ತುಮಕೂರು :
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ, ಶಿರಾ ಹಾಗೂ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಆದೇಶ ಸರ್ಕಾರಿ ಇಲಾಖೆಗಳಲ್ಲೇ ದಾಖಲಾಗಿದ್ದು, ಅಲೋಕೇಷನ್ ಇಲ್ಲ ಎನ್ನುವ ಕಾನೂನು ಪಂಡಿತರು ಸರ್ಕಾರದ ದಾಖಲಾತಿಗಳನ್ನು ಸರಿಯಾಗಿ ಓದಲಿ ಎಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹಾಗೂ ಸುಪ್ರೀಂ ಕೋರ್ಟ್ ವಕೀಲರೂ ಆದ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಛೇಡಿಸಿದರು.
ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಸಹ ಮದಲೂರು ಕೆರೆಗೆ ನೀರು ಹರಿಸಲು ಅಲೋಕೇಷನ್ ಇಲ್ಲ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ ಸರ್ಕಾರಿ ದಾಖಲಾತಿಗಳನ್ನು ಬಿಡುಗಡೆ ಮಾಡಿದರು. ನೀರಿನ ಯೋಜನೆಗಳ ಬಗ್ಗೆ ಕನಿಷ್ಠ ಅರಿವೂ ಇಲ್ಲದವರು ಈ ರೀತಿ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಂತಿಮವಾಗಿ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ಶೋಭೆಯಲ್ಲ. ಯಾರಾದರೂ ಸರಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ತಾವು ಕಳ್ಳಂಬೆಳ್ಳ ಶಾಸಕನಾಗಿದ್ದಾಗಲೆ ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ಭಾಗಕ್ಕೆ ಹೇಮಾವತಿ ನೀರು ತರುವ ವಿಷಯದಲ್ಲಿ ಅಧ್ಯಯನ ಆರಂಭಿಸಿ ಹೋರಾಟಕ್ಕೆ ಇಳಿದೆ. 2004 ರಿಂದ ನಡೆದ ಹೋರಾಟಕ್ಕೆ 2009 ರಲ್ಲಿ ಜಯ ಸಿಕ್ಕಿತು. ಚಿಕ್ಕನಾಯಕನಹಳ್ಳಿಗೆ 0.8 ಟಿ.ಎಂ.ಸಿ. ಹಾಗೂ ಶಿರಾ ತಾಲ್ಲೂಕಿಗೆ 0.9 ಹೇಮಾವತಿ ನೀರು ಹರಿಸಲು ನಾನು ಸದನದ ಉಪನಾಯಕನಾಗಿದ್ದ ಸಂದರ್ಭದಲ್ಲಿ ತೀರ್ಮಾನಿಸಲಾಯಿತು. ಇದರ ವಿರುದ್ಧವೂ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಯಾರೂ ಸಹ ಚಕಾರ ಎತ್ತಲಿಲ್ಲ. ಇಂದು ನೀರಾವರಿ ಬಗ್ಗೆ ಮಾತನಾಡುವವರು ಆಗ ಎಲ್ಲಿ ಹೋಗಿದ್ದರು ಎಂದು ಟೀಕಾ ಪ್ರಹಾರ ನಡೆಸಿದರು.
ಮದಲೂರು ಕೆರೆಗೆ ನೀರು ಹರಿಸುವ ಹೋರಾಟ 2008ರ ನಂತರವೂ ಮುಂದುವರಿದು 2013ರಲ್ಲಿ ಯೋಜನೆಗೆ ಅಧಿಕೃತ ಚಾಲನೆ ದೊರಕಿತು. 2017ಕ್ಕೆ ಮುಕ್ತಾಯವಾಯಿತು. ಶಿರಾ ತಾಲ್ಲೂಕಿನ ಭಾಗಕ್ಕೆ ಬರುವ 0.8 ಟಿ.ಎಂ.ಸಿ. ನೀರಿನಲ್ಲಿ ಮದಲೂರು ಕೆರೆಯೂ ಸೇರ್ಪಡೆಯಾಗಿದೆ. ಹೀಗಿರುವಾಗ ಅಲೋಕೇಷನ್ ಇಲ್ಲ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಮಾಧ್ಯಮಗಳಿಗೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಯನ್ನು ಮದಲೂರು ಕೆರೆಗೆ ಜೋಡಣೆ ಮಾಡಿ ಅಲ್ಲಿಂದ ಮದಲೂರು ಸೇರಿದಂತೆ 11 ಕೆರೆಗಳಿಗೆ ನೀರು ಹಾಯಿಸಿ ಮಾರ್ಗಮಧ್ಯದ 43 ಗ್ರಾಮಗಳ ಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸಂಬಂಧ 59.88 ಕೋಟಿ ರೂ. ಗಳ ಅಂದಾಜು ಯೋಜನೆಗೆ 2009 ರಲ್ಲಿ ಸರ್ಕಾರ ಅನುಮೋದನೆ ನೀಡಿದೆ. ಇದನ್ನು ಮರೆಮಾಚುವುದೇಕೆ ಎಂದು ಪ್ರಶ್ನಿಸಿದರು.
2017 ರಲ್ಲಿ ಯೋಜನೆ ಮುಗಿದಾಗ ಸರ್ಕಾರದ ಪರಿಹಾರದ ಹಣ ತೆಗೆದುಕೊಳ್ಳಲೂ ಸಹ ಬಿಜೆಪಿ ಮುಖಂಡರು ಬಿಡಲಿಲ್ಲ. ಜನರನ್ನು ಎತ್ತಿಕಟ್ಟಿದರು. ಎರಡು ಪಟ್ಟು ಹೆಚ್ಚು ಪರಿಹಾರ ಕೇಳಿ ಎಂದರು. ಆದರೆ ನಾನು ಅವರು ಕೇಳಿದ್ದಕ್ಕಿಂತ ಇನ್ನೂ ಎರಡು ಪಟ್ಟು ಸೇರಿಸಿ ನಾಲ್ಕರಷ್ಟು ಹೆಚ್ಚು ಪರಿಹಾರ ಕೊಡಿಸುವಂತೆ ಮಾಡಿದೆ. ಇವರೆಲ್ಲ ಪ್ರತಿಭಟನೆಗೆ ಸೀಮಿತವಾಗಿ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಿದರು. ಆದರೂ ಬಿಡದೆ 2017 ರಲ್ಲಿ ನೀರು ಬಿಡಿಸುವಲ್ಲಿ ಯಶಸ್ವಿಯಾದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ಮುಖಂಡರುಗಳಾದ ಶಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಜಿಪಂ ಸದಸ್ಯ ಬೊಮ್ಮಣ್ಣ, ಅಮಾನುಲ್ಲಾಖಾನ್, ಡಿ.ಸಿ.ಅಶೋಕ್, ಎಚ್.ಸಿ.ಹನುಮಂತಯ್ಯ, ಈಶ್ವರಯ್ಯ, ಗುರುಮೂರ್ತಿ, ಸಂಜಯ್ ಜಯಚಂದ್ರ, ಹಾರೋಗೆರೆ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ಚೆಂಬಿನಲ್ಲಿ ನೀರು ತರ್ತಾರ ಎಂದಿದ್ರು :
ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೀರು ತರುವ ಯೋಜನೆಗಳಿಗೆ ಮುಂದಾದಾಗ ಈಗಿನ ಜಿಲ್ಲಾ ಉಸ್ತುವಾರಿ ಕಾನೂನು ಪಂಡಿತರು ನಮ್ಮನ್ನೆಲ್ಲ ಹಾಸ್ಯ ಮಾಡಿದ್ದರು. ಹುಳಿಯಾರಿನಲ್ಲಿ ಧರಣಿ ಕುಳಿತಿದ್ದಾಗ ಚೆಂಬಿನಲ್ಲಿ ನೀರು ತರ್ತಾರ ಎಂದಿದ್ದರು. ಯಾವತ್ತೂ ಈ ಪುಣ್ಯಾತ್ಮ ನೀರಿಗಾಗಿ ಹೋರಾಡಿದವರಲ್ಲ. ಬದಲಿಗೆ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದರು. ಇಂತಹವರು ಈಗ ನೀರಾವರಿ ಯೋಜನೆ, ಕಾನೂನುಗಳ ಬಗ್ಗೆ ಮಾತನಾಡುತ್ತಾರೆ. ನೀರು ಬಿಟ್ಟರೆ ಜೈಲಿಗೆ ಹೋಗ್ತೀರಾ ಎಂದು ಹೆದರಿಸುತ್ತಾರೆ.
-ಟಿ.ಬಿ.ಜಯಚಂದ್ರ, ಮಾಜಿ ಸಚಿವ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
