡ್ಡಿಪಡಿಸುವುದು ಗುಬ್ಬಿಯಲ್ಲಿ ಸಾಮಾನ್ಯವಾಗಿದ್ದು ಈಗಲೂ ಕೆಲವರು ಈ ಕಾರ್ಯಕ್ರಮದಲ್ಲಿ ಕಪುö್ಪ ಬಟ್ಟೆ ಹಿಡಿದು ಪ್ರತಿಭಟಿಸಿರುತ್ತಾರೆ. ನಾನು ಯಾವಾಗಲೂ ಹಿಂದುಳಿದ ಸಮುದಾಯಗಳಿಗೆ ಬೆಂಬಲವಾಗಿದ್ದು ಈ ಕಟ್ಟಡ ಒಂದು ಶಕ್ತಿ ಕೇಂದ್ರವಾಗಿ ನಿರ್ಮಾಣವಾಗಿದೆ ಎಂದರು.
ಕಟ್ಟಡದ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರವುಗೊಳಿಸಿ ಕಟ್ಟಡಕ್ಕೆ ಅವಶ್ಯಕತೆ ಇರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈಗಾಗಲೇ ಆರಂಭವಾಗಿರುವ ಎಲ್ಲಾ ಕಾಮಗಾರಿಗಳು ಸಹ ಮುಂದುವರೆಯುತ್ತವೆ. ಅವುಗಳಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಜಗನ್ನಾಥ್, ಪಪಂ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯರಾದ ಸಿ.ಮೋಹನ್, ಜಿ.ಆರ್.ಶಿವಕುಮಾರ್ ಮುಖಂಡರಾದ ಕೊಡಿಯಾಲ ಮಹದೇವ, ಮಂಜುನಾಥ್, ನಿಟ್ಟೂರು ರಂಗಸ್ವಾಮಿ, ನಾಗರಾಜು, ನಾಗಭೂಷಣ್ ಸೇರಿದಂತೆ ಹಲವು ದಲಿತ ಮುಖಂಡರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/Untitled-22-1.jpg)