ತಿಪಟೂರು:
ಮೇಷ್ಟ್ರುಗಳಿಗೆ ವಿದ್ಯಾ ಮಂತ್ರಿ ಬಿ.ಸಿ.ನಾಗೇಶ್ ಪ್ರಶ್ನೆ…!
ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಪರೀಕ್ಷೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಶಿಕ್ಷಕರುಗಳು ಬಡ್ತಿಗಾಗಿ ನಡೆಯುವ ಪರೀಕ್ಷೇ ಭಯ ಪಡುತ್ತಿರುವುದು ಏಕೆ? ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿಕ್ಷಕರನ್ನು ಪ್ರಶ್ನಿಸಿದರು.
ನಗರದ ರಂಗ ಮಂದಿರಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಶಾಖೆ ವತಿಯಿಂದ ನಡೆದ ಶಾಲಾ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶೈಕ್ಷಣಿಕ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನಿಮ್ಮ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಶಿಕ್ಷರ ಬಡ್ತಿಗೆ ಸಂಬಂಧಿಸಿದಂತೆ ಈಗಿರುವ ಪರೀಕ್ಷೆಯನ್ನು ಬಿಟ್ಟು ನೇರವಾಗಿ ಬಡ್ತಿಯನ್ನು ನೀಡಿ ಎಂದು ತಿಳಿಸಿದ್ದಾರೆ. ದೇಶ ಅಭಿವೃದ್ಧಿಯಾಗಲು ಶಿಕ್ಷಣವೆ ಮೂಲ. ಆದರೆ ಇಂದು ಶಿಕ್ಷಕರುಗಳು ಪರೀಕ್ಷೆಗೆ ಹೆದರುತ್ತಿದ್ದಾರೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವರು ನುಡಿದರು.
ಎನ್ಇಪಿ ಟೀಕಾಕಾರರಿಗೆ ಟಾಂಗ್ :
ಶಿಕ್ಷಣವು ಆತ್ಮಸ್ಥೈರ್ಯವನ್ನು ತುಂಬುವಂತಿರಬೇಕು. ಹಳೆಯ ಮೆಕಾಲೆ ಶಿಕ್ಷಣ ನೀತಿಯಲ್ಲಿ ಇಂತಹ ನೈತಿಕ ಮೌಲ್ಯ, ಆತ್ಮಸ್ಥೈರ್ಯ, ವಿದ್ಯಾರ್ಥಿಯನ್ನು ಸ್ವಾಭಿಮಾನಿಯಾಗಿಸುವಂತಹ ಶಿಕ್ಷಣ ವ್ಯವಸ್ಥೆ ಇಲ್ಲ. ಈ ಅಂಶವನ್ನು ಸ್ವಾಮಿ ವಿವೇಕಾನಂದ ಮತ್ತು ಗಾಂಧಿಜೀಯವರು ತಮ್ಮ ಜೀವಿತಾವಧಿಯಲ್ಲೆ ಗುರುತಿಸಿದ್ದರು.
ಪ್ರಸ್ತುತ ಪ್ರಧಾನಿ ಮೋಧಿಯವರು ಕಸ್ತೂರಿ ರಂಗನ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ಜಾರಿಗೆ ತಂದು ಸಮಿತಿಯ ಶಿಫಾರಸ್ಸಿಯ ಆಧಾರದ ಮೇಲೆ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಈ ನೀತಿಯನ್ನು ಕೆಲವರು ನಾಗಪುರ್ ಶಿಕ್ಷಣ ನೀತಿ ಎಂದು ಟೀಕಿಸುತ್ತಿದ್ದಾರೆ. ಕಸ್ತೂರಿ ರಂಗನ್ ಅವರು ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್ ಅವರಿಗೂ ಸಲಹೆಗಾರರಾಗಿ ಕೆಲಸಮಾಡಿದ್ದಾರೆ ಎಂಬ ಅಂಶವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಟೀಕಿಸುವವರು ಅರಿಯಬೇಕಿದೆ ಎಂದು ಸಚಿವರು ತಿವಿದರು.
ಸರ್ಕಾರಿ ಶಾಲೆಗಳೆ ಸ್ಟ್ರಾಂಗು :
ಸರ್ಕಾರಿ ಶಾಲೆಗಳು ಪ್ರಚಾರದ ಕೊರತೆ ಹಾಗೂ ತಮ್ಮ ಮೇಲೆ ವಿಶ್ವಾಸವಿಲ್ಲದೆ ವಿದ್ಯಾರ್ಥಿಗಳನ್ನು ಸೆಳೆಯು ವಲ್ಲಿ ವಿಫಲರಾಗಿರುವುದರಿಂದಲೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಖಾಸಗಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ನೀಟ್, ಜೆಇ.ಇ ಪರೀಕ್ಷೆಯಲ್ಲಿ ಉತ್ತಿರ್ಣ ಆದರೂ ಸಾಕು ಅದನ್ನು ದೊಡ್ಡದಾಗಿ ಫ್ಲೆಕ್ಸ್ ಮಾಡಿಸಿ ಹಾಕುತ್ತಾರೆ.
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾದ 39 ಕನ್ನಡಿಗರಲ್ಲಿ 21 ಜನ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂಬುದು ಹೆಮ್ಮೆಯ ವಿಷಯ. ಇಂತಹ ವಿಷಯಗಳನ್ನು ಶಿಕ್ಷಕರು ಬಳಸಿಕೊಂಡು ತಮ್ಮ ಶಾಲೆಯ ಬಗ್ಗೆ ಧನಾತ್ಮಕವಾಗಿ ಪ್ರಚಾರ ಮಾಡಬೇಕು ಎಂದು ಶಿಕ್ಷಕ ವೃಂದಕ್ಕೆ ಮಂತ್ರಿಗಳು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ, ತಾಲ್ಲೂಕು ಅಧ್ಯಕ್ಷ ಜಯರಾಂ, ನಗರಸಭೆ ಅಧ್ಯಕ್ಷ ರಾಮ್ಮೋಹನ್, ನಗರಸಭಾ ಉಪಾಧ್ಯಕ್ಷ ಸೊಪ್ಪುಗಣೇಶ್, ಕರಾಸನೌ ಸಂಘದ ಅಧ್ಯಕ್ಷ ಹೆಚ್.ಇ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೋವಿಡ್ ಸಮಯದಲ್ಲಿ ಶಿಕ್ಷಕರು ತಮ್ಮ ಜೀವದ ಹಂಗನ್ನು ತೊರೆದು ಮಕ್ಕಳಿಗೆ ಪಾಠ ಮಾಡಿದ್ದಾರೆ ಹಾಗಾಗಿ ಅವರಿಗೆ ಶ್ಲಾಘಿಸುತ್ತಾನೆ. ಜೊತಗೆ ಮುಂದಿನ ಬಾರಿಯ ಶಿಕ್ಷಕರ ವರ್ಗಾವಣೆಯಲ್ಲಿ 15,000 ಮಂದಿ ನೂತನ ಶಿಕ್ಷಕರು ಸೇರ್ಪಡೆಗೊಳ್ಳುವುದರಿಂದ ಶೇ.25 ರಷ್ಟು ವರ್ಗಾವಣೆ ಪ್ರಕ್ರಿಯೆ ಸರಿದೂಗುತ್ತದೆ. ಆದರೂ ಈ ಬಾರಿಯ ವರ್ಗಾವಣೆಯ ನಂತರ ರಾಜ್ಯದ 1872 ಶಾಲೆಗಳಲ್ಲಿ ಶಿಕ್ಷಕರಿಲ್ಲದಂತಾಗಿದ್ದು, ಶಿಕ್ಷಕರ ನೇಮಕಾತಿ ಆಗುವವರೆಗೂ ಹಾಲಿ ಕರ್ತವ್ಯ ನಿರತ ಸ್ಥಳದಲ್ಲೆ ಇರುವಂತೆ ಶಿಕ್ಷಕರ ಮನವೊಲಿಸಲಾಗಿದೆ.
-ಬಿ.ಸಿ.ನಾಗೇಶ್, ಶಿಕ್ಷಣ ಸಚಿವರು
ಕೋವಿಡ್ ನಂತರ ಬದಲಾದ ಶಿಕ್ಷಕರು :
ಸೃಜನಶೀಲ ಅಧ್ಯಾಪನ ಕೇಂದ್ರದ ಮುಖ್ಯಸ್ಥ ಹಾಗೂ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮಾತನಾಡಿ, ಹಿಂದಿನ ಕಾಲದಲ್ಲಿ ಶಿಕ್ಷಕರೆಂದರೆ ಹೆಣವು ಹೆದುರುತ್ತಿತ್ತು ಎಂಬ ಮಾತಿತ್ತು. ಅಂದಿನ ಕಾಲದಲ್ಲಿನ ಶಿಕ್ಷಣ ಮತ್ತು ಶಿಕ್ಷಕರ ಮೇಲೆ ಜನ ಗೌರವ ಹೊಂದಿದ್ದರು. ಇಂದಿನ ಶಿಕ್ಷಣದಲ್ಲಿ ಈ ಗೌರವ ಮರೆಯಾಗುತ್ತಿರುವುದು ವಿಷಾದನೀಯ ಎಂದ ಅವರು, ಶಿಕ್ಷಕ ಸಮುದಾಯವು ಕೊರೋನಾ ಬಂದಾಗಿನಿಂದ ತಾಂತ್ರಿಕವಾಗಿ ಸಾಕಷ್ಟು ಬದಲಾಗಿದ್ದಾರೆ. ಪ್ರಸ್ತುತ ಎನ್ಇಪಿಯನ್ನು ಜಾರಿಗೆ ತರಲು ಸುಸಮಯ ಎಂದು ಕರ್ಜಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
