ಹುಬ್ಬಳ್ಳಿ
ಹೆಸ್ಕಾಂನ ಹುಬ್ಬಳ್ಳಿಯ ಉಗ್ರಾಣದಲ್ಲಿ ನಡೆದ 51 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸ್ಕಾಂನ ಲೆಕ್ಕಾಧಿಕಾರಿ ಸೇರಿದಂತೆ ಐವರನ್ನು ಅಮಾನತು ಮಾಡಲಾಗಿದೆ.
ಲೆಕ್ಕಾಧಿಕಾರಿ ಬೆಂಜಮಿನ್ ಮಸ್ಕನರ್ಸ್, ಸಹಾಯಕ ಲೆಕ್ಕಾಧಿಕಾರಿ ಯು.ಎಸ್.ಉಳ್ಳಾಗಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ವಿಶ್ವನಾಥ ಶಿರಹಟ್ಟಿಮಠ, ವಸಂತಕುಮಾರ ರಾಠೋಡ, ಅಂಜಿನಪ್ಪ ಬಿ, ಅಮಾನತುಗೊಂಡವರು.
ಅವ್ಯವಹಾರದ ಕುರಿತು ತನಿಖೆ ನೆಡೆಸಲು ಐವರು ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡ ಮೂರು ವರ್ಷ ತನಿಖೆ ನಡೆಸಿ, ಮಧ್ಯಂತರ ವರದಿ ಸಲ್ಲಿಸಿದ್ದು, ಅದರನ್ವಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಐವರನ್ನು ಅಮಾನತುಗೊಳಿಸಿ ಅದೇಶಿಸಿದ್ದಾರೆ
ಬಸವರಾಜ್ ಮರಳಿಮಠ ಅವರು2007 ರಿಂದ 2023 ರ ಜುಲೈ 31 ರವರೆಗೆ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ನಗರದ ವಿಭಾಗ ಮತ್ತು 2014 ರಿಂದ 2023 ಜುಲೈ 31ರವರೆಗೆ ಗ್ರಾಮೀಣ ವಿಭಾಗದ ಹುಬ್ಬಳ್ಳಿಯ ಉಗ್ರಾಣದಲ್ಲಿ ಉಗ್ರಾಣ ಪಾಲಕರಾಗಿ ನಿವೃತ್ತರಾಗಿದ್ದಾರೆ. ಈ ಅವಧಿಯಲ್ಲಿ ಅವ್ಯಹಾರ ನಡೆದಿರುವ ಬಗ್ಗೆ ಹೆಸ್ಕಾಂಗೆ ದೂರು ಸಲ್ಲಿಕೆಯಾಗಿತ್ತು.
ಬಸವರಾಜ ಮಳಿಮಠ ಅವರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ 51,69,49,054 ಮೌಲ್ಯದ ಸಾಮಗ್ರಿಗಳನ್ನು ದುರುಪಯೋಗ ಪಡಿಸಿಕೊಂಡು, ಕಂಪನಿಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮಾನತ ಗೊಂಡಿರುವ ಆರೋಪಿಗಳು ತಮ್ಮ ಅವಧಿಯಲ್ಲಿ ಹುಬ್ಬಳ್ಳಿ ನಗರ ವಿಭಾಗದ ಉಗ್ರಾಣದಿಂದ ಗ್ರಾಮೀಣ ವಿಭಾಗದ ಉಗ್ರಾಣಕ್ಕೆ ಭೌತಿಕವಾಗಿ ಸಾಮಗ್ರಿಗಳನ್ನು ವರ್ಗಾಯಿಸದೆ ಸಾಮಗ್ರಿಗಳನ್ನು ಮತ್ತು ಅದರ ಮೊತ್ತದಷ್ಟು ಸರಕು ಪಟ್ಟಿ, ಸುಳ್ಳು ದಾಖಲೆ ಸೃಷ್ಟಿಸಿ ಅದರ ಮೊತ್ತವನ್ನು ದುರುಪಯೋಪಡಿಸಿಕೊಂಡು, ಅವ್ಯವಹಾರದಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ