ತುಮಕೂರು :
ತುಮಕೂರು ಜಿಲ್ಲೆ ಸಾಕಷ್ಟು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ, ಪೌರಾಣಿಕ ನೆಲೆಗಟ್ಟನ್ನು ಹೊಂದಿರುವ ಶ್ರೀಮಂತ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವತಂಹ ಜಿಲ್ಲೆ. ಇಂತಹ ತುಮಕೂರು ಜಿಲ್ಲೆಯನ್ನು ಬನರು, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಹೊಯ್ಸಳರು ಹೀಗೆ ಅನೇಕ ರಾಜ ಮನೆತನಗಳು ಆಳಿ ಅಳಿದು ಹೋಗಿವೆ. ಇವರು ನಾವು ಆಡಳಿತ ಮಾಡಿದ್ದೆವು ಎನ್ನುವುದಕ್ಕೆ ಅನೇಕ ಕುರುಹುಗಳನ್ನು ಕೂಡ ಬಿಟ್ಟು ಹೋಗಿದ್ದಾರೆ. ಅಂತಹ ಕುರುಹುಗಳಲ್ಲಿ ಇದೀಗ ಮಹತ್ವದ ದಾಖಲೆಯೊಂದು ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ.
ರಾಜ ಮಹಾರಾಜರು ಆಳ್ವಿಕೆ ಮಾಡಿ ಯುದ್ಧ ಮಾಡಿ ನಶಿಸಿಹೋಗುವ ಮುನ್ನ ಇದಕ್ಕೆ ಸಂಬಂಧಪಟ್ಟಂತಹ ವೀರ ಕಲ್ಲುಗಳ ಸ್ಥಾಪನೆ ಮತ್ತು ಶಾಸನಗಳನ್ನು ನಿರ್ಮಾಣ ಮಾಡುವಂಥದ್ದು ವಾಡಿಕೆ. ಅದೇ ರೀತಿಯಾಗಿ ಇದೀಗ ತುಮಕೂರು ಜಿಲ್ಲೆಯ ಗೂಳೆಹರವೇ ಗ್ರಾಮದಲ್ಲಿ ಇರುವಂತಹ ಶ್ರೀರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಶಾಸನವೊಂದು ಪತ್ತೆಯಾಗಿದ್ದು ಇದರಲ್ಲಿ ಹೊಯ್ಸಳರಿಗೆ ಸಂಬಂಧಪಟ್ಟಂತಹ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿದೆ.
ಕರ್ನಾಟಕವನ್ನು ಆಳಿದ ಅತ್ಯಂತ ಶ್ರೀಮಂತ ಮನೆತನಗಳಲ್ಲಿ ಹೊಯ್ಸಳ ರಾಜ ಮನೆತನವು ಕೂಡ ಒಂದು. ಇದಕ್ಕೆ ಸಂಬಂಧಪಟ್ಟಂತಹ ಹಲವಾರು ಶಾಸನಗಳ ಮತ್ತು ವೀರಕಲ್ಲುಗಳು ರಾಜ್ಯದ ಹಲವಾರು ಮೂಲೆ ಮೂಲೆಗಳಲ್ಲೂ ಕೂಡ ಸಿಗುತ್ತವೆ. ಅದೇ ರೀತಿಯಾಗಿ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಗೂಳೇಹರವಿ ಗ್ರಾಮದಲ್ಲೂ ಕೂಡ ಸಿಕ್ಕಿದೆ. ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವಾಗ. ಇದನ್ನು ದೇವರು ಚಾವಣಿಯಲ್ಲಿ ಈ ಹಿಂದಿನ ತಲೆಮಾರಿನ ಭಕ್ತರು ಬಳಕೆ ಮಾಡಿದ್ದರು. ಇತ್ತೀಚೆಗೆ ದೇವಸ್ಥಾನ ಜೀರ್ಣೋದ್ಧಾರ ಮಾಡುವಾಗ ಇದನ್ನು ಕೆಳಗೆ ಇಳಿಸಿದ್ದರು. ಇದರ ಮೇಲಿರುವಂತಹ ಲಿಪಿಗಳನ್ನು ಗಮನಿಸಿದ ಸ್ಥಳೀಯರು ಯಾವುದೋ ಶಾಸನ ಇರಬಹುದು ಎಂದು ದೇವಸ್ಥಾನದ ಮೂಲೆಯೊಂದರಲ್ಲಿ ಇರಿಸಿ ಬಿಟ್ಟಿದ್ದರು. ಆದರೆ ಇದು ಯಾವ ಶಾಸನ..? ಯಾರಿಗೆ ಸೇರಿದ್ದು..? ಇದರಲ್ಲಿ ಇರುವಂತಹ ವಿಚಾರ ಏನು ಎನ್ನುವುದು ಇಲ್ಲಿಯವರೆಗೂ ಪತ್ತೆ ಮಾಡುವಂತಹ ಪ್ರಯತ್ನವನ್ನು ಯಾವುದೇ ಇತಿಹಾಸಕಾರರು ಮಾಡಿರಲಿಲ್ಲ.
ಸ್ಥಳೀಯರು ಮತ್ತು ಗೂಳೇಹರವಿ ಉತ್ಸಾಹಿ ಯುವಕರಾದ ಮಧುಸೂದನ್ ಅವರು ಸಾಕಷ್ಟು ಇತಿಹಾಸಕಾರರನ್ನು ಕೂಡ ಸಂಪರ್ಕ ಮಾಡಿದ್ದರು. ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬೇಕು, ನಮ್ಮ ಊರಿನ ಇತಿಹಾಸವನ್ನು ಪಡೆದುಕೊಳ್ಳಬೇಕು ಎಂದು ಪ್ರಯತ್ನಪಟ್ಟಿದ್ದರು ಆದರೆ ಯಾವುದೂ ಕೂಡ ಪ್ರಯೋಜನ ಆಗಿರಲಿಲ್ಲ. ಇದೀಗ ಅಂತಿಮವಾಗಿ ಇತಿಹಾಸ ಸಂಶೋಧಕ ಮಧುಸೂದನ್ ಕೆ ಆರ್ ಅವರು ಗೂಳೇಹರವಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಇದ್ದ ಈ ಅಪ್ರಕಟಿತ ಶಾಸನವನ್ನು ಓದುವುದರ ಮೂಲಕ ಅದರಲ್ಲಿರುವ ಮಾಹಿತಿಯನ್ನು ರಾಜ್ಯದ ಜನತೆಯ ಮುಂದೆ ಇಟ್ಟಿದ್ದಾರೆ.
ಈ ಶಾಸನದ ಪ್ರಕಾರ ಹೊಯ್ಸಳರ 3ನೇ ವೀರ ಬಲ್ಲಾಳನ ಕ್ರಿ.ಶ. 1337 ರ ಕಾಲದ ಶಿಲಾಶಾಸನ ಎನ್ನಲಾಗಿದೆ. ಇದರಲ್ಲಿ ‘ಗಂಡರಗೂಳಿನಾಯಕನ ವಂಶಸ್ಥರು ಗ್ರಾಮದಲ್ಲಿ ಮಲಿದೇವರ’ ಅಂದರೆ ಒಂದು ಶಿವನ ದೇಗುಲದಕ್ಕೆ ದಾನ ನೀಡಿರುವ ಬಗ್ಗೆ ದಾಖಲಿಸಲಾಗಿದೆ.
