ಹಾಗೆ ಒಂದು ಮಾತು ..!

ಹದಗೆಟ್ಟ ಆರ್ಥಿಕ ಪರಿಸ್ಥಿತಿ: ಸುಧಾರಣಾ ಕ್ರಮಗಳೇನು?

 
ಕುಸಿತ… ಕುಸಿತ… ಕುಸಿತ…! ಎಲ್ಲಿದೆ ಆರ್ಥಿಕ ಕುಸಿತ? ಕೇವಲ ಒಂದೇ ದಿನದಲ್ಲಿ ಮೂರು ಸಿನಿಮಾ ವೀಕ್ಷಣೆಯಿಂದ ಬಾಕ್ಸ್ ಆಫೀಸ್‍ನಲ್ಲಿ 120 ಕೋಟಿ ರೂ. ಸಂಗ್ರಹವಾಗಿರುವ ಉದಾಹರಣೆಯೊಂದನ್ನು ಕೇಂದ್ರ ಸಚಿವರೊಬ್ಬರು ಮುಂದಿಡುತ್ತಾರೆ. ಎಲ್ಲಿದೆ ಆರ್ಥಿಕ ಕುಸಿತ ಎಂದು ಪ್ರಶ್ನಿಸುತ್ತಾರೆ.
 
   ಆರ್ಥಿಕ ಕುಸಿತ, ಬೆಲೆ ಹೆಚ್ಚಳ… ಇಂತಹ ವಿಷಯಗಳು ಎದ್ದು ಕಾಣುವುದು ವಿರೋಧ ಪಕ್ಷದಲ್ಲಿರುವವರಿಗೆ ಮಾತ್ರ ಎಂಬಂತಾಗಿದೆ. ಅದೇನೇ ಇರಲಿ, 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಒಂದು ದಿನಕ್ಕೆ 120 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ಹೇಳುವುದು ಹಾಸ್ಯಾಸ್ಪದವೇ ಸರಿ. ಅದಕ್ಕಾಗಿಯೇ ಇರಬೇಕು ಮರುದಿನವೇ ಅವರು ತನ್ನ ಹೇಳಿಕೆಯನ್ನು ಹಿಂಪಡೆದು ಬಿಟ್ಟರು.
    ಇಂತಹ ಬಾಲಿಶ ಹೇಳಿಕೆಗಳನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ನೀಡುವುದರಿಂದ ಈ ಮೊದಲೇ ಆಗಿರುವ ಗಾಯದ ಮೇಲೆ ಬರೆ ಎಳೆದಂತಲ್ಲವೆ? ಇದನ್ನೆಲ್ಲ ನೋಡಿದರೆ ಲೋಕಸಭಾ, ವಿಧಾನಸಭಾ ಚುನಾವಣೆ ಎದುರಿಸಿರುವ/ ಎದುರಿಸುತ್ತಿರುವ ಸಂದರ್ಭದಲ್ಲಿ ದಿನಂಪ್ರತಿ ಇಷ್ಟು ಸಾವಿರ ಕೋಟಿ ರೂ.ಗಳ ಹಂಚಿಕೆಯಾಗಿದೆ, ಇಂತಿಷ್ಟು ಹಣವನ್ನು ಹಂಚಿದ್ದೇವೆ, ಆರ್ಥಿಕ ಕುಸಿತ ಇದ್ದಿದ್ದರೆ ಇಷ್ಟೊಂದು ಹಣವನ್ನು ಹಂಚಲು ಸಾಧ್ಯವಾಗುತ್ತಿತ್ತೇ ಎಂದು ಹೇಳು ಸಮಯ ಬಂದರೂ ಬರಬಹುದು. ಈ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ ಜನಸಾಮಾನ್ಯರು ಅನುಭವಿಸುತ್ತಿರುವ ಆರ್ಥಿಕ ಕುಸಿತದಿಂದ ಎದುರಾಗಬಹುದಾದ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ಜನರೇ ಹುಡುಕಿಕೊಳ್ಳಬೇಕಾಗಿದೆ. 
     ಯಾವುದೇ ಉದ್ಯೋಗ ಸೃಷ್ಟಿಯಾಗಬೇಕಾದರೆ ಉದ್ದಿಮೆ ಆರಂಭಿಸಬೇಕು. ಅದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಇಂದಿನ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇರುವ ಉದ್ಯಮಗಳನ್ನು ಉಳಿಸಿಕೊಳ್ಳುವುದೇ ಕಷ್ಟ. ಇನ್ನು ಹೊಸ ಉದ್ದಿಮೆಗಳ ಸೃಷ್ಟಿ ಹೇಗೆ? ಬ್ಯಾಂಕುಗಳಂತೂ ಸಾಲ ನೀಡಲು ತಯಾರಾಗಿವೆ. ಆದರೆ ಬ್ಯಾಂಕುಗಳ ನಿಯಮಗಳನ್ನು ನೋಡಿದಾಗ ಉದ್ದಿಮೆ ಮಾಡಲು ಉತ್ಸುಕರಾಗಿರುವವರು ಕೂಡ ಹೈರಾಣಾಗಿ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಹಣ ಕೇಳೋಣ ಎಂದರೆ ಅಲ್ಲಿ ಹಣದ ಹರಿವೇ ಇಲ್ಲ.
 
     ಹಣ ಇರುವವರು ಹಣ ನೀಡುವ ಧೈರ್ಯ ಮಾಡುತ್ತಿಲ್ಲ. ಇದು ಹೊಸ ಉದ್ದಿಮೆಗಳ ಪ್ರಾರಂಭಕ್ಕೆ ಇರುವ ತೊಂದರೆ. ಆದರೆ ಹಾಲಿ ಇರುವ ಉದ್ದಿಮೆಗಳು ಬ್ಯಾಂಕ್‍ನಿಂದ ಸಾಲ ಪಡೆದು ವಹಿವಾಟು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಈಗಿನ ಆರ್ಥಿಕ ಕುಸಿತದ ಸುಳಿಯಲ್ಲಿ ದಿನನಿತ್ಯದ ಖರ್ಚುಗಳನ್ನು ಹುಟ್ಟಿಸಿಕೊಳ್ಳುವುದೇ ದುಸ್ಥರವಾಗಿದೆ. ಹೀಗಿರುವಾಗ ತಮ್ಮ ಬ್ಯಾಲೆನ್ಸ್‍ಶೀಟ್‍ಗಳಲ್ಲಿ ಲಾಭ ತೋರಿಸಿಕೊಳ್ಳಲು ಹೇಗೆ ಸಾಧ್ಯ? ಲಾಭ ಇಲ್ಲದ ಬ್ಯಾಲೆನ್ಸ್ ಶೀಟ್‍ಗಳನ್ನು ಬ್ಯಾಂಕಿಂಗ್ ನಿಯಮಗಳ ಪ್ರಕಾರ ಕೆಟ್ಟ ಬ್ಯಾಲೆನ್ಸ್ ಶೀಟ್‍ಗಳೆಂದು ಪರಿಗಣಿಸಲಾಗುತ್ತದೆ. ಇದರಿಂದ ತಮ್ಮ ಸಾಲದ ಮೇಲಿರುವ ಬಡ್ಡಿದರ ನಿರ್ಣಯ ಮಾಡುವ ರೇಟಿಂಗ್ ಕುಸಿತ ಹೆಚ್ಚಾಗುತ್ತಾ ಹೋಗುತ್ತದೆ. ಇದರ ಪರಿಣಾಮ ಸಿಬಿಲ್ ರೇಟಿಂಗ್ ಗಳ ಮೇಲೂ ಬೀಳುತ್ತದೆ. ಹಾಗೂ ಸಂಸ್ಥೆ ಪಡೆದಿರುವ ಓವರ್ ಡ್ರಾಪ್ಟ್ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. 
      ಈ ಪರಿಣಾಮವನ್ನು ನಿಯಂತ್ರಿಸಿಕೊಳ್ಳಲು ಸಂಸ್ಥೆಗಳು ಲಾಭವಿಲ್ಲದಿದ್ದರೂ ತಮ್ಮ ಬ್ಯಾಲೆನ್ಸ್ ಶೀಟ್‍ಗಳಲ್ಲಿ ಲಾಭ ತೋರಿಸಿಕೊಂಡು ಸಾಲಸೋಲ ಮಾಡಿಯಾದರೂ ಪರವಾಗಿಲ್ಲ ಆದಾಯ ತೆರಿಗೆ ಮತ್ತು ಇತರೆ ತೆರಿಗೆಗಳನ್ನು ಪಾವತಿಸುವ ಪರಿಸ್ಥಿತಿಗೆ ಬಂದುಬಿಟ್ಟಿವೆ. ಈ ಪರಿಸ್ಥಿತಿಯಲ್ಲಿ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಎಷ್ಟು ದಿನ ಇದನ್ನೇ ನಿಭಾಯಿಸಲು ಸಾಧ್ಯ? ಹೀಗೆಯೇ ಮುಂದುವರಿದರೆ ಉದ್ದಿಮೆಗಳು ನೆಲ ಕಚ್ಚುವುದಂತೂ ಸತ್ಯ. ಇವರಿಗೆ ಸಾಲ ನೀಡಿರುವ ಬ್ಯಾಂಕುಗಳ ಸ್ಥಿತಿಯೂ ಇದೇ ಆಗುತ್ತದೆ. ಪಿಎಂಸಿ ಬ್ಯಾಂಕ್ ರೀತಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಗೆ ಬಂದು ಅದರಲ್ಲಿ ಠೇವಣಿ ಇಟ್ಟಿರುವ ಸಾಮಾನ್ಯ ಜನ ಬೀದಿಗೆ ಬೀಳುವಂತೆ ಮಾಡುತ್ತವೆ.
 
        ಈ ಪರಿಸ್ಥಿತಿಯ ಅರಿವಿದ್ದರೂ ಸಹ ಸರ್ಕಾರವಾಗಲಿ, ಬ್ಯಾಂಕುಗಳಾಗಲಿ ಉದ್ದಿಮೆದಾರರ ಸಹಾಯಕ್ಕೆ ಬರುವುದೇ ಇಲ್ಲ. ಸಹಾಯಕ್ಕೆ ಬರಲು ಬ್ಯಾಂಕಿಂಗ್ ನಿಯಮಗಳೂ ಬಿಡುವುದಿಲ್ಲ. ಇದರಿಂದಾಗಿ ಹತ್ತಾರು ವರ್ಷ ಎಲ್ಲ ತೆರಿಗೆಗಳನ್ನು ನಿಖರವಾಗಿ ಪಾವತಿಸುತ್ತಾ ಬಂದು ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಪಾವತಿಸಲು ಸಾಧ್ಯವಾಗದೇ ಹೋದಾಗ ಅವನೊಬ್ಬ ಕಳ್ಳನೆಂಬಂತೆ ಬಿಂಬಿಸಿ ತೇಜೋವಧೆ ಆಗುವುದಂತೂ ಸತ್ಯ. ಎಲ್ಲ ವ್ಯವಹಾರಗಳು ಬ್ಯಾಂಕಿಂಗ್ ಅಕೌಂಟ್‍ನಲ್ಲೇ ವ್ಯವಹರಿಸುವುದಾದರೆ ನಾವು ನೀಡುವ ಲಂಚಗಳು ಮತ್ತು ಇತರೆ ಲೆಕ್ಕ ಕೊಡಲು ಸಾಧ್ಯವಾಗದ ಖರ್ಚುಗಳನ್ನು  ಬ್ಯಾಲೆನ್ಸ್ ಶೀಟ್‍ಗಳಲ್ಲಿ ತೋರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗುತ್ತದೆ ಅಲ್ಲವೆ? ಸಮಾಜದಲ್ಲಿರುವ ಇಂತಹ ಪಿಡುಗುಗಳು ನಿವಾರಣೆ ಆಗಬೇಕಿದೆ. ಇಂತಹ ವಿಷಯಗಳ ಬಗ್ಗೆ ಗಮನ ಹರಿಸದೆ ಜಾಣ ಕುರುಡುಗಳನ್ನೇ ಅನುಸರಿಸಿ ಅದನ್ನೇ ಪ್ರದರ್ಶಿಸುತ್ತಾ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ. 
        ಹಲವಾರು ಅಂಶಗಳು ಆರ್ಥಿಕ ಕುಸಿತಕ್ಕೆ ಹೊಣೆಗಾರಿಕೆಯಾದರೂ ಅವುಗಳನ್ನು ಯಾರೂ ಹೆಗಲ ಮೇಲೆ ಹೇರಿಕೊಳ್ಳಲು ತಯಾರಿಲ್ಲ. ಈ ಪರಿಸ್ಥಿತಿಯಲ್ಲಿ ಹಲವಾರು ಉದ್ದಿಮೆಗಳು ಬ್ಯಾಂಕಿಂಗ್ ಸಂಸ್ಥೆಗಳ ದೃಷ್ಟಿಯಲ್ಲಿ ಸಾಲ ನೀಡಲು ನೆಗೆಟೀವ್ ಪ್ರೋಫೈಲ್‍ಗಳಾಗಿ ಪರಿವರ್ತಿತವಾಗುತ್ತಿವೆ. ಈ ಉದ್ದಿಮೆಗಳು ನಾಳೆ ಸಂಸ್ಥೆ ನಡೆಸಲೂ ಆಗದೆ ಹೊಸ ಸಂಸ್ಥೆಯನ್ನು ಕಟ್ಟಲೂ ಆಗದೆ ಮೂಲೆ ಗುಂಪಾಗುತ್ತವೆ. ಇವುಗಳನ್ನೇ ನಂಬಿಕೊಂಡ ಉದ್ದಿಮೆದಾರರು, ಕಾರ್ಮಿಕರ ಬದುಕಿನ ಭವಿಷ್ಯವೇನು?  
ಆರ್ಥಿಕ ಕುಸಿತ ಪ್ರತಿ 10 ವರ್ಷಕ್ಕೊಮ್ಮೆ ಮರುಕಳಿಸುವ ಸಹಜ ಕ್ರಿಯೆ(ನ್ಯಾಚ್ಯುರಲ್ ಸೈಕಲ್).ಈ ಪ್ರಕ್ರಿಯೆ ವ್ಯಾಪಕವಾಗಿ ಎಲ್ಲ ದೇಶಗಳಲ್ಲೂ ಕಂಡುಬಂದರೆ ಅದನ್ನು ನಿಭಾಯಿಸಲು ಆರ್ಥಿಕ ತಜ್ಞರ ಸಹಾಯ ಪಡೆದು ಅಡ್ಡ ಪರಿಣಾಮಗಳು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು.
     ಆದರೆ ಆರ್ಥಿಕ ಕುಸಿತ ತಪ್ಪು ನೀತಿಗಳಿಂದಾದರೆ ಆ ನೀತಿಗಳಿಂದಲೇ ಈ ರೀತಿಯಾದಂತಹ ಪರಿಣಾಮ ಎದುರಿಸುತ್ತಿರುವುದು ಎಂದು ಗೊತ್ತಿದ್ದರೂ ಅದನ್ನು ಒಪ್ಪಿಕೊಳ್ಳದ ಮನಸ್ಥಿತಿ ಇದ್ದಾಗ ಇದಕ್ಕೆ ಚಿಕಿತ್ಸೆ ಕೊಡುವುದಾದರೂ ಎಲ್ಲಿಂದ?
ಈ ಪರಿಸ್ಥಿತಿ ಮುಂದುವರಿದು ಎಲ್ಲ ಉದ್ದಿಮೆಗಳನ್ನು ನಷ್ಟದ ಉದ್ದಿಮೆಗಳು  ಎಂದು ಘೋಷಣೆ ಮಾಡಿದರೆ ಉದ್ದಿಮೆಗಳು ಹಾಳಾಗಿ ಕೊನೆಗೆ ಬ್ಯಾಂಕುಗಳ ಬ್ಯಾಲೆನ್ಸ್‍ಶೀಟ್‍ಗಳು ಹಾಳಾಗಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡು ಸಾಲಕ್ಕೆ ನೀಡಿರುವ ಆಧಾರಗಳನ್ನು (ಸೆಕ್ಯೂರಿಟಿ) ಮುಟ್ಟುಗೋಲು ಹಾಕಿ ಬ್ಯಾಂಕುಗಳು ಅದನ್ನು ಲಿಕ್ವಿಡೇಟ್ ಮಾಡುವುದಾದರೂ ಹೇಗೆ? ಬರುವ ಅಲ್ಪಸ್ವಲ್ಪ ಲಾಭಗಳಿಂದ ಎಷ್ಟು ದಿನ ಬ್ಯಾಂಕುಗಳ ವ್ಯವಹಾರ ನಿಭಾಯಿಸಲು ಸಾಧ್ಯ? ಇತ್ತೀಚಿನ ದಿನಗಳಲ್ಲಿ ಆಸ್ತಿ ಹರಾಜಿನ ಜಾಹಿರಾತುಗಳು ಪತ್ರಿಕೆಗಳಲ್ಲಿ ನಿತ್ಯ ಕಾಣಲು ಸಿಗುತ್ತಿವೆ.
    ಬ್ಯಾಂಕುಗಳಿಗೂ ಈ ಪರಿಸ್ಥಿತಿ ತಲೆನೋವಾಗಿ ಪರಿಣಮಿಸಿದೆ. ಉದಾಹರಣೆಗೆ ಈ ಹಿಂದಿನ ವರ್ಷಗಳಲ್ಲಿ ಎಲ್ಲಿ ತನ್ನ ಹೆಸರು ಪತ್ರಿಕೆಗಳಲ್ಲಿ ಬಂದು ಬಿಟ್ಟಿತೋ ಎಂಬ ಭಯದಲ್ಲಿ ಸಾಲ ಪಡೆದವರು ಹೆದರುವ ಪರಿಸ್ಥಿತಿ ಇತ್ತು. ಈಗ ಆ ಹೆದರಿಕೆ ಹೋಗಿ ನಿಸ್ಸಾಹಾಯಕ ಸ್ಥಿತಿಗೆ ತಲುಪಿದ್ದಾರಷ್ಟೇ.
     ಇದರ ಅಡ್ಡ ಪರಿಣಾಮಗಳಾಗಿ ಕೆಲವೊಂದು ಆತ್ಮಹತ್ಯೆಗಳು ನಡೆದು ಹೋಗಿವೆ. ಒಂದು ಒಳ್ಳೆಯ ಕೆಲಸ ಮಾಡುವಾಗ, ನಿಯಮ ರೂಪಿಸುವಾಗ ಕೆಲವರಿಗೆ ತೊಂದರೆಯಾಗುವುದು ಸಹಜ. ಈಗ ಕೆಲವರು ಮಾಡಿದ ಅಪರಾಧಗಳಿಂದ ಹಲವರು ಸಜೆ ಅನುಭವಿಸುವ ಪರಿಸ್ಥಿತಿ ಬಂದಿದೆ. ಅಂತಹ ಆರ್ಥಿಕ ಅಪರಾಧಗಳನ್ನು ನೋಟು ಅಮಾನ್ಯೀಕರಣದ ಹಿಂದೆಯೂ ಹಲವಾರು ಸಂಸ್ಥೆಗಳ  ಮೂಲಕ ರೈಡ್‍ಗಳ ಹೆಸರಿನಲ್ಲಿ ಹಿಡಿಯಲಾಗುತ್ತಿತ್ತು. ನೋಟು ಅಮಾನ್ಯೀಕರಣದ ನಂತರವೂ ಈ ರೇಡ್ ಮುಂದುವರೆದಿದೆ. ಹಾಗಿದ್ದಾಗ ನೋಟ್ ಬ್ಯಾನ್ ನಂತಹ ಕ್ರಮ ಯಾವ ಪುರುಷಾರ್ಥಕ್ಕೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ನೋಬೆಲ್ ಪ್ರಶಸ್ತಿ ಪಡೆದ ಆರ್ಥಿಕ ತಜ್ಞರಿಗೂ ಇದು ಯಕ್ಷಪ್ರಶ್ನೆಯಾಗಿದೆ. 
     ಇದು ಹೇಗಾಯಿತು ಅಂದರೆ, `ನೆಗಡಿ ಬಂದಿದೆ ಎಂದರೆ ಮೂಗನ್ನೇ ಕತ್ತರಿಸಿಕೊಂಡಂತೆ’ ವ್ಯಾಪಾರ ವ್ಯವಹಾರ ನಡೆಯುವುದು ಆಯಾ ಪ್ರದೇಶದ ಭಾವನೆಗಳಿಂದ (ಸೆಂಟಿಮೆಂಟ್). ಉದ್ದಿಮೆ ಆರಂಭಿಸುವುದು, ನಿವೇಶನ ಖರೀದಿಸುವುದು ಇವೆಲ್ಲವು ಈ ಭಾವನಾತ್ಮಕ ಸಂಬಂಧಗಳಿಗೆ ಒಂದಕ್ಕೊಂದು ಪೂರಕ.
 
      ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾವನೆಗಳು ನಿವೇಶಕರಲ್ಲೂ ಇಲ್ಲ, ಖರೀದಿದಾರರಲ್ಲೂ ಇಲ್ಲ. ಹಣದ ಚಲಾವಣೆಯೇ ಇಲ್ಲವೆಂದಾದಾಗ ಆದಾಯ ಎಲ್ಲಿಂದ ಸೃಷ್ಟಿಯಾದೀತು? ಉದಾಹರಣೆಗೆ ಒಂದು ಸಾವಿರ ರೂ.ಗಳು ಇಪ್ಪತ್ತು ಪ್ರತಿಶತ ಲಾಭಾಂಶ ಒಳಗೊಂಡು ಹತ್ತು ಜನರ ಕೈ ಬದಲಾವಣೆಯಾದಾಗ ಎರಡು ಸಾವಿರ ರೂ.ಗಳಾಗುತ್ತದೆ. (1000 x 20 %)=200×10 ಜನ =2000). ಹೀಗೆ ಚಲಾವಣೆಯಾದ ಒಂದು ಸಾವಿರ ರೂ.ಗಳು ಮೂರು ಸಾವಿರ ರೂ.ಗಳಿಗೆ ತನ್ನ ಮೌಲ್ಯ ಹೆಚ್ಚಿಸಿಕೊಂಡು 2000 ರೂ. ಲಾಭ ಗಳಿಕೆ ಸಾಧ್ಯವಾಗುತ್ತದೆ.
     ಒಂದು ವೇಳೆ ಇದೇ ಒಂದು ಸಾವಿರ ರೂ. ಇದ್ದಲ್ಲಿಯೇ ಉಳಿದು ಬಿಟ್ಟರೆ ಅದರ ಮೌಲ್ಯ ಹೆಚ್ಚಳವಾಗದೆ ಅಷ್ಟಕ್ಕೇ ಸೀಮಿತವಾಗುತ್ತದೆ. ಈ ಉದಾಹರಣೆಯನ್ನೇ ಮುಂದಿಟ್ಟುಕೊಂಡು ನೋಡುವುದಾದರೆ ಸರ್ಕಾರ ಘೋಷಿಸಿರುವ ರೀತಿಯಲ್ಲಿ ದೇಶವು 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಕನಸು ಇನ್ನು 15 ವರ್ಷಗಳಾದರೂ ನನಸಾಗದು. 
ಬಾಂಗ್ಲಾ, ನೇಪಾಳದಂತಹ ಸಣ್ಣಪುಟ್ಟ ದೇಶಗಳು ನಮ್ಮ ದೇಶದ ಜಿ.ಡಿ.ಪಿ. ದರಕ್ಕಿಂತ ಹೆಚ್ಚು ಸಾಧನೆ ಗೈದಿರುವುದು ಕೆಲ ಕಾಲದ ಸಾಧನೆಯಷ್ಟೆ. ಆದರೆ ಭಾರತಕ್ಕೆ ಇರುವ ಸಂಪನ್ಮೂಲ, ಸಾಮಥ್ರ್ಯವನ್ನು ಆ ದೇಶಗಳಿಗೆ ಹೋಲಿಸಿದರೆ ಭವಿಷ್ಯದಲ್ಲಿ (ಐoಟಿg ಖಿeಡಿm)  ಆ ದೇಶಗಳನ್ನು ಹಿಂದಿಕ್ಕುವ ಎಲ್ಲಾ ಸಾಮಥ್ರ್ಯ ಭಾರತಕ್ಕಿದೆ.ಇರುವ ಸಂಪನ್ಮೂಲ ಸಾಧನಗಳನ್ನು ಬಳಸದೆ ತನ್ನ ಸಾಮಥ್ರ್ಯವನ್ನು ಕೇವಲ ಭಾವನೆಗಳಲ್ಲಿ ತೇಲಾಡಲು ಬಿಟ್ಟರೆ ಅಂತಹ ಸಣ್ಣ ಸಣ್ಣ ದೇಶಗಳು ಕೂಡ ನಮ್ಮನ್ನು ಓವರ್ ಟೇಕ್ ಮಾಡುವುದು ಖಚಿತ. 
      ಕೇಂದ್ರ ಸರ್ಕಾರಕ್ಕೆ ದೊಡ್ಡ ಬಹುಮತ ಇದ್ದರೂ ಸಕಾರಾತ್ಮಕ ಸುಧಾರಣೆಯನ್ನು ಬಿಟ್ಟು ನಕಾರಾತ್ಮಕ ಸುಧಾರಣೆಗಳತ್ತ ನೋಡುತ್ತಿದೆ. ನಮ್ಮದೇ ದೇಶದ ಅರ್ಥಶಾಸ್ತ್ರಜ್ಞರು ನೋಬೆಲ್ ಪ್ರಶಸ್ತಿ ಪಡೆಯುವ ಸಾಮಥ್ರ್ಯ ಹೊಂದಿದ್ದಾರೆ. ಅಂತಹ ತಜ್ಞರ ಮಾತುಗಳನ್ನು ಕೇಳಿಸಿಕೊಳ್ಳಲಾಗದಂತಹ ಸಾಹಸ ಏಕೆ? ಒಂದು ವೇಳೆ ಕೇಳಿಸಿಕೊಳ್ಳುವುದು ಬೇಡ ಎಂದಾದರೆ ತನ್ನ ಬತ್ತಳಿಕೆಯಲ್ಲಾದರೂ ಸುಧಾರಣೆಯ ಅಸ್ತ್ರಗಳು ಇರಬೇಕಲ್ಲ? ಅದನ್ನಾದರೂ ಬಳಸಬೇಕಲ್ಲವೆ? ಎಲ್ಲಾ ಸಮಸ್ಯೆಗಳಿಗೆ ಹಿಂದಿನ ಸರ್ಕಾಗಳು ಕಾರಣವಾಗಿದ್ದಕ್ಕೆ ಅವರುಗಳನ್ನು ಮನೆಗೆ ಕಳುಹಿಸಿ ಹೊಸ ಸರ್ಕಾರವನ್ನು ಜನತೆ ಆಶೀರ್ವದಿಸಿದ್ದಾರೆ. ಈಗ ಮಾಡಿ ತೋರಿಸುವ ಸಾಮಥ್ರ್ಯವಿದೆ. ಹಿಂದಿನ ಸರ್ಕಾರಗಳನ್ನು ದೂಷಿಸುತ್ತಾ ಸಮಯ ಕಳೆಯುವ ಬದಲು ತಮ್ಮಲ್ಲಿರುವ ಸಾಮಥ್ರ್ಯವನ್ನು ತೋರಬಹುದಲ್ಲವೆ?

ಟಿ ಎನ್ ಮಧುಕರ್

ಸಹ ಸಂಪಾದಕರು ,ಪ್ರಜಾಪ್ರಗತಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link